ಬೆಂಗಳೂರು, ಜುಲೈ 23: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಎಲ್ಲಾ 6 ತಂಡಗಳು ತಾವು ಉಳಿಸಿಕೊಂಡ 2 ಆಟಗಾರರನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬಾರಿ ಯಾವ ಆಟಗಾರ ಹೆಚ್ಚಿನ ಬೆಲೆಗೆ ಹರಾಜಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಕಳೆದ ಬಾರಿಯಂತೆ ರಾಬಿನ್ ಉತ್ತಪ್ಪ ಅವರು ಈ ಸಲವೂ ಹೆಚ್ಚಿನ ಮೌಲ್ಯಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ.
ಬಳ್ಳಾರಿ ಟಸ್ಕರ್ಸ್ ತಂಡ ಸ್ಫೋಟಕ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರನ್ನು ತಂಡದಿಂದ ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿತ್ತು. ಈಗ ಜುಲೈ 25 (ಶನಿವಾರ) ರಂದು ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ರಾಬಿನ್ ಉತ್ತಪ್ಪ ಕೂಡಾ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಪರ ಉತ್ತಮ ಆಟ ಪ್ರದರ್ಶಿಸುತ್ತಿರುವ ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.[ರಾಬಿನ್ ಉತ್ತಪ್ಪರನ್ನು ಕೈಬಿಟ್ಟ ಬಳ್ಳಾರಿ ತಂಡ]
ಸರಿ ಸುಮಾರು 239 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ.ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆ ಪೂರ್ಣ ವಿವರ ಮುಂದಿದೆ:
* ಹರಾಜು ದಿನಾಂಕ: ಜುಲೈ 25 (ಶನಿವಾರ)
* ಸಮಯ: ಬೆಳಗ್ಗೆ 11 ಗಂಟೆ.
* 239- ಒಟ್ಟು ಆಟಗಾರರು ಹರಾಜಿಗೆ ಲಭ್ಯ.
* 12- ಪ್ರತಿ ತಂಡದಿಂದ ಉಳಿಸಿಕೊಂಡ ಆಟಗಾರರು.
* 8- ಒಟ್ಟು ತಂಡಗಳು, ಹಿಂದಿನ ಆವೃತ್ತಿ 6 ತಂಡಗಳ ಜೊತೆಗೆ ಹೊಸ 2 ತಂಡಗಳು (ನಮ್ಮ ಶಿವಮೊಗ್ಗ, ಆಲ್ ಸ್ಟಾರ್ಸ್ ಸೆಲೆಬ್ರಿಟಿ XI -ರಾಕ್ ಸ್ಟಾರ್ ಹರಾಜಿಗೆ ಲಭ್ಯವಿರುವುದಿಲ್ಲ)
* 5.3 ಲಕ್ಷ ರು ಕಳೆದ ಸೀಸನ್ ನಲ್ಲಿ ರಾಬಿನ್ ಉತ್ತಪ್ಪ ಮಾರಾಟವಾದ ಮೊತ್ತ. ಬಳ್ಳಾರಿ ಟಸ್ಕರ್ಸ್ ತಂಡ ಈ ದಾಖಲೆ ಮೊತ್ತ ನೀಡಿತ್ತು.
* ಎ ಗುಂಪು ಹಾಗೂ ಬಿ ಗುಂಪು ಎಂದು ವಿಂಗಡಿಸಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ.
* ಎ ಗುಂಪಿನಲ್ಲಿ 35, ಬಿ ಗುಂಪಿನಲ್ಲಿ 204 ಆಟಗಾರರಿದ್ದಾರೆ.
* 20 ಲಕ್ಷ ರು- ಪ್ರತಿ ತಂಡ ಹೊಂದಿರುವ ಮೊತ್ತ (ಉಳಿಸಿಕೊಂಡ 12 ಆಟಗಾರರ ಮೊತ್ತ ಹಾಗೆ ಉಳಿಯಲಿದೆ)
* ಎ ಗುಂಪಿನ ಆಟಗಾರರ ಮೂಲ ಬೆಲೆ 50,000 ರು ನಿಂದ ಆರಂಭ 12 ಲಕ್ಷ ರು ಗರಿಷ್ಠ ಮೊತ್ತ.
* ಬಿ ಗುಂಪಿನ ಆಟಗಾರರ ಮೂಲ ಬೆಲೆ 10,000 ರು ನಿಂದ ಆರಂಭ 8 ಲಕ್ಷ ರು ಗರಿಷ್ಠ ಮೊತ್ತ.
* ಎ ಗುಂಪಿನ ಆಟಗಾರನನ್ನು ಬಿ ಗುಂಪಿಗೆ ಸೇರಿಸಿದರೆ ಆತನ ಮೂಲ ಬೆಲೆ 25,000 ರು ನಿಂದ ಆರಂಭವಾಗಲಿದೆ.
ಆಯ್ಕೆಯಾದ ಆಟಗಾರರು ತಂಡದೊಡನೆ 1 ವರ್ಷದ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ತಂಡದಲ್ಲಿ ಕನಿಷ್ಠ 15 ಆಟಗಾರರು ಗರಿಷ್ಠ 20 ಆಟಗಾರರಿರಬಹುದು.
ಎ ಗುಂಪಿನ ಆಟಗಾರರು: ರಾಬಿನ್ ಉತ್ತಪ್ಪ, ಕರುಣ್ ನಾಯರ್, ಸಿಎಂ ಗೌತಮ್, ಅಬ್ರಾರ್ ಕಾಜಿ, ಅಖಿಲ್,ಸಿಎಲ್ ಅಕ್ಷಯ್, ಅಮಿತ್ ವರ್ಮ, ಅನಿರುಧ್ ಜೋಶಿ, ಕೆಸಿ ಅವಿನಾಶ್, ಭರತ್ ಚಿಪ್ಲಿ, ಕೆ ಗೌತಮ್, ಜೋನಾಥನ್ ಆರ್, ಕ್ರಾಂತಿ ಕುಮಾರ್, ಕುನಾಲ್ ಕಪೂರ್, ಮಾಯಾಂಕ್ ಅಗರವಾಲ್, ಅಭಿಮನ್ಯು ಮಿಥುನ್, ಕೆಬಿ ಪವನ್, ಪವನ್ ದೇಶಪಾಂಡೆ, ಸಾದಿಕ್ ಕಿರ್ಮಾನಿ, ಶಿಶಿರ್ ಭವಾನೆ, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ ಹಾಗೂ ಉದಿತ್ ಪಟೇಲ್.
(ಒನ್ ಇಂಡಿಯಾ ಸುದ್ದಿ)