ಬೆಂಗಳೂರು, ಆಗಸ್ಟ್ 09 : ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರಿಗೆ ಸಲ್ಲಬೇಕಿದ್ದ ತಿಂಗಳ ಸಂಬಳ, ಬಾಕಿ ಮೊತ್ತವನ್ನು ಪಾವತಿಸಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹೇಳಿದೆ.
ಮೇ ಮತ್ತು ಜೂನ್ ತಿಂಗಳ ವೇತನದ ರೂಪದಲ್ಲಿ ಒಟ್ಟು 97.5 ಲಕ್ಷ ರು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ಕೋಚ್ ಹುದ್ದೆಯಲ್ಲಿ ಮುಂದುವರೆಯಲು ಇಚ್ಛಿಸದ ಕುಂಬ್ಳೆ ಅವರು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾಪ ದೊಡ್ಡ ಸುದ್ದಿಯಾಯಿತು. ಕುಂಬ್ಳೆ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರವಿಶಾಸ್ತ್ರಿ ಅವರನ್ನು ಕರೆತರಲಾಗಿದೆ.
ಏಕದಿನ ವಿಶ್ವಕಪ್ನಲ್ಲಿ ರನ್ನರ್ಸ್ ಅಪ್ ಸ್ಥಾನ ಗಳಿಸಿದ್ದ ಮಹಿಳಾ ತಂಡದಸದಸ್ಯರಿಗೆ ತಲಾ 45 ಲಕ್ಷ ರು ಬಹುಮಾನ ಮೊತ್ತವನ್ನೂ ಬಿಡುಗಡೆ ಮಾಡಲಾಗಿದೆ. ಉಳಿದಂತೆ, ವೇಗಿ ಇಶಾಂತ್ ಶರ್ಮಾ ಅವರಿಗೂ ಸುಮಾರು 1 ಕೋಟಿ ರು ಮೊತ್ತವನ್ನು ಬಿಸಿಸಿಐ ನೀಡಿದೆ.
ವಿವೇಕ್ ರಾಜ್ದಾನ್, ಶರಣ್ ದೀಪ್ ಸಿಂಗ್, ಸಲಿಲ್ ಅಂಕೋಲಾ, ರಿತಿಂದರ್ ಸೋಧಿ, ಯೋಗರಾಜ್ ಸಿಂಗ್ ಮತ್ತು ರಾಬಿನ್ ಸಿಂಗ್ ಅವರಿಗೆ ಒಂದು ಸಲದ ವೇತನದ ರೂಪದಲ್ಲಿ ತಲಾ 35 ಲಕ್ಷ ರು ಮೊತ್ತ ನೀಡಲಾಗಿದೆ.