ಬೆಂಗಳೂರು, ಮಾರ್ಚ್. 24 : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗಾವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಟೀಂ ಇಂಡಿಯಾದ ವೇಗಿ ಮಹಮ್ಮದ್ ಶಮಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಸೀಸ್ ವಿರುದ್ಧ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮಹಮ್ಮದ್ ಶಮಿ ಸೇರಿದಂತೆ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಶುಕ್ರವಾರ ಹೇಳಿದೆ. [4ನೇ ಟೆಸ್ಟ್ : ಟೀಂ ಇಂಡಿಯಾದಿಂದ ಶ್ರೇಯಸ್ ಗೆ ದಿಢೀರ್ ಬುಲಾವ್]
ನಾಯಕ ವಿರಾಟ್ ಕೊಹ್ಲಿ ಅವರು ಬಲ ಭುಜದ ನೋವಿನಿಂದ ಬಳಲುತ್ತಿದ್ದು. ಇನ್ನು ಗುಣಮುಖರಾಗಿಲ್ಲವೆಂದು ಹೇಳಲಾಗುತ್ತಿದೆ. ಒಂದು ವೇಳೆ ಕೊಹ್ಲಿ ಅನ್ ಫಿಟ್ ಎನಿಸಿದರೆ ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ಅವರನ್ನು ಬುಲಾವ್ ಮಾಡಿಕೊಂಡಿದೆ.
ಇನ್ನು ತಮ್ಮ ಬಲಗಾಲಿಗೆ ಗಾಯ ಮಾಡಿಕೊಂಡು ಕಳೆದ 2016 ನವೆಂಬರ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ಶಮಿ ಗುಣಮುಖರಾಗಿದ್ದು ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಲದ ಪರ ತಮಿಳುನಾಡು ವಿರುದ್ಧ 4 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.
ಇದರಿಂದ ತಂಡಕ್ಕೆ ಇನ್ನೊಬ್ಬ ವೇಗಿ ಇರಲಿ ಎಂಬ ಕಾರಣಕ್ಕೆ ಇವರನ್ನು ಕೊನೆ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಕರೆಸಿಕೊಂಡಿದೆ. ಈಗಾಗಲೇ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳು ಪ್ರಶಸ್ತಿಗಾಗಿ ಮಾರ್ಚ್ 25ರಂದು ಧರ್ಮಶಾಲಾದಲ್ಲಿ ಕಾದಾಟ ನಡೆಸಲಿವೆ.