ಗ್ರೇಟರ್ ನೋಯ್ಡಾ, ಸೆಪ್ಟೆಂಬರ್, 02 : ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹೊನಲು ಬೆಳಕಿನ ಪಿಂಕ್ ಬಾಲ್ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಇದರಿಂದ ಎರಡನೇ ಪಂದ್ಯ ಮಳೆಯಿಂದಾಗಿ ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ನಡುವಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಡ್ರಾದೊಂದಿಗೆ ಒಂದು ಪಾಯಿಂಟ್ ನಿಂದ ಯುವರಾಜ್ ಸಿಂಗ್ ನಾಯಕತ್ವದ ಇಂಡಿಯಾ ರೆಡ್ ತಂಡ ಒಟ್ಟು 7 ಪಾಯಿಂಟ್ಸ ಪಡೆದು ಫೈನಲ್ ಪ್ರವೇಶಿಸಿದೆ.
ಗುರುವಾರ 4ನೇ ದಿನವು 'ವರುಣನ ಆಟ' ಮುಂದುವರಿಯಿತು. ಹೀಗಾಗಿ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮೊದಲ ಮೂರು ದಿನವೂ ಮಳೆ ಸುರಿದಿದ್ದರಿಂದ ಸಂಪೂರ್ಣವಾಗಿ ಮೈದಾನದಲ್ಲಿ ನೀರು ತುಂಬಿಕೊಂಡಿದ್ದರಿಂದ ಆಟ ನಡೆಯಲಿಲ್ಲ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಬ್ಲೂ ಮೊದಲ ಇನಿಂಗ್ಸ್ನಲ್ಲಿ 78.2 ಓವರ್ಗಳಲ್ಲಿ 5 ವಿಕೆಟ್ಗೆ 285ರನ್ ಗಳಿಸಿತ್ತು. ಇಂಡಿಯಾ ಬ್ಲೂ ಪರ ಮಯಂಕ್ ಅಗರವಾಲ್ 92 ಮತ್ತು ಗಂಭೀರ್ 77 ರನ್ ಗಳಿಸಿ ಮಿಂಚಿದರು, ರೆಡ್ ತಂಡದ ಕುಲದೀಪ್ ಯಾದವ್ 78ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಚಿಂತಿಸುತ್ತಿದೆ. ಆದ್ದರಿಂದ ದುಲೀಪ್ ಟ್ರೋಫಿಯನ್ನು ಹೊನಲು ಬೆಳಕಿನಲ್ಲಿ ಆಯೋಜಿಸಿದೆ. ಈಗಾಗಲೇ ಉಳಿದ ದೇಶಗಳು ಹೊನಲು ಬೆಳಕಿನ ಟೆಸ್ಟ್ ಆಡಲು ಸಹಮತ ಸೂಚಿಸಿವೆ. (ಪಿಟಿಐ)