ಕ್ಯಾನ್ ಬೆರಾ, ಜ.20: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ತಿಣುಕಾಡುತ್ತಿರುವ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮಧ್ಯಮ ಕ್ರಮಾಂಕದ ಉತ್ತಮ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರು ಬುಧವಾರ ನಾಲ್ಕನೇ ಪಂದ್ಯದ ವೇಳೆ ಗಾಯಗೊಂಡಿದ್ದಾರೆ.
ಕ್ಯಾನ್ ಬೆರಾದ ಮನುಕಾ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಅಜಿಂಕ್ಯ ರಹಾನೆ ಅವರು ತಮ್ಮ ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ.
ತಕ್ಷಣವೆ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ರಹಾನೆ ಅವರ ಕೈಗೆ ಹೊಲಿಗೆ ಹಾಕಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ತಿಳಿಸಿದೆ.
ನಾಲ್ಕನೇ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ ಚೇಸ್ ಮಾಡುತ್ತಿದೆ. ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 309,308 ಹಾಗೂ 295ರನ್ ಚೆಚ್ಚಿದರೂ ಭಾರತ ಪಂದ್ಯ ಗೆಲ್ಲಲಾಗಲಿಲ್ಲ.
ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಸತತ ಅರ್ಧಶತಕ ಬಾರಿಸಿ ರಹಾನೆ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಈಗ ಮುಂಬೈನ ಬಲಗೈ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದ ಹೊರಬೀಳಬೇಕಾಗಿದೆ. (ಒನ್ಇಂಡಿಯಾ ಸುದ್ದಿ)