ಕೋಲ್ಕತಾ, ಜನವರಿ 09: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ.
ಜನವರಿ 19ರಂದು ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ವಿದ್ಯಾಸಾಗರ್ ವಿಶ್ವ ವಿದ್ಯಾಲಯದಲ್ಲಿ ಆಯೋಜನೆಗೊಂಡಿರುವ ಅಂತರ ಕಾಲೇಜು ಕ್ರಿಕೆಟ್ ಕಾರ್ಯಕ್ರಮಕ್ಕೆ ಗಂಗೂಲಿ ಅವರು ಮುಖ್ಯ ಅತಿಥಿಯಾಗಿ ಹೋಗಬೇಕಿದೆ.
ಆದರೆ, ಈ ಕಾರ್ಯಕ್ರಮಕ್ಕೆ ಹಾಜರಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೌರವ್ ಗಂಗೂಲಿ ಅವರ ತಾಯಿ ನಿರೂಪ ಅವರಿಗೆ ಹೆಸರಿಗೆ ಬಂದಿರುವ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಒಂದು ವೇಳೆ ಎಚ್ಚರಿಕೆಯನ್ನು ಮೀರಿ ಕಾರ್ಯಕ್ರಮಕ್ಕೆ ಹಾಜರಾದರೆ ನಿಮ್ಮ ಮಗನನ್ನು ನೀವು ಮತೆ ನೋಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಪತ್ರದ ಬಗ್ಗೆ ಪತ್ರಿಕ್ರಿಯೆ ನೀಡಿದ ಗಂಗೂಲಿ, ಜನವರಿ 7ರಂದು ಬೆದರಿಕೆ ಪತ್ರ ಬಂದಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿರುವ ಗಂಗೂಲಿ ಅವರು ಇನ್ನೂ ಕೂಡಾ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಪಶ್ಚಿಮ ಮಿಡ್ನಾಪುರದ ಎಸ್ಪಿ ಭಾರ್ತಿ ಘೋಶ್ ಹೇಳಿದ್ದಾರೆ. (ಪಿಟಿಐ)