ವಿಶಾಖಪಟ್ಟಣಂ, ಅಕ್ಟೋಬರ್ 29: ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 190 ರನ್ ಗಳ ಭಾರಿ ಅಂತರದಲ್ಲಿ ಎಂಎಸ್ ಧೋನಿ ಪಡೆ ಗೆದ್ದುಕೊಂಡಿದೆ. ಈ ಮೂಲಕ ಏಕದಿನ ಸರಣಿಯನ್ನು ಭಾರತ 3-2 ಅಂತರದಿಂದ ಕೈವಶ ಮಾಡಿಕೊಂಡು ವಿಜಯೋತ್ಸವ ಆಚರಿಸಿದೆ.ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಒಡ್ಡಿದ 270 ರನ್ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿಲೆಂಡ್ ತಂಡ ಕೇವಲ 23.1 ಓವರ್ ಗಳಲ್ಲಿ 79 ರನ್ ಗಳಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. ಭಾರತದ ಪರ ಅಮಿತ್ ಮಿಶ್ರಾ ಉತ್ತಮ ಬೌಲಿಂಗ್ ಪ್ರದರ್ಶಿಸಿದರು (6-2-18-5). ಮೊದಲ ಪಂದ್ಯವಾಡಿದ ಜಯಂತ್ ಚೊಚ್ಚಲ ವಿಕೆಟ್ ಪಡೆದು ಸಂಭ್ರಮಿಸಿದರು. ಬೂಮ್ರಾ, ಯಾದವ್ ತಲಾ 1, ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತರು. ಕಿವೀಸ್ ಪರ ನಾಯಕ ಕೇನ್ ವಿಲಿಯಮ್ಸನ್ 27 ರನ್ ಗಳಿಸಿದರೆ, ಲಾಥಮ್, ಟೇಲರ್ ತಲಾ 19 ರನ್ ಗಳಿಸಿದರು. ಮಿಕ್ಕವರು ಎರಡಂಕಿ ರನ್ ಗಳಿಸಲು ತಿಣುಕಾಡಿದರು.ಭಾರತ ಬ್ಯಾಟಿಂಗ್: ಅಜಿಂಕ್ಯ ರಹಾನೆ 20 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮ 65 ಎಸೆತಗಳಲ್ಲಿ 70 ರನ್ ಗಳಿಸಿದರು. ವಿರಾಟ್ ಕೊಹ್ಲಿ 65 ರನ್ ಹಾಗೂ ನಾಯಕ ಧೋನಿ 41 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಕೇದಾರ್ ಜಾಧವ್ 39 ಹಾಗೂ ಅಕ್ಷರ್ ಪಟೇಲ್ 24 ರನ್ ಗಳಿಸಿ ಟೀಂ ಇಂಡಿಯಾ ಮೊತ್ತ 269/6.ವೇಗಿ ಜಸ್ತ್ರೀತ್ ಬೂಮ್ರಾ ಭಾರತದ ತಂಡಕ್ಕೆ ಮರಳಿದ್ದಾರೆ. ಜಯಂತ್ ಯಾದವ್ ತಮ್ಮ ಚೊಚ್ಚಲ ಪಂದ್ಯವಾಡುತ್ತಿದ್ದಾರೆ. ಕಿವೀಸ್ ತಂಡದಲ್ಲಿ ಆಲ್ ರೌಂಡರ್ ಕೋರೆ ಆಂಡರ್ಸನ್ ಈ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಐದು ಏಕದಿನ ಪಂದ್ಯಗಳ ಸರಣಿ 2-2ರಲ್ಲಿ ಸಮಬಲ ಕಂಡಿದೆ. ಈ ಪಂದ್ಯ ನಿರ್ಣಾಯಕವಾಗಿದೆ. ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರಿಗೆ ಮಹತ್ವದ ಪಂದ್ಯದಲ್ಲಿ ಧೋನಿ ಅವಕಾಶ ನೀಡಿದ್ದಾರೆ.ಅಮ್ಮಂದಿರ ಹೆಸರಿನ ಜರ್ಸಿ: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ತಾಯಿಯ ಹೆಸರನ್ನು ತಮ್ಮ ಜರ್ಸಿಯಲ್ಲಿ ಹಾಕಿಕೊಂಡಿದ್ದರು. ಧೋನಿ ಅವರ ಬೆನ್ನ ಹಿಂದೆ ದೇವಕಿ ಎಂದು ಬರೆದಿದ್ದರೆ, ಕೊಹ್ಲಿ ಅವರ ಜರ್ಸಿಯಲ್ಲಿ ಸರೋಜ್ ಎಂದು ಅವರ ತಾಯಿ ಹೆಸರು ಇತ್ತು. ಇಂದು ಮೊದಲ ಪಂದ್ಯವಾಡಿದ ಜಯಂತ್ ಅವರು ತಮ್ಮ ಅಗಲಿದ(ಹದಿನೇಳು ವರ್ಷಗಳ ಹಿಂದೆ) ತಾಯಿಯ ನೆನಪಲ್ಲಿ ಈ ಪಂದ್ಯ ಅವಿಸ್ಮರಣೀಯ ಎಂದರು.