ನಿಧಾನ ರನ್ ಗತಿ ಸರಿಯಲ್ಲ
ಮೊದಲಿಗೆ ಹೇಳಬೇಕೆಂದರೆ, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಆರ್ ಸಿಬಿ, ಒಂದು ಸ್ಪರ್ಧಾತ್ಮಕ ಮೊತ್ತ ಪೇರಿಸದೇ ನಿಗದಿತ 20 ಓವರ್ ಗಳಲ್ಲಿ ಕೇವಲ 142 ರನ್ ಪೇರಿಸಿದ್ದು ಆರ್ ಸಿಬಿ ಸೋಲಿಗೆ ಮೊದಲ ಕಾರಣ. ಕೊಹ್ಲಿ, ಗೇಲ್ ಅಂಥವರು ಕ್ರೀಸ್ ನಲ್ಲಿದ್ದರೂ ರನ್ ಗತಿ ಸರಾಸರಿಯಾಗಿ ಕೇವಲ 7 ರನ್ ಮಾತ್ರವಿತ್ತು. ಟಿ20 ಮಾದರಿಯ ಪಂದ್ಯಗಳಲ್ಲಿಅದರಲ್ಲೂ ಮುಂಬೈನಂಥ ಬಲಿಷ್ಠ ತಂಡವನ್ನು ಎದುರಿಸುವಾಗ ಇಷ್ಟು ಕಡಿಮೆ ಮಟ್ಟದಲ್ಲಿ ಸರಾಸರಿ ರನ್ ರೇಟ್ ಹೊಂದುವುದು ಹಾಗೂ 142 ರನ್ ಗಳಷ್ಟು ಸಾಧಾರಣ ಮೊತ್ತ ಪೇರಿಸುವುದು ಸರಿಯಲ್ಲ.
ಎಬಿಡಿ ಕೂಡಾ ವೈಫಲ್ಯಕ್ಕೊಳಗಾದರು
ಈ ಪಂದ್ಯದಲ್ಲೂ ಕ್ರಿಸ್ ಗೇಲ್ (22 ರನ್) ಬೇಗನೇ ವಿಕೆಟ್ ಚೆಲ್ಲಿದ್ದು ಆರ್ ಸಿಬಿ ಮೊತ್ತ ಕುಸಿಯಲು ಮತ್ತೊಂದು ಕಾರಣ. ಅವರಿಂದಲೂ ಅರ್ಧಶತಕ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಅಸಲಿಗೆ, ಗೇಲ್ ಇನ್ನೂ ತಮ್ಮ ಎಂದಿನ ಫಾರ್ಮ್ ಗೆ ಮರಳಿಲ್ಲ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಅತ್ತ, ಎಬಿ ಡಿವಿಲಿಯರ್ಸ್ ಕೂಡಾ ಹೆಚ್ಚು ಆಡದೇ ಇದ್ದಿದ್ದು ತಂಡ ವೈಫಲ್ಯಕ್ಕೆ ಮತ್ತೊಂದು ಕಾರಣ. ಕೊಹ್ಲಿಯೊಬ್ಬರ ಅರ್ಧಶತಕದ ನೆರವಿನಿಂದ (62 ರನ್, 47 ಎಸೆತ, 5 ಬೌಂಡರಿ, 1 ಸಿಕ್ಸರ್) ಮಾತ್ರ ಆರ್ ಸಿಬಿಯ ಮೊತ್ತ 142ಕ್ಕೆ ಬಂದು ನಿಂತಿತಷ್ಟೇ. ಅಕಸ್ಮಾತ್ ಕೊಹ್ಲಿ ಕೂಡಾ ಬೇಗನೇ ಔಟಾಗಿದ್ದರೆ ಆರ್ ಸಿಬಿ ಮೊತ್ತ ಮತ್ತಷ್ಟು ಶೋಚನೀಯ ಮಟ್ಟಕ್ಕೆ ಕುಸಿಯುತ್ತಿತ್ತೇನೋ?
ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೇವಲ 7 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ಕೀರನ್ ಪೊಲಾರ್ಡ್ ಹೇಗೆ ವೀರೋಚಿತ ಆಟವಾಡಿ ಮುಂಬೈಗೆ ಗೆಲವು ತಂದರೋ ಹಾಗೆ, ಮಧ್ಯಮ ಕ್ರಮಾಂಕದಲ್ಲಿ ಆರ್ ಸಿಬಿ ಪರವಾಗಿ ಗಟ್ಟಿಯಾಗಿ ಕ್ರೀಸ್ ಗೆ ಕಚ್ಚಿಕೊಳ್ಳುವಂಥ ಬ್ಯಾಟ್ಸ್ ಮನ್ ಇಲ್ಲದಿರುವುದು ದುರಂತ.
