ಚೆನ್ನೈ, ಮೇ.22: ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಉಡುಗೊರೆ ನೀಡುತ್ತಿದೆ.
ಬಿಸಿಸಿಐ ವಿತ್ತ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ನಾಲ್ವರು ಮಾಜಿ ಆಟಗಾರರಿಗೆ ತಲಾ 1.5 ಕೋಟಿ ರು ಗೌರವ ಧನ ನೀಡಲು ನಿರ್ಧರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಾಲಿ ಹಾಗೂ ಮಾಜಿ ಆಟಗಾರರ ಗೌರವ ಧನ, ಸಂಭಾವನೆ ಕುರಿತಂತೆ ಶ್ರೇಣಿಕೃತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದು ಮಹಿಳಾ ಕ್ರಿಕೆಟರ್ಸ್ ಗಳಿಗೂ ಈ ಬಾರಿಯಿಂದ ಅನ್ವಯವಾಗಲಿದೆ. ಮಹಿಳಾ ಕ್ರಿಕೆಟರ್ಸ್ ಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ ಎಂಬ ಕೊರಗು ಇದರಿಂದ ನೀಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ. [ಐಪಿಎಲ್ ವಿಶೇಷ ಪುಟ]
ಕಳೆದ ಎರಡು ವರ್ಷಗಳಲ್ಲಿ ಬಿಸಿಸಿಐ ಆದಾಯ ಡಬ್ಬಲ್ ಆಗಿದ್ದು, ಮಾಜಿ ಆಟಗಾರರು, ಕಿರಿಯ ಆಟಗಾರರು, ಮಹಿಳಾ ಕ್ರಿಕೆಟರ್ಸ್ ಗೆ ಲಾಭಾಂಶವನ್ನು ನೀಡಲಾಗುತ್ತಿದೆ. ಬಿಸಿಸಿಐ ಒಂದು ವೇಳೆ ನಷ್ಟ ಅನುಭವಿಸಿದರೂ ಆಟಗಾರರಿಗೆ ಶಾಶ್ವತ ಠೇವಣಿ ಮಾದರಿಯಲ್ಲಿ ಸಂಭಾವನೆ ನೀಡಲು ನಿರ್ಧರಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಕಾನೂನು ಸಮರಕ್ಕಾಗಿ ಸುಮಾರು 56 ಕೋಟಿ ರು ಮೊತ್ತವನ್ನು ಬಿಸಿಸಿಐ ಖರ್ಚು ಮಾಡಿದೆಯಂತೆ. ಐಪಿಎಲ್ ನ ಪ್ರಮುಖ ತಂಡ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೌಲ್ಯವನ್ನು 5 ಲಕ್ಷ ಎಂದು ಹೇಳಿಕೊಂಡಿರುವುದರ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚೆಯಾಗಿದೆ. ಅದರೆ, ಈ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯಾ ಸಿಂಧಿಯಾ ಹೇಳಿದ್ದಾರೆ.