ಕೊಚ್ಚಿ, ಏಪ್ರಿಲ್ 19 : ಬಿಸಿಸಿಐ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಿಲುಕಿಕೊಂಡು ಜೀವಾವಧಿ ನಿಷೇಧಕ್ಕೆ ಒಳಗಾಗಿರುವ ಟೀಂ ಇಂಡಿಯಾದ ವೇಗಿ ಎಸ್ ಶ್ರೀಶಾಂತ್ ಕ್ರಿಕೆಟ್ ಆಡಬೇಕ್ಕೆನ್ನುವ ಕನಸ್ಸಿಗೆ ಬಿಸಿಸಿಐ ತಣ್ಣಿರೆರಚಿದೆ.
ಟೀಂ ಇಂಡಿಯಾದ ವೇಗಿ ಎಸ್ ಶ್ರೀಶಾಂತ್ ಮೇಲೆ ಹೇರಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕೇರಳ ಹೈಕೋರ್ಟ್ ಗೆ ಸ್ಪಷ್ಟಪಡಿಸಿದೆ. ಈ ಮೂಲಕ ಶ್ರೀಶಾಂತ್ ಅವರ ಕ್ರಿಕೆಟ್ ಕನಸು ಬಹುತೇಕ ಅಂತ್ಯವಾದಂತಾಗಿದೆ.[ಶ್ರೀಶಾಂತ್ ಆಸೆಗೆ ತಣ್ಣಿರೆರಚಿದ ಬಿಸಿಸಿಐ]
ನಿಷೇಧ ತೆರವುಗೊಳಿಸುವಂತೆ ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ ಬಿಸಿಸಿಐ, "ದೆಹಲಿ ಉಚ್ಚ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ್ದರೂ ಕ್ರಿಕೆಟ್ ಮಂಡಳಿಯ ಆಂತರಿಕ ಸಮಿತಿ ಅದಕ್ಕೆ ಒಪ್ಪುವುದಿಲ್ಲ. ಮಂಡಳಿಯ ನಿಯಮಗಳನ್ನು ಉಲ್ಲಂಘಿಸುವವರನ್ನು ಸಹಿಸಿಕೊಳ್ಳಲಾಗದು" ಎಂದು ತಿಳಿಸಿದೆ.
ರಾಜಸ್ತಾನ ರಾಯಲ್ಸ್ ತಂಡದ ಆಟಗಾರರರಾಗಿದ್ದ ಶ್ರೀಶಾಂತ್ 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೆ ಗುರಿಯಾಗಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದಾಗಿ 2015ರಲ್ಲಿ ದೆಹಲಿ ನ್ಯಾಯಾಲಯ ಕೇರಳದ ಕ್ರಿಕೆಟಿಗನನ್ನು ದೋಷಮುಕ್ತಗೊಳಿಸಿತ್ತು.