ವಿಶಾಖಪಟ್ಟಣ, ಮಾರ್ಚ್ 30 : ಅನುಭವಿ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರ (129) ಅಬ್ಬರದ ಶತಕದ ನೆರವಿನಿಂದ 42 ರನ್ ಗಳಿಂದ ಇಂಡಿಯಾ ಬ್ಲೂ ತಂಡವನ್ನು ಮಣಿಸಿ ತಮಿಳುನಾಡು ತಂಡ ದೇವಧರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ನಿಗದಿತ 50 ಓವರ್ ಗಳಲ್ಲಿ 303 ಬೃಹತ್ ಮೊತ್ತವನ್ನು ಪೇರಿಸಿತು. ಗೆಲುವಿನ ಗುರಿ ಬೆನ್ನಟ್ಟಿದ ಇಂಡಿಯಾ ಬ್ಲೂ ತಂಡ 46.1 ಓವರ್ ಗಳಲ್ಲಿ 261 ರನ್ ಗೆಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಡು 42 ರನ್ ಗಳಿಂದ ಸೋಲೊಪ್ಪಿಕೊಂಡಿತು.
11ನೇ ಓವರ್ ನಲ್ಲಿ ಕೇವಲ 39 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ತಮಿಳುನಾಡು ತಂಡವನ್ನು ಕಾರ್ತಿಕ್ ಹಾಗೂ ನಾರಾಯಣ್ (55) ಜೋಡಿ ನಾಲ್ಕನೇ ವಿಕೆಟ್ ಗೆ ಬರೋಬ್ಬರಿ 136 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.
91 ಎಸೆತಗಳನ್ನು ಎದುರಿಸಿ ದಿನೇಶ್ ಕಾರ್ತಿಕ್ 14 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ 129 ರನ್ ಬಾರಿಸಿ ಗಮನ ಸೆಳೆದರು. ನಾಯಕ ವಿಜಯ್ ಶಂಕರ್ 21, ಬಾಬಾ ಇಂದ್ರಜಿತ್ 31 ರನ್ ಗಳಿಸಿ ತಂಡಕ್ಕೆ ನೆರವಾದರು.
ಇಂಡಿಯಾ ಬ್ಲೂನ ದವಳ್ ಕುಲ್ಕರ್ಣಿ ಹತ್ತು ಓವರ್ ಗಳಲ್ಲಿ 39 ರನ್ ನೀಡಿ 5 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಇಂಡಿಯಾ ಬ್ಲೂ ತಂಡ, ನಾಯಕ ಪಾರ್ಥಿವ್ ಪಟೇಲ್ ವಿಕೆಟ್ ಕಳೆದುಕೊಂಡು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಬಳಿಕ ಶಿಖರ್ ಧವನ್ (45) ಮತ್ತು ಕನ್ನಡಿಗ ಮನೀಷ್ ಪಾಂಡೆ (24) ಜೋಡಿ 2ನೇ ವಿಕೆಟ್ ಗೆ 64 ರನ್ ಗಳಿಸಿತು.
ಗುರ್ ಕೀರಾತ್ ಸಿಂಗ್ 85 ಎಸೆತಗಳಲ್ಲಿ 64, ಜಂಗ್ಗಿ 36, ಹರ್ಪಿತ್ ಸಿಂಗ್ 36 ರನ್ ಗಳಿಸಿದರೂ ಕೊನೆಗೂ ತಂಡವನ್ನು ಗೆಲ್ಲಿಸುವಲ್ಲಿ ವಿಫಕರಾದರು.
ತಮಿಳುನಾಡು ಪರ ರಾಹೀಲ್ ಶಹಾ 3, ಮೊಹಮ್ಮದ್ ಹಾಗೂ ಸಾಯ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.