ಢಾಕಾ, ಫೆ. 24: ಭಾರತದ ದೆಹಲಿಯ ವಾಹನ ದಟ್ಟಣೆಗೆ ಸವಾಲು ಎಸೆಯಬಹುದಾದ ಟ್ರಾಫಿಕ್ ಜಾಮ್ ನೋಡಿ ಟೀಂ ಇಂಡಿಯಾ ತತ್ತರಿಸಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ವಿರುದ್ಧ ಬುಧವಾರ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತದ ಆಟಗಾರರು ಬೆಚ್ಚುವಂಥ ಘಟನೆ ಎದುರಿಸಿದ್ದಾರೆ.
ಢಾಕಾಕ್ಕೆ ಕಾಲಿಟ್ಟ ಮೇಲೆ ಟ್ರಾಫಿಕ್ ಸಮಸ್ಯೆ ಜೊತೆಗೆ ಸೊಳ್ಳೆಗಳ ದಾಳಿಯಿಂದ ಭಾರತದ ಆಟಗಾರರು ತತ್ತರಿಸಿದ್ದಾರೆ. ಒಂದೋ, ಎರಡೋ ಸೊಳ್ಳೆಗಳಾಗಿದ್ದರೆ ಹುಕ್, ಪುಲ್, ಕಟ್ ಮಾಡಿದಂತೆ ಕಚಕ್ ಎನಿಸುಬಿಡುತ್ತಿದ್ದ ಕೊಹ್ಲಿ, ರೈನಾ ಸೇರಿದಂತೆ ಬ್ಯಾಟ್ಸ್ ಮನ್ ಗಳು ಲಕ್ಷಾಂತರ ಸೊಳ್ಳೆಗಳ ದಾಳಿಯಿಂದ ಆಘಾತಕ್ಕೊಳಗಾಗಿದ್ದಾರೆ.
ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ
ತುರ್ತಾಗಿ ಸೊಳ್ಳೆ ಹೊಡೆಯುವ ಬ್ಯಾಟ್ ಗಳಿಗೆ ಬೇಡಿಕೆ ಹುಟ್ಟಿಕೊಂಡಿದೆ. ಕನ್ನಡ ಸಿನಿಮಾ ವಾಸ್ತು ಪ್ರಕಾರ ದ ಜಗ್ಗೇಶ್ ಪಾತ್ರಧಾರಿಗೆ ಈ ಸುದ್ದಿ ತಿಳಿದರೆ ತಕ್ಷಣವೇ ಢಾಕಾಕ್ಕೆ ಹಾರಿದರೂ ಅಚ್ಚರಿ ಪಡಬೇಕಾಗಿಲ್ಲ. ಕ್ರಿಕೆಟ್ ಬ್ಯಾಟ್ ಜೊತೆಗೆ ಸೊಳ್ಳೆ ಹೊಡೆಯುವ ಬ್ಯಾಟ್ ನೊಂದಿಗೆ ನೆಟ್ ಅಭ್ಯಾಸ ಜೋರಾಗಿ ಸಾಗಿದೆ ಎಂದು ಕ್ರಿಕೆಟರ್ಸ್ ತಮಗೆ ಒದಗಿಸಿರುವ ಸಂಕಟವನ್ನು ಹಂಚಿಕೊಂಡಿದ್ದಾರೆ.
ಸರಿ ಸುಮಾರು 2 ಲಕ್ಷ ಸೊಳ್ಳೆಗಳಿವೆ ಏನು ಮಾಡುವುದೋ ಗೊತ್ತಿಲ್ಲ ಎಂದು ಸುರೇಶ್ ರೈನಾ ಗೋಳು ತೋಡಿಕೊಂಡಿದ್ದಾರೆ. ನೆಟ್ ಪ್ರಾಕ್ಟೀಸ್ ಗೆ ಹೋದರೆ ಸೊಳ್ಳೆ ಕಾಟ ಜಾಸ್ತಿ ಎಂದು ಶಿಖರ್ ಧವನ್ ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಇಬ್ಬರು ಟವೆಲ್ ಬಳಸಿ ಸೊಳ್ಳೆ, ನುಸಿ ಪೀಡೆಯಿಂದ ಪಾರಾಗುತ್ತಿದ್ದಾರಂತೆ. [ಏಷ್ಯಾ ಕಪ್ ಟಿ-20 ಟೂರ್ನಿಯಿಂದ ಶಮಿ ಔಟ್]
2011ರ ವಿಶ್ವಕಪ್ ಸಂದರ್ಭದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಢಾಕಾ ಸಿಟಿ ಕಾರ್ಪೊರೇಷನ್ (ಡಿಸಿಸಿ) ವಿಶೇಷ ತಂಡವೊಂದನ್ನು ರೂಪಿಸಿತ್ತು. ಆದರೆ, ಏಷ್ಯಾಕಪ್ ಸಂದರ್ಭದಲ್ಲಿ ಇವರ ಅಗತ್ಯ ಹೆಚ್ಚಾಗಿದೆ.
'ಮಲೇರಿಯಾದಿಂದ ಮುಕ್ತರಾಗಿ, ಸೊಳ್ಳೆ ಕಡಿತಕ್ಕೆ ಸಿಲುಕಬೇಡಿ' ಎಂಬ ಎಚ್ಚರಿಕೆ ಸಂದೇಶ ಬಾಂಗ್ಲಾದೇಶಕ್ಕೆ ಬರುವ ಪ್ರವಾಸಿಗರಿಗೆ ಸಿಗುವ ಮೊದಲ ಸ್ವಾಗತ ಫಲಕವಾಗಿದೆ.
ಏಷ್ಯಾಕಪ್ ಟೂರ್ನಿ ಫೆಬ್ರವರಿ 24 ರಿಂದ ಮಾರ್ಚ್ 6 ರ ತನಕ ನಡೆಯಲಿದ್ದು, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಕಪ್ ಗಾಗಿ ಕಾದಾಡಲಿವೆ.
ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ನಂತರ ಭಾರತದಲ್ಲಿ ಐಸಿಸಿ ವಿಶ್ವ ಟಿ20 ಟೂರ್ನಮೆಂಟ್ ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ 16 ತಂಡಗಳು ಚುಟುಕು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಬಗ್ಗೆ ಎಬಿಪಿ ನ್ಯೂಸ್ ವರದಿ ವಿಡಿಯೋ: