ನವದೆಹಲಿ, ಜೂನ್ 16: ಭಾರತೀಯ ಕಾಲಮಾನದ ಪ್ರಕಾರ, ಗುರುವಾರ (ಜೂನ್ 15) ರಾತ್ರಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ ಭಾರತ ತಂಡಕ್ಕೆ ಹಲವಾರು ಹಾಲಿ ಮತ್ತು ಮಾಜಿ ಕ್ರಿಕೆಟಿಗರ ಅಭಿನಂದನೆಗಳು ಸಂದಿವೆ.
ಎಂದಿನಂತೆ ತಮಾಷೆಯಾಗಿ ಮಾತನಾಡುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮಾಡಿ, ಫೈನಲ್ ತಲುಪುವಲ್ಲಿ ಭಾರತ ತಂಡದ ಮಾಡಿದ ಪ್ರಯತ್ನ ಶ್ಲಾಘನೀಯ. ಫೈನಲ್ ಪಂದ್ಯವು 'ಮನೆ'ಯ ಪಂದ್ಯವಾಗಲಿದೆ. ಭಾನುವಾರ ವಿಶ್ವ ಅಪ್ಪಂದಿರ ದಿನವಾದ್ದರಿಂದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಅಪ್ಪ (ಭಾರತ) ಹಾಗೂ ಮಗ (ಪಾಕಿಸ್ತಾನ) ನಡುವಿನ ಪಂದ್ಯವಾಗಲಿದೆ ಎಂದಿದ್ದಾರೆ.
ಇನ್ನು, ಸಚಿನ್ ತೆಂಡೂಲ್ಕರ್ ಅವರು, ''ಟೀಂ ಇಂಡಿಯಾಕ್ಕೆ ಧನ್ಯವಾದಗಳು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಅವರ ಆಟ ಮೆಚ್ಚವಂಥದ್ದು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯಕ್ಕೆ ಶುಭಾಷಯಗಳು'' ಎಂದಿದ್ದಾರೆ.
ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಟ್ವೀಟ್ ನಲ್ಲಿ, ''ಬಾಂಗ್ಲಾದೇಶದ ವಿರುದ್ಧ ಜಯ ಗಳಿಸುವ ಮೂಲಕ ಗ್ರೀನ್ ಜೆರ್ಸಿ ತೊಟ್ಟು ಆಡುವ ತಂಡಗಳ ವಿರುದ್ಧ ಈ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಜಯ (ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ) ಗಳಿಸಿದಂತಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಯಲಿರುವ ಓವಲ್ ಕ್ರೀಡಾಂಗಣವು ಬ್ಲೂ ಜೆರ್ಸಿಯ ಮತ್ತೊಂದು ವಿಜಯೋತ್ಸವವನ್ನು ನೋಡಲಿದೆ'' ಎಂದು ತಿಳಿಸಿದ್ದಾರೆ.
''ಹತ್ತು ವರ್ಷಗಳ ನಂತರ, ಟಿ20 ವಿಶ್ವಕಪ್ ಫೈನಲ್ ಗೆದ್ದ ಮೇಲೆ ಭಾರತ- ಪಾಕಿಸ್ತಾನಗಳು ಮತ್ತೆ ಐಸಿಸಿಯ ಪ್ರಮುಖ ಟೂರ್ನಿಯೊಂದರಲ್ಲಿ ಮುಖಾಮುಖಿಯಾಗಿವೆ. ಕಮ್ ಆನ್ ಇಂಡಿಯಾ'' ಎಂದಿದ್ದಾರೆ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್.
ಇನ್ನು, ವಿವಿಎಸ್ ಲಕ್ಷ್ಮಣ್ ಅವರು, ''ಬಾಂಗ್ಲಾದೇಶದ ವಿರುದ್ಧ ಭಾರತ ಗಳಿಸಿದ್ದು ಕೇವಲ ಜಯವಲ್ಲ. ಅದೊಂದು ಪ್ರಕಟಣೆ. ಆ ಪಂದ್ಯದಲ್ಲಿ ಭಾರತ ತಂಡದ್ದು ಪಕ್ಕಾ ಪ್ರೊಫೆಷನಲ್ ಆಟ'' ಎಂದಿದ್ದಾರೆ.
ಹಾಲಿ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್, ''ಹಿಂದೆ ಆಡಿದ ತಂಡದ ವಿರುದ್ಧವೇ ಆಡುವ ಮತ್ತೊಂದು ಅವಕಾಶ. ಜೂನ್ 18ರ ಫೈನಲ್ ವರೆಗೆ ಕಾಯಲಾಗದ ತುಡಿತವಿದೆ'' ಎಂದಿದ್ದಾರೆ.