ಕೋಲ್ಕತ್ತಾ, ಏ.16: "ಟೀಂ ಇಂಡಿಯಾಕ್ಕೆ ಸೌರವ್ ಗಂಗೂಲಿ ಕೋಚ್ ಆಗಲಿದ್ದಾರೆ" ಎಂಬ ಸುದ್ದಿ ಗುರುವಾರ ಸಂಜೆ ಎಲ್ಲೆಡೆ ಹಬ್ಬಿತ್ತು. ಈ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರೇ ಪ್ರತಿಕ್ರಿಯೆ ನೀಡಿದ್ದು, 'ಹಾವು ಸಾಯಬಾರದು ಕೋಲು ಮುರಿಯಬಾರದು' ಎಂಬಂತೆ ಉತ್ತರಿಸಿದ್ದಾರೆ.
ಹಾಲಿ ಕೋಚ್ ಡಂಕನ್ ಫ್ಲೆಚರ್ ಅವರ ಸ್ಥಾನ ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಸ ಮುಖವನ್ನು ಹುಡುಕಲು ಆರಂಭಿಸಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ.[ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ಗಂಗೂಲಿ?]
ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಜಗ್ಮೋಹನ್ ದಾಲ್ಮಿಯಾರನ್ನು ಭೇಟಿ ಮಾಡಿ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಕೋಚ್ ಸ್ಥಾನಕ್ಕೆ ಭಾರತೀಯ ಮೂಲದ ಮಾಜಿ ಆಟಗಾರರನ್ನೇ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದ್ದು, ಈ ಪೈಕಿ 'ಬೆಂಗಾಲದ ಹುಲಿ' ಗಂಗೂಲಿ ರೇಸಿನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎಂಬ ಸುದ್ದಿ ಬಂದಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ, ದಾಲ್ಮಿಯಾ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಅದರೆ, ನಾನೇನು ಹುದ್ದೆ ಸಿಕ್ಕತೆ ತಿರಸ್ಕರಿಸುವುದಿಲ್ಲ ಎಂದರು. ಟೈಮ್ಸ್ ನೌ ಪ್ರತಿನಿಧಿಯೊಂದಿಗೆ ಮಾತನಾಡಿ ನಾನು ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ಕೋಚ್ ಆಗುವ ಅರ್ಹತೆ ಹೊಂದಿದ್ದೇವೆ. ಇದಕ್ಕಾಗಿ ಯಾವುದೇ ರೀತಿ ಲಾಬಿ ನಡೆಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Don't jump the gun, let's stick to that: Sourav Ganguly pic.twitter.com/diSiJPSkCT
— ANI (@ANI_news) April 16, 2015
ದಾಲ್ಮಿಯಾರನ್ನು ನಾನು ಚೆನ್ನಾಗಿ ಬಲ್ಲೆ ಹಾಗಾಗಿ ದಿನನಿತ್ಯ ಭೇಟಿ ಮಾಡುತ್ತಿರುತ್ತೇನೆ. ಅದರಲ್ಲಿ ಏನು ವಿಶೇಷವಿಲ್ಲ. ಬೆಂಗಾಲದ ಕ್ರಿಕೆಟ್ ಅಸೋಸಿಯೇಷನ್ ಏಳಿಗೆಗಾಗಿ ಮಾತುಕತೆ ನಡೆಯುತ್ತಿರುತ್ತದೆ ಎಂದಿದ್ದಾರೆ. ಬೆಂಗಾಲದ ಕ್ರಿಕೆಟ್ ಮಂಡಳಿಗೆ ದಾಲ್ಮಿಯಾ ಅವರು ಅಧ್ಯಕ್ಷರಾಗಿದ್ದರೆ, ಗಂಗೂಲಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಏ.26ಕ್ಕೆ ನಿಗದಿಯಾಗಿದೆ. ಈ ಸಭೆಯಲ್ಲಿ ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರು ಎಂಬುದರ ಬಗ್ಗೆ ಚರ್ಚೆ ನಡೆಯಲಿದ್ದು ಮುಂದಿನ ಕೋಚ್ ಘೋಷಣೆ ಮಾಡುವ ಸಾಧ್ಯತೆಯಿದೆ.ಹಾಲಿ ಮುಖ್ಯ ತರಬೇತುದಾರ ಡಂಕನ್ ಫ್ಲೆಚರ್ ಅವರ ಅವಧಿ ವಿಶ್ವಕಪ್ 2015 ಟೂರ್ನಿ ಜೊತೆಗೆ ಅಂತ್ಯವಾಗಿದೆ.
ಒನ್ ಇಂಡಿಯಾ ಸುದ್ದಿ