ವಿಶಾಖಪಟ್ಟಣ, ಮಾರ್ಚ್. 26 : ಆರಂಭಿಕ ಎಡಗೈ ದಾಂಡಿಗ ಶಿಖರ್ ಧವನ್ (128) ಅವರ ಅಬ್ಬರದ ಶತಕದ ನೆರವಿನಿಂದ ಇಂಡಿಯಾ ರೆಡ್ ತಂಡ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹರಭಜನ್ ಸಿಂಗ್ ನೇತೃತ್ವದ ಇಂಡಿಯಾ ಬ್ಲೂ ತಂಡವನ್ನು ಇಂಡಿಯಾ ರೆಡ್ 23ರನ್ ಗಳಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಪಾರ್ಥಿವ್ ಪಟೇಲ್ ಪಡೆ ಇಂಡಿಯಾ ಬ್ಲೂ 50 ಓವರ್ಗಳಲ್ಲಿ 8 ವಿಕೆಟ್ಗೆ 327ರನ್ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಇಂಡಿಯಾ ಬ್ಲೂ ದಿಟ್ಟ ಹೋರಾಟ ನಡೆಸಿತ್ತಾದರೂ 48.2 ಓವರ್ಗಳಲ್ಲಿ 304ರನ್ ಗಳಿಸಿ ಕೇವಲ 23 ರನ್ ಗಳಿಂದ ಸೋಲೊಪ್ಪಿಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ರೆಡ್ ತಂಡಕ್ಕೆ ನಾಯಕ ಪಾರ್ಥಿವ್ ಮತ್ತು ಧವನ್ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಶುರುವಿನಿಂದಲೇ ಬಿರುಸಿನ ಆಟಕ್ಕೆ ಮುಂದಾದ ಈ ಜೋಡಿ ಮೊದಲ ವಿಕೆಟ್ ಗೆ 16.2 ಓವರ್ಗಳಲ್ಲಿ 93ರನ್ ಜತೆಯಾಟ ನೀಡಿತು.
48 ಎಸೆತಗಳಲ್ಲಿ 9 ಬೌಂಡರಿ ಸಹಿತ 50 ರನ್ ಗಳಿಸಿದ್ದ ವೇಳೆ ಪಾರ್ಥಿವ್, ಸಿದ್ದಾರ್ಥ್ ಕೌಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದೇ ಓವರ್ನ ಕೊನೆಯ ಎಸೆತದಲ್ಲಿ ಸಿದ್ದಾರ್ಥ್, ಶ್ರೀವತ್ಸ ಗೋಸ್ವಾಮಿ (1) ಅವರನ್ನು ವಿಕೆಟ್ ಪಡೆದು ಇಂಡಿಯಾ ಬ್ಲೂ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಈ ಹಂತದಲ್ಲಿ ಅನುಭವಿ ಎಡಗೈ ಬ್ಯಾಟ್ಸ್ ಮನ್ ಧವನ್, ಇಶಾಂಕ್ ಜಗ್ಗಿ (53; 51ಎ, 6ಬೌಂ, 1ಸಿ) ಜೊತೆ ಅಮೂಲ್ಯ ಇನಿಂಗ್ಸ್ ಕಟ್ಟಿದರು. ಈ ಜೋಡಿ ಮೂರನೇ ವಿಕೆಟ್ ಗೆ 103ರನ್ ಕಲೆಹಾಕಿ ತಂಡಕ್ಕೆ ಆಸರೆಯಾದರು.
ಕಳಪೆ ಆಟದಿಂದಾಗಿ ರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದು ಕೊಂಡಿರುವ ಶಿಖರ್ ಬಿರುಸಿನ ಆಟದ ಮೂಲಕ ತಂಡದ ರನ್ ಗತಿಗೆ ವೇಗ ತುಂಬಿದರು. 128; 122ಎಸತಗಳನ್ನು ಎದುರಿಸಿ 13ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ನಿಂದ 128 ರಬ್ ಗಳಸಿ ಶಿಖರ್ ಧವನ್ ಶತಕದ ಸಂಭ್ರಮ ಆಚರಿಸಿದರು.
ಧವನ್ ಔಟಾದ ಬಳಿಕ ಹರ್ ಪ್ರೀತ್ ಸಿಂಗ್ (29), ಗುರುಕೀರತ್ ಸಿಂಗ್ (15) ಮತ್ತು ಅಕ್ಷರ್ ಪಟೇಲ್ (22) ವೇಗವಾಗಿ ರನ್ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿದರು.
ಗುರಿ ಬೆನ್ನಟ್ಟಿದ ಇಂಡಿಯಾ ಬ್ಲೂ ತಂಡ ಮನದೀಪ್ ಸಿಂಗ್ (17) ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. 12ನೇ ಓವರ್ನಲ್ಲಿ ಕರ್ನಾಟಕದ ಮಯಂಕ್ ಅಗರವಾಲ್ (34) ಕುಲವಂತ್ ಖೆಜ್ರೋಲಿಯಾಗೆ ವಿಕೆಟ್ ಒಪ್ಪಿಸಿದ್ದರಿಂದ ತಂಡದ ಸಂಕಷ್ಟ ಇನ್ನಷ್ಟು ಹೆಚ್ಚಿತ್ತು.
ಆದರೆ, ಅಂಬಟಿ ರಾಯುಡು 92ಎಸತಗಳಲ್ಲಿ, 8ಬೌಂಡರಿ ಹಾಗೂ 2ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ತಂಡದ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು.
ಮನೋಜ್ ತಿವಾರಿ (37), ರಿಷಭ್ ಪಂತ್ (20), ಕೃಣಾಲ್ ಪಾಂಡ್ಯ (31) ಮತ್ತು ದೀಪಕ್ ಹೂಡಾ (46) ಅಬ್ಬರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.