ವಿಶಾಖಪಟ್ಟಣಂ, ಫೆ. 14 : ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿದೆ. ಆರ್ ಆಶ್ವಿನ್ ಅವರ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಪ್ರವಾಸಿ ಶ್ರೀಲಂಕಾ ತಂಡವನ್ನು 18 ಓವರ್ ಗಳಲ್ಲಿ 82 ರನ್ನಿಗೆ ನಿಯಂತ್ರಿಸಿ, ನಂತರ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ ಮೂರನೇ ಪಂದ್ಯ ಗೆದ್ದು ಸರಣಿಯನ್ನು 2-1 ಅಂತರದಲ್ಲಿ ಭಾರತ ತನ್ನದಾಗಿಸಿಕೊಂಡಿದೆ.
ಭಾನುವಾರ (ಫೆಬ್ರವರಿ 14) ರಂದು ಮೊದಲ ದ್ವಿಪಕ್ಷಿಯ ಟಿ20 ಸರಣಿ ಗೆದ್ದು ವಿಜಯೋತ್ಸವ ಆಚರಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ 46 ಎಸೆತಗಳಲ್ಲಿ 46 ರನ್ ಹಾಗೂ ಅಜಿಂಕ್ಯ ರಹಾನೆ 22 ಎಸೆತಗಳಲ್ಲಿ 24 ರನ್ ಗಳಿಸಿ ಎರಡನೇ ವಿಕೆಟ್ ಗೆ 55 ರನ್ ಕಲೆ ಹಾಕಿದರು. ಕೊನೆ ಹಂತದಲ್ಲಿ ಮೊದಲ ಪಂದ್ಯವಾಡುತ್ತಿರುವ ಸ್ಪಿನ್ನರ್ ಗುಣರತ್ನೆ ಎಸೆತಗಳನ್ನು ಸಿಕ್ಸ್, ಫೋರಿಗೆ ಕಳಿಸಿದ ಧವನ್ ಜಯ ತಂದಿತ್ತರು.
ಶ್ರೀಲಂಕಾ ಇನ್ನಿಂಗ್ಸ್: ಶನಕ 19ರನ್, ಪೆರೆರಾ 12ರನ್ ಗಳಿಸಿದರೆ ಉಳಿದವರು ಎರಡಂಕಿ ದಾಟಲಿಲ್ಲ. ಆರ್ ಅಶ್ವಿನ್ ನಾಲ್ಕು ಓವರ್ ಗಳಲ್ಲಿ ಒಂದು ಮೇಡನ್ ಸಹಿತ 8ರನ್ನಿತ್ತು 4 ವಿಕೆಟ್ ಕಿತ್ತು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಸುರೇಶ್ ರೈನಾ 2 ಓವರ್ ಗಳಲ್ಲಿ 6 ರನ್ನಿತ್ತು 2 ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು.
ಪುಣೆಯ ಮೊದಲ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡರೆ, ರಾಂಚಿಯಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು.ಈ ಪಂದ್ಯದಲ್ಲಿ ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದ್ದರೆ, ಶ್ರೀಲಂಕಾ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿತ್ತು.
ಆಸ್ಟ್ರೇಲಿಯಾದಲ್ಲಿ 3-0 ಹಾಗೂ ಶ್ರೀಲಂಕಾ ವಿರುದ್ಧ 2-1 ಅಂತರದ ಜಯ ದಾಖಲಿಸುವ ಮೂಲಕ ಟೀಂ ಇಂಡಿಯಾ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮುಂದಿನ ಟೂರ್ನಿ ಏಷ್ಯಾಕಪ್ ಫೆಬ್ರವರಿ 24ರಂದು ಮೀರ್ ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಲಿದೆ.(ಒನ್ಇಂಡಿಯಾ ಸುದ್ದಿ)