ನವದೆಹಲಿ, ಅ.31: ಕರ್ನಾಟಕದ ಪ್ರತಿಭಾವಂತ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ತಮ್ಮ ವೃತ್ತಿ ಬದುಕಿನ ಇನ್ನಿಂಗ್ಸ್ ಮುಗಿಸುತ್ತಿದ್ದಂತೆ ಮತ್ತೊಮ್ಮೆ ರಾಹುಲ್ ಹುಟ್ಟಿಕೊಂಡಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಕೆ.ಎಲ್ ರಾಹುಲ್ ತೋರಿರುವ ಅಮೋಘ ಪ್ರದರ್ಶನ ಅವರನ್ನು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಜೊತೆ ಹೋಲಿಸುವಂತೆ ಮಾಡಿದೆ. ದ್ರಾವಿಡ್ ನನ್ನ ಗುರು ಹೌದು, ಅವರ ಜೊತೆ ಹೋಲಿಕೆ ಮಾಡಿದರೆ ನನಗೆ ಇನ್ನಷ್ಟು ಉತ್ಸಾಹ ಹೆಚ್ಚುತ್ತದೆ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ವಲಯ ಹಾಗೂ ದಕ್ಷಿಣ ವಲಯ ನಡುವೆ ನಡೆದಿರುವ ದುಲೀಫ್ ಟ್ರೋಫಿ ಫೈನಲ್ ನಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಅವರು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 185 ಹೊಡೆದು ತಂಡಕ್ಕೆ ಮುನ್ನಡೆ ದೊರೆಕಿಸಿಕೊಟ್ಟಿದ್ದಾರೆ. ಒಂದು ವೇಳೆ ವಿನಯ್ ಕುಮಾರ್ ನೇತೃತ್ವದ ತಂಡ ಈ ಟ್ರೋಫಿ ಗೆದ್ದರೆ ರಾಹುಲ್ ಅವರು ಎಲ್ಲಾ ನಾಲ್ಕು ಟ್ರೋಫಿ(ರಣಜಿ, ಇರಾನಿ ಕಪ್, ವಿಜಯ್ ಹಜಾರೆ) ಎತ್ತಿ ಹಿಡಿಯುವ ಮೂಲಕ ಹೊಸ ದಾಖಲೆ ಬರೆಯಬಹುದು.
22 ವರ್ಷ ವಯಸ್ಸಿನ ಪ್ರತಿಭಾವಂತ ರಾಹುಲ್ ಅವರು ಮಾತನಾಡಿ, ನಾನು ಚಿಕ್ಕಂದಿನಲ್ಲಿ ಸಚಿನ್ ಹಾಗೂ ದ್ರಾವಿಡ್ ಅವರ ಆಟವನ್ನು ನೋಡಿಕೊಂಡು ಬೆಳೆದವನು, ಅವರಿಬ್ಬರಂತೆ ಹೆಚ್ಚೆಚ್ಚು ರನ್ ಗಳಿಸಬೇಕು ಹೆಚ್ಚು ಕೌಶಲ್ಯಪೂರ್ಣ ಆಟ ಪ್ರದರ್ಶಿಸಬೇಕು ಎಂಬ ಆಶಯ ಹೊಂದಿದ್ದೇನೆ ಎಂದಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಕ್ರಿಕೆಟ್ ತಂಡದ ಪರ ಆಡುವಾಗ ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ ಅವರಿಂದ ಸಾಕಷ್ಟು ಪಾಠ ಕಲಿತೆ. ರಣಜಿಯಲ್ಲಂತೂ ನನ್ನ ಬ್ಯಾಟಿಂಗ್ ಶೈಲಿಯನ್ನು ದ್ರಾವಿಡ್ ಅವರ ಶೈಲಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಇದರಿಂದ ಹೆಮ್ಮೆ ಎನಿಸುತ್ತದೆ. ಅದರೆ, ನಾನು ಕಲಿಯುವುದು ಸಾಕಷ್ಟಿದೆ ಎಂದು ರಾಹುಲ್ ಹೇಳಿದ್ದಾರೆ.
ಕಳೆದ ಋತುವಿನಲ್ಲಿ ಕರ್ನಾಟಕದ ಇತರೆ ಸ್ಟಾರ್ ಆಟಗಾರರಂತೆ ರಾಹುಲ್ ಕೂಡಾ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸುವ ಕನಸಿತ್ತು. ಅದರೆ, ದೈಹಿಕ ಬಳಲಿಕೆ ತೊಂದರೆಯನ್ನು ಇನ್ನೂ ನೀಗಿಸಿಕೊಳ್ಳಬೇಕು ಎಂದು ರಾಹುಲ್ ತಮ್ಮ ರನ್ ದಾಹದ ಬಗ್ಗೆ ವಿವರಿಸಿದರು.(ಐಎಎನ್ಎಸ್)