ಬೌಲರ್ ಗಳ ಕೈಚಳಕ ನಡೆಯಲಿಲ್ಲ
ಇನ್ನು, ಮುಂಬೈ ಇಂಡಿಯನ್ಸ್ ಇನಿಂಗ್ಸ್ ಆರಂಭದಲ್ಲಿ ಆರ್ ಸಿಬಿಯ ಸ್ಟುವರ್ಟ್ ಬಿನ್ನಿ ಆರಂಭಿಕ ಜಾಸ್ ಬಟ್ಲರ್ ಅವರ ವಿಕೆಟನ್ನು ಬೇಗನೇ ಉರುಳಿಸಿದ್ದು ಹಾಗೂ ಸ್ಯಾಮ್ಯುಯೆಲ್ ಬದ್ರಿ ಚಕಚಕನೆ ಮುಂಬೈ ತಂಡದ ಮೂರು ವಿಕೆಟ್ (ಪಾರ್ಥೀವ್ ಪಟೇಲ್, ರೋಹಿತ್ ಶರ್ಮಾ, ಮೆಕ್ಲೆನಾಘನ್) ಕಬಳಿಸಿದ್ದು ಆರ್ ಸಿಬಿ ಅಭಿಮಾನಿಗಳಿಗೆ ಖುಷಿ ತಂದಿತು. ಆದರೆ, ಆ ಸಂಭ್ರಮಗಳು ಮತ್ತೆ ಮರುಕಳಿಸಲಿಲ್ಲ.
ಮಧ್ಯಮ ಕ್ರಮಾಂಕ ಹಿಡಿದಿಡಲು ಸಾಧ್ಯವಾಗಲಿಲ್ಲ
ಕೀರನ್ ಪೊಲಾರ್ಡ್ ಅವರನ್ನು ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಲು ಬಿಟ್ಟಿದ್ದು ದೊಡ್ಡ ತಪ್ಪಾಗಿ ಪರಿಣಮಿಸಿತು. ಏಕೆಂದರೆ, ಮಧ್ಯಮ ಕ್ರಮಾಂಕದಲ್ಲಿ ಆತ ಒಬ್ಬ ಬಲಿಷ್ಠ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಚಾರವೇ. ಹಾಗಿದ್ದರೂ, ಆತನಿಗೆ ಹೆಚ್ಚು ಆಡಲು ಅವಕಾಶ ಮಾಡಿಕೊಟ್ಟಿದ್ದು ಆರ್ ಸಿಬಿ ಪಾಲಿಗೆ ಮುಳುವಾಗಿದ್ದು ಸುಳ್ಳಲ್ಲ. ಅಲ್ಲದೆ, ಕೊಹ್ಲಿ ಪಡೆಯ ದುರ್ಬಲ ಬೌಲಿಂಗ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಅವರು, ತಮ್ಮ ತಂಡದ ಗೆಲುವಿಗೆ ಕಾರಣವಾದರು.
ಫೀಲ್ಡಿಂಗ್ ನಲ್ಲೂ ಕೊರತೆ
ಟೈಮಲ್ ಮಿಲ್ಸ್, ಯಜುವೇಂದ್ರ ಚಾಹಲ್, ಪವನ್ ನೇಗಿಯಂಥ ಪ್ರತಿಭಾನ್ವಿತ ಬೌಲರ್ ಗಳು ದುಬಾರಿಯಾಗಿ ಪರಿಣಿಸಿದ್ದು ಆರ್ ಸಿಬಿಗೆ ಮುಳುವಾಯಿತು. ಅದರಲ್ಲೂ ಇನಿಂಗ್ಸ್ ನ ಅಂತಿಮ ಓವರ್ ಗಳಲ್ಲಿ ಬಿಗಿಯಾದ ಅಥವಾ ಕಟ್ಟುನಿಟ್ಟಾದ ಬೌಲಿಂಗ್ ಪ್ರದರ್ಶಿಸಿದಲೇ ಇದ್ದಿದ್ದು, ಫೀಲ್ಡಿಂಗ್ ಕೊರತೆಗಳು ಆರ್ ಸಿಬಿ ತಂಡವನ್ನು ಸೋಲಿನ ದವಡೆಗೆ ಸಿಲುಕಿಸಿದವು.