ಬೆಂಗಳೂರು,ಜ. 28: ಅಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಿರುತ್ತದೆ. ಅಂಪೈರ್ ಬಿಲ್ಲಿ ಬೌಡೆನ್ ಔಟ್ ನೀಡುವ ವಿಧಾನ ನಿಮ್ಮನ್ನು ನಗಿಸುತ್ತದೆ, ಮ್ಯಾಚ್ ಫಿಕ್ಸಿಂಗ್ ಭೂತದ ವಿಡಂಬನೆಯಾಗಿರುತ್ತದೆ. ವಿಶ್ವಕಪ್ ತಯಾರಿ, ಭಾರತ-ಆಸ್ಟ್ರೇಲಿಯಾ-ಇಂಗ್ಲೆಂಡ್ ತ್ರಿಕೋನ ಏಕದಿನ ಸರಣಿಯ ಪಂದ್ಯದ ಫಲಿತಾಂಶಗಳನ್ನು ಕಾಣಬಹುದು.
ಆದರೆ ಇದು ಯಾವ ಕ್ರೀಡಾ ವಾಹಿನಿಯಲ್ಲ. ಬದಲಾಗಿ ಸತೀಶ್ ಆಚಾರ್ಯ ಅವರ ಪೆನ್ಸಿಲ್ ನಿಂದ ಮೂಡಿಬಂದಿರುವ ವ್ಯಂಗ್ಯ ಚಿತ್ರಗಳ ಸರಣಿ ನಿಮಗೆ ಕ್ರಿಕೆಟ್ ನ ಎಲ್ಲ ಕತೆ ಹೇಳುತ್ತದೆ.[ಟ್ವಿಟ್ಟರ್ ನಲ್ಲಿ ಆರ್.ಕೆ.ಲಕ್ಷ್ಮಣ್ ಗೆ ಗೌರವ ಸೂಚಿಸಿದ ವ್ಯಂಗ್ಯಚಿತ್ರಕಾರರು]
ಜನವರಿ 31 ರಿಂದ ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಇಂಡಿಯನ್ ಕಾರ್ಟೂನು ಗ್ಯಾಲರಿ ಯಲ್ಲಿ ಪ್ರಖ್ಯಾತ ಕ್ರಿಕೆಟ್ ವ್ಯಂಗ್ಯ ಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯ ಅವರ ಕಾರ್ಟೂನ್ ಗಳ ಪ್ರದರ್ಶನ ಆರಂಭವಾಗಲಿದ್ದು ಫೆಬ್ರವರಿ 14 ರವರೆಗೆ ನಡೆಯಲಿದೆ.
ಮುಂಬೈ ