ಮುಂಬೈ, ನ.09: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯಲ್ಲಿ ಅನಗತ್ಯ ಹಾಗೂ ಹೆಚ್ಚುವರಿ ಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ತೆಗೆದು ಹಾಕುವ ಕಾರ್ಯನಡೆಯುತ್ತಿದೆ. ಭಾರತದ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಅವರನ್ನು ಆಯ್ಕೆ ಸಮಿತಿಯಿಂದ ಹೊರ ಹಾಕಲಾಗಿದ್ದು, ಅವರ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಕೆ ಪ್ರಸಾದ್ ಅವರನ್ನು ನೇಮಿಸಲಾಗಿದೆ.
ಮುಂಬೈನಲ್ಲಿ ಸೋಮವಾರ ನಡೆದ ವಾರ್ಷಿಕ ಪ್ರಧಾನ ಸದಸ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. [ಬಿನ್ನಿ ಭಾರತದ ಅತ್ಯುತ್ತಮ ಆಲ್ ರೌಂಡರ್ : ಧೋನಿ]
ಅದರೆ, ರೋಜರ್ ಬಿನ್ನಿ ಅವರ ಮಗ ಸ್ಟುವರ್ಟ್ ಬಿನ್ನಿ ಅವರು ಟೀಂ ಇಂಡಿಯಾದಲ್ಲಿ ಆಡುತ್ತಿರುವುದರಿಂದ ಸ್ವಜನ ಪಕ್ಷಪಾತ, ಲಾಭದಾಯಕ ಹುದ್ದೆ ಕಾರಣದಿಂದಾಗಿ ಸೀನಿಯರ್ ಬಿನ್ನಿ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ.
ಕರ್ನಾಟಕಕ್ಕೆ ಹಿನ್ನಡೆ?:ರೋಜರ್ ಅವರು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನ ಪ್ರತಿನಿಧಿಯಾಗಿ ದಕ್ಷಿಣ ವಲಯದ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಈಗ ರೋಜರ್ ಅವರ ನಿರ್ಗಮನದ ನಂತರ ಕರ್ನಾಟಕದ ಮೂಲದ ಮಾಜಿ ಆಟಗಾರರೊಬ್ಬರನ್ನು ಆಯ್ಕೆ ಮಾಡಬಹುದಾಗಿತ್ತು. ಅದರೆ, ಆಂಧ್ರಪ್ರದೇಶ ಮೂಲದ 40 ವರ್ಷ ವಯಸ್ಸಿನ ಎಂಎಸ್ ಕೆ ಪ್ರಸಾದ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಭಾರತದ ಪರ 6 ಟೆಸ್ಟ್ ಹಾಗೂ 17 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಎಂಎಸ್ ಕೆ ಪ್ರಸಾದ್ ಅವರು ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ. ಓರ್ವ ಆಯ್ಕೆಗಾರ 4 ವರ್ಷಕ್ಕಿಂತ ಹೆಚ್ಚು ಕಾಲ ಹುದ್ದೆಯಲ್ಲಿರಲು ಅವಕಾಶವಿಲ್ಲ. ಹಿರಿಯ ಆಯ್ಕೆಗಾರರೊಬ್ಬರು ವಾರ್ಷಿಕ 70 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಬಿಸಿಸಿಐ ಆಯ್ಕೆಸಮಿತಿ ವಲಯವಾರು ಹೀಗಿದೆ: ವಿಕ್ರಮ್ ರಾಥೋಡ್ (ಉತ್ತರ ವಲಯ), ಸಂದೀಪ್ ಪಾಟೀಲ್(ಚೇರ್ಮನ್ ಹಾಗೂ ಪಶ್ಚಿಮ ವಲಯ), ರಾಜೀಂದರ್ ಹನ್ಸ್ (ಕೇಂದ್ರ ವಲಯ), ಎಂಎಸ್ ಕೆ ಪ್ರಸಾದ್ (ದಕ್ಷಿಣ ವಲಯ) ಹಾಗೂ ಸಾಬಾ ಕರೀಂ (ಪೂರ್ವ ವಲಯ) (ಒನ್ ಇಂಡಿಯಾ ಸುದ್ದಿ)