ಬೆಂಗಳೂರು, ಜುಲೈ 27: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 6ನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಶ್ರೀಶಾಂತ್ ರನ್ನು ದೆಹಲಿ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಅದರೆ, ಶ್ರೀಶಾಂತ್ ಮೇಲಿನ ನಿಷೇಧವನ್ನು ವಾಪಸ್ ಪಡೆಯುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಈ ವಿಷಯದಲ್ಲಿ ಬಿಸಿಸಿಐ ಇಬ್ಭಾಗವಾಗಿದ್ದು, ಸದ್ಯಕ್ಕಂತೂ ಯಾವುದೇ ಆಶಾದಾಯಕ ಸೂಚನೆ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನನ್ನನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸುತ್ತಿದ್ದಾರೆ. ಅಷ್ಟು ಸಾಕು, ನನ್ನ ಮೇಲಿನ ನಂಬಿಕೆ ಉಳಿಸಿಕೊಂಡಿದ್ದಾರೆ ಇದು ನನಗೆ ಸ್ಪೂರ್ತಿ ತುಂಬಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ. [ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]
ಈಗ ಬಿಸಿಸಿಐ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಇರುವುದರಿಂದ ಶ್ರೀಶಾಂತ್ ಅವರಿಗೆ ನೆರವಾಗುತ್ತಾರೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ.,
ಈ ನಡುವೆ ತೀರ್ಪು ಹೊರ ಬಂದ ನಂತರ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀಶಾಂತ್ ಗೆ ಭರ್ಜರಿ ಸ್ವಾಗತ ಸಿಕ್ಕಿದೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
'ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ರೊಂದಿಗೆ ಸಂಪರ್ಕ ಇದ್ದಿದ್ದರೆ, ನಾನು ದುಬೈನಲ್ಲಿರುತ್ತಿದ್ದೆ, ಕ್ರಿಕೆಟಿಗನಾಗುತ್ತಿರಲಿಲ್ಲ. ವೃತ್ತಿ ಜೀವನಕ್ಕೂ ಹಾಗೂ ಕಠಿಣ ವೇಳೆಯಲ್ಲೂ ಬೆಂಬಲವಾಗಿ ನಿಂತ ಕೇರಳ ಜನತೆಗೆ ಚಿರಋಣಿಯಾಗಿರುತ್ತೇನೆ' ಎಂದು ಶ್ರೀಶಾಂತ್ ಪ್ರತಿಕ್ರಿಯಿಸಿದ್ದಾರೆ.[ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್]
ಶ್ರೀಶಾಂತ್ ಮೇಲಿರುವ ನಿಷೇಧ ಶಿಕ್ಷೆಯನ್ನು ಹಿಂಪಡೆಯುವಂತೆ ಕೆಸಿಎ ಅಧ್ಯಕ್ಷ ಹಾಗೂ ಬಿಸಿಸಿಐ ಉಪಾಧ್ಯಕ್ಷರೂ ಆಗಿರುವ ಟಿಸಿ ಮ್ಯಾಥ್ಯೂ ಬಿಸಿಸಿಐಗೆ ಪತ್ರ ಬರೆಯಲಿದ್ದಾರೆ ಎಂದು ಕೆಸಿಎ ಕಾರ್ಯದರ್ಶಿ ಟಿಎನ್ ಅನಂತನಾರಾಯಣನ್ ತಿಳಿಸಿದ್ದಾರೆ. ಕೆಸಿಎ ನಿಯೋಗ ಶೀಘ್ರವೇ ಬಿಸಿಸಿಐನ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದೆ.
ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚೌಹಾಣ್ ಅವರು ಆರೋಪ ಹೊತ್ತ ಮೇಲೆ ಬಂಧನಕ್ಕೊಳಗಾಗಿ ಜೈಲು ದರ್ಶನ ಪಡೆದಿದ್ದರು. ಅದರೆ, ಜಾಮೀನು ಪಡೆದು ಹೊರ ಬಂದಿದ್ದರು. ಬಿಸಿಸಿಐ ಮಾತ್ರ ಮೂವರ ಮೇಲಿನ ಆಜೀವ ನಿಷೇಧ ಆದೇಶವನ್ನು ವಾಪಸ್ ಪಡೆಯುವಲ್ಲಿ ಇನ್ನೂ ತೀರ್ಮಾನ ಕೈಗೊಂಡಿಲ್ಲ.