ಬೆಂಗಳೂರು, ಜೂನ್ 13 : ಟೀಂ ಇಂಡಿಯಾದ ಮುಂದಿನ ಕೋಚ್ ಯಾರಾಗಲಿದ್ದಾರೆ? ಎಂಬ ಪ್ರಶ್ನೆ ದಿನದಿಂದ ದಿನಕ್ಕೆ ಕುತೂಹಲ ಕಾಯ್ದುಕೊಳ್ಳುತ್ತಿದೆ. ಸ್ಪಿನ್ ಮಾಂತ್ರಿಕ, ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕೂಡಾ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿ ಸೋಮವಾರ ಬಂದಿದೆ.
ಭಾನುವಾರದ ತನಕ 57 ಜನರಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿತ್ತು. ಆದರೆ, 57 ಮಂದಿಯ ಹೆಸರು ಬಹಿರಂಗಪಡಿಸಿರಲಿಲ್ಲ. [ಬೌಲಿಂಗ್ ಕೋಚ್ ಆಗಲು ಅರ್ಜಿ ಹಾಕಿದ ವೆಂಕಟೇಶ್ ಪ್ರಸಾದ್]
ರವಿಶಾಸ್ತ್ರಿ, ವೆಂಕಟೇಶ್ ಪ್ರಸಾದ್, ಸಂದೀಪ್ ಪಾಟೀಲ್ ಅಲ್ಲದೆ, ಮಾಜಿ ಬ್ಯಾಟ್ಸ್ ಮನ್ ಹೃಷಿಕೇಶ್ ಕಾನಿಟ್ಕರ್, ಮಾಜಿ ವೇಗಿ ಬಲ್ವಿಂದರ್ ಸಿಂಗ್ ಸಂಧು ಕೂಡಾ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
956 ಅಂತಾರಾಷ್ಟ್ರೀಯ ವಿಕೆಟ್ (ಟೆಸ್ಟ್ ನಲ್ಲಿ 619 ಹಾಗೂ ಒಡಿಐ 337) ಪಡೆದಿರುವ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಜೂನ್ 10 ರ ಡೆಡ್ ಲೈನ್ ಗೂ ಮುಂಚಿತವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕೆಎಸ್ ಸಿಎಯಲ್ಲಿ ಆಡಳಿತಗಾರರಾಗಿ ಅನುಭವ ಹೊಂದಿರುವ ಕುಂಬ್ಳೆ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ಸಂಜಯ್ ಬಂಗಾರ್ ಅವರು ಹಂಗಾಮಿ ಕೋಚ್ ಆಗಿದ್ದಾರೆ. ಜಿಂಬಾಬ್ವೆಯಲ್ಲಿ ಏಕದಿನ ಹಾಗೂ ಟಿ20 ಸರಣಿ ನಂತರ ವೆಸ್ಟ್ ಇಂಡೀಸ್ ಗೆ ಭಾರತ ತಂಡ ತೆರಳಲಿದೆ. ನಂತರ ಪ್ರಸಕ್ತ ಕ್ರಿಕೆಟ್ ಋತುವಿನಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ವಿರುದ್ಧ 13 ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.