ಮೀರತ್, ಆಗಸ್ಟ್ 10: ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಅವರ ತಂದೆಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಭೂಮಿ ಖರೀದಿ ಸಂಬಂಧಿಸಿದಂತೆ ವ್ಯಾಜ್ಯ ಉಂಟಾಗಿದ್ದರಿಂದ ಭುವನೇಶ್ವರ್ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಅವರು ಮೀರತ್ ಜಿಲ್ಲೆಯ ಇಂಚೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.[ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ]
ಕಿರಣ್ ಪಾಲ್ ಸಿಂಗ್ ಅವರು ನೀಡಿದ ದೂರಿನಲ್ಲಿ ಹೇಳಿರುವ ಪ್ರಕಾರ ಇತ್ತೀಚೆಗೆ ಭುವನೇಶ್ವರ್ ಕುಮಾರ್ ಹಾಗೂ ಕಿರಣ್ ಪಾಲ್ ಸಿಂಗ್ ಅವರು ಜಮೀನು ಖರೀದಿಸಿದ್ದರು. 80 ಲಕ್ಷ ರು ಗಳಿಗೆ ಡೀಲ್ ಆಗಿತ್ತು. ಬುಲಂದ್ ಷರ್ ಜಿಲ್ಲೆಯ ನಿವಾಸಿ ರಣವೀರ್ ಸಿಂಗ್ ಅವರ ಜೊತೆ ಡೀಲಿಂಗ್ ನಡೆದಿತ್ತು. ಅದರೆ, ಸದ್ಯಕ್ಕೆ ರಣವೀರ್ ಸಿಂಗ್ ಯಾವುದೋ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ್ದಾರೆ.
ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಹಣ ಸಂದಾಯವಾಗಿದ್ದು, ಕಳೆದ ಏಪ್ರಿಲ್ ತಿಂಗಳಿನಲ್ಲಿ ನೋಂದಣಿ ಕಾರ್ಯಕ್ಕೆ ಮುಂದಾಗಿದ್ದಾರೆ. [ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]
ಅದರೆ, ರಣವೀರ್ ಸಿಂಗ್ ತನ್ನ ಸುಪರ್ದಿಯಲ್ಲಿರುವ ಜಮೀನನ್ನು ಇನ್ನೂ ಪರಭಾರೆ ಮಾಡಿಲ್ಲ. ಜೊತೆಗೆ ಹಣವನ್ನು ವಾಪಸ್ ಮಾಡಿಲ್ಲ. ಜಮೀನು, ದುಡ್ಡು ಏನೂ ಕೊಡುವುದಿಲ್ಲ, ಮತ್ತೆ ಮತ್ತೆ ಕೇಳಿದರೆ ಕೊಲೆ ಮಾಡುವುದಾಗಿ ರಣವೀರ್ ಸಿಂಗ್ ಕಡೆಯವರು ಬೆದರಿಕೆ ಒಡ್ಡಿದ್ದಾರೆ.
ರಣವೀರ್ ಸಿಂಗ್ ವಿರುದ್ಧ ದೂರು ಸ್ವೀಕರಿಸಲಾಗಿದ್ದು, ಒಟ್ಟು ಐವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮೀರತ್ ಜಿಲ್ಲಾ ಪೊಲೀಸ್ ಹೇಳಿದ್ದಾರೆ.
ಮೀರತ್ ನಿವಾಸಿಯಾದ ವೇಗಿ ಭುವನೇಶ್ವರ್ ಕುಮಾರ್ ಅವರು ಸದ್ಯ ಶ್ರೀಲಂಕಾದಲ್ಲಿ ಟೀಂ ಇಂಡಿಯಾ ಜೊತೆಯಲ್ಲಿದ್ದಾರೆ. (ಪಿಟಿಐ)