ಫಾತುಲ್ಲಾ (ಬಾಂಗ್ಲಾದೇಶ), ಜೂ.11: ಬಾಂಗ್ಲಾದೇಶ ವಿರುದ್ದದ ಏಕೈಕ ಟೆಸ್ಟ್ ಪಂದ್ಯಕ್ಕೆ ಯಾಕೋ ಆರಂಭದಿಂದಲೇ ಮಳೆರಾಯ ಕಾಟ ಕೊಡುತ್ತಿದ್ದಾನೆ. ಮೊದಲ ದಿನದಲ್ಲಿ ಟೀಂ ಇಂಡಿಯಾ ಭರ್ಜರಿ ಆಟ ಪ್ರದರ್ಶನ ನೀಡಿತ್ತು.
ಅದರೆ, ಎರಡನೇ ದಿನದ ಆಟ ಆರಂಭಕ್ಕೆ ಭಾರಿ ಮಳೆ ಅಡ್ಡಿಪಡಿಸಿದ್ದಲ್ಲದೆ, ಇಡೀ ದಿನದ ಆಟವನ್ನೇ ರದ್ದುಪಡಿಸಿತು. ಈ ನಡುವೆ ಪಂದ್ಯ ನಿಂತಾಗೆಲ್ಲ ಆಟಗಾರರ ಕೈಗೆ ಐಸ್ ಕ್ರೀಂ ಸಿಗುತ್ತಿತ್ತು. ಇದು ಜಾನ್ ಜೀ ಐಸ್ ಕ್ರೀಂ ಟೆಸ್ಟ್ ಸರಣಿ ಎನ್ನುವುದನ್ನು ಮರೆಯುವಂತಿಲ್ಲ.
ಟೆಸ್ಟ್ ಪಂದ್ಯದ ಮೊದಲದಿನ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಾಭ ಪಡೆದ ಶಿಖರ್ ಧವನ್ ಆಕರ್ಷಕ ಶತಕ ಹಾಗೂ ಮುರಳಿ ವಿಜಯ್ ಅವರ ಅರ್ಧಶತಕದ ನೆರವಿನಿಂದ ಹಲವು ದಾಖಲೆಗಳು ಧೂಳಿಪಟವಾಗಿತ್ತು.
| ಚಿತ್ರಗಳು | ಪಂದ್ಯದ 1ನೇ ದಿನದ ವರದಿ
ಖಾನ್ ಶಾಹೆಬ್ ಒಸ್ಮನ್ ಅಲಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮೊದಲ ದಿನದ ಅಂತ್ಯಕ್ಕೆ ಭಾರತ 56 ಓವರ್ ಗಳಲ್ಲಿ 239/0 ಸ್ಕೋರ್ ಮಾಡಿದೆ. ಮುರಳಿ ವಿಜಯ್ 89 ರನ್ ಹಾಗೂ ಶಿಖರ್ ಧವನ್ 150 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಮೊದಲ ದಿನ ಕೂಡಾ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗಿತ್ತು.ನಿಗದಿತ 90 ಓವರ್ ಗಳ ಬದಲಿಗೆ 56 ಓವರ್ ಗಳನ್ನು ಮಾತ್ರ ಎಸೆಯಲಾಯಿತು.
ಈ ಮುಂಚೆ ಹವಾಮಾನ ನೋಡಿಕೊಂಡು ಟೆಸ್ಟ್ ಸರಣಿ ಆಯೋಜಿಸಲಾಗುತ್ತಿತ್ತು. ನವೆಂಬರ್ (2000), ಡಿಸೆಂಬರ್ (2004-05), ಮೇ (2007) ಹಾಗೂ ಜನವರಿ (2010) ಅವಧಿಯಲ್ಲಿ ನಡೆದ ಸರಣಿಗೆ ಮಳೆ ಅಡ್ಡಿಪಡಿಸಿರಲಿಲ್ಲ.
ಮಳೆಗಾಲದಲ್ಲಿ ಬಾಂಗ್ಲಾದೇಶ ಸರಣಿ ಇಟ್ಟುಕೊಳ್ಳುವ ಔಚಿತ್ಯ ಏನಿತ್ತೋ ಬಿಸಿಸಿಐ ಬಿಗ್ ಬಾಸ್ ಗಳಿಗೆ ಗೊತ್ತು. ಇನ್ನೂ ಮೂರು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಸಿದೆ. (ಒನ್ ಇಂಡಿಯಾ ಸುದ್ದಿ)