ನವದೆಹಲಿ, ಜ. 3: ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೆಚ್ಚು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಭಾರತೀಯ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಅವರು ಆ ಸ್ಥಾನದಿಂದ ವಜಾಗೊಂಡಿದ್ದಾರೆ. ಠಾಕೂರ್ ಅವರಿಂದ ತೆರವಾಗಿರುವ ಮಂಡಳಿಯ ಅತ್ಯುನ್ನತ ಸ್ಥಾನಕ್ಕೆ ಗಂಗೂಲಿಯೇ ಸೂಕ್ತ ಎಂಬುದು ಗವಾಸ್ಕರ್ ಅಭಿಪ್ರಾಯವಾಗಿದೆ.[ಠಾಕೂರ್ ಅಮಾನತು, ಟ್ವಿಟ್ಟರ್ ನಲಿ ಮಿಶ್ರ ಪ್ರತಿಕ್ರಿಯೆ]
ತಮ್ಮ ಮಾತಿಗೆ ಮತ್ತಷ್ಟು ಸಮರ್ಥನೆಯನ್ನು ನೀಡಿದ ಗವಾಸ್ಕರ್, 1999ರಲ್ಲಿ ಭಾರತೀಯ ಕ್ರಿಕೆಟ್ ಮೇಲೆ ಮ್ಯಾಚ್ ಫಿಕ್ಸಿಂಗ್ ಎಂಬ ಕರಾಳ ಛಾಯೆ ಆವರಿಸಿತ್ತು. ಅಂಥ ಸನ್ನಿವೇಶದಲ್ಲೇ ಗಂಗೂಲಿಗೆ ಟೀಂ ಇಂಡಿಯಾ ನಾಯಕತ್ವ ನೀಡಲಾಗಿತ್ತು. ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ಗೆ ಗೌರವಾದರಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಇದೀಗ, ಭಾರತೀಯ ಕ್ರಿಕೆಟ್ ಮಂಡಳಿಯೂ ಇಕ್ಕಟ್ಟಿನಲ್ಲಿ ಸಿಲುಕಿರುವುದರಿಂದ ಇಂಥ ಸಮಯದಲ್ಲಿ ಗಂಗೂಲಿಯವರಿಗೆ ಬಿಸಿಸಿಐ ಚುಕ್ಕಾಣಿ ನೀಡಿದರೆ ಮಂಡಳಿಯು ಕಳೆದುಕೊಂಡಿರುವ ವರ್ಚಸ್ಸನ್ನು ಗಂಗೂಲಿ ಮರಳಿ ತರುವುದರಲ್ಲಿ ಎರಡು ಮಾತಿಲ್ಲ ಎಂದರು.[ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ವಜಾ]
ಸುಪ್ರೀಂ ತೀರ್ಪಿಗೆ ವಿಷಾದ: ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಈವರೆಗೆ ಆಗಿರುವ ಎಲ್ಲಾ ಬೆಳವಣಿಗೆಗಳು ಭಾರತೀಯ ಕ್ರಿಕೆಟ್ ಗೆ ಮಾರಕ ಎಂದು ಗವಾಸ್ಕರ್ ತಿಳಿಸಿದ್ದಾರೆ. ಜ. 2ರಂದು ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿರುವುದು ಜಗತ್ತಿನ ಮುಂದೆ ಬಿಸಿಸಿಐ ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ, ಇದೇ ವೇಳೆ, ಸುಪ್ರೀಂ ಕೋರ್ಟ್ ಏನೇ ಆದೇಶ ನೀಡಿದ್ದರೂ ನಾವು ಅದನ್ನು ಸ್ವೀಕರಿಸಲೇಬೇಕು ಎಂಬ ಸಾಂತ್ವನದ ಮಾತುಗಳನ್ನಾಡಿದರು.