ಲಂಡನ್, ಜೂನ್ 12: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಮ್ಮ ಪಾಲಿನ ಮಹತ್ವದ ಪಂದ್ಯದಲ್ಲಿ ಸೋತಿದ್ದಕ್ಕೆ ಬೇಸರವಾಗಿದೆ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕ ಎಬಿ ಡಿವಿಲಿಯರ್ಸ್ ಖೇದ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪಡೆ, ಭಾರತದ ವಿರುದ್ಧ ಸೋಲು ಕಂಡಿತ್ತು. ಟೂರ್ನಿಯ ಸೆಮಿಫೈನಲ್ ಪ್ರವೇಶಿಸಲು ಈ ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿತ್ತು. ಆದರೆ, ಈ ಪಂದ್ಯದಲ್ಲಿ ಗೆಲುವು ಪಡೆದ ವಿರಾಟ್ ಕೊಹ್ಲಿ ಪಡೆ ಸೆಮಿಫೈನಲ್ ಗೆ ದಾಪುಗಾಲಿಟ್ಟಿತು.
VIDEO: ಧೋನಿ ಸಲಹೆಗಳನ್ನು ಕೊಂಡಾಡಿದ ವಿರಾಟ್ ಕೊಹ್ಲಿ
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿ ಡಿವಿಲಿಯರ್ಸ್, ''ಭಾರತವು ಬಲಿಷ್ಠ ತಂಡವಾಗಿದ್ದರಿಂದ ನಾವು ನೆಟ್ಸ್ ಅಭ್ಯಾಸದ ವೇಳೆ ಸಾಕಷ್ಟು ಪರಿಶ್ರಮ ವಹಿಸಿ ಅಭ್ಯಾಸ ನಡೆಸಿದ್ದೆವು. ಆದರೂ, ಪಂದ್ಯವನ್ನು ಗೆಲ್ಲಲಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ 50 ಓವರ್ ಗಳ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಈ ಸೋಲನ್ನು ಮರೆತು, ನಾವು (ದಕ್ಷಿಣ ಆಫ್ರಿಕಾ ತಂಡ) ಆ ದೊಡ್ಡ ಟೂರ್ನಿಗಾಗಿ ತಯಾರಾಗಬೇಕಿದೆ'' ಎಂದರು.