ಮುಂಬೈ, ನ.25: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಆಯ್ಕೆ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಕೇಳಿ ಬಂದಿತ್ತು. ಆದರೆ, ಈಗ ಅರ್ಜುನ್ ತಮ್ಮ ತಂದೆ ಸಚಿನ್ ಹೆಮ್ಮೆ ಪಡುವಂಥ ಆಟ ಪ್ರದರ್ಶಿಸಿದ್ದಾರೆ. ಇಲ್ಲಿನ ಸಚಿನ್ ಜಿಂಖಾನ ಮೈದಾನದಲ್ಲಿ ಅರ್ಜುನ್ ಶತಕ ಬಾರಿಸಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಆಯೋಜನೆಯ ಅಂಡರ್ 16 ಕ್ರಿಕೆಟ್ ಟೂರ್ನಿ ಪಯ್ಯಡೆ ಟ್ರೋಫಿ ಪಂದ್ಯದಲ್ಲಿ ಮಂಗಳವಾರ ಅರ್ಜುನ್ ಅವರು ಶತಕ ಗಳಿಸಿದರು.[ನಾಗ್ಪುರ ಟೆಸ್ಟ್ : ಭಾರತದ ಐದು ವಿಕೆಟ್ ಪತನ]
ಸಚಿನ್ ತೆಂಡೂಲ್ಕರ್ ಜಿಂಖಾನ ಮೈದಾನದಲ್ಲಿ ಅರ್ಜುನ್ ಅವರು 156 ಎಸೆತಗಳಲ್ಲಿ 106 ರನ್ ಚೆಚ್ಚಿದರು ಅದರಲ್ಲಿ 16 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಅರ್ಜುನ್ ಅವರ ಶತಕದ ನೆರವಿನಿಂದ ಅವರ ತಂಡ 218 ರನ್ ಸ್ಕೋರ್ ಮಾಡಿತು.
ವಿಶೇಷವೆಂದರೆ ಅರ್ಜುನ್ ಅವರು ಆಡುವ ತಂಡಕ್ಕೆ ಸುನಿಲ್ ಗವಾಸ್ಕರ್ XI ಎಂದು ಹೆಸರಿಡಲಾಗಿತ್ತು. ರೋಹಿತ್ ಶರ್ಮ XI ವಿರುದ್ಧ ಅರ್ಜುನ್ ಅವರಿದ್ದ ತಂಡ ಸ್ಪರ್ಧಿಸಿತ್ತು.[ವಾಷಿಂಗ್ಟನ್ 'ಸುಂದರ' ಆಟ, ಯು-19 ತಂಡ ಫೈನಲಿಗೆ]
ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ XI ಹಾಗೂ ದಿಲಿಪ್ ವೆಂಗ್ ಸರ್ಕಾರ್ XI ಇನ್ನುಳಿದ ಎರಡು ತಂಡಗಳಾಗಿವೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಕೋಚ್ ವಿಕಾಸ್ ಸತಮ್ ಹೇಳಿದ್ದಾರೆ.
ಕಳೆದ ವರ್ಷ ಅರ್ಜುನ್ ಅವರು ಧೀರೂಬಾಯಿ ಅಮ್ಬಾನಿ 42 ಎಸೆತಗಳಲ್ಲಿ 118ರನ್ ಬಾರಿಸಿದ್ದರು. (ಒನ್ ಇಂಡಿಯಾ ಸುದ್ದಿ)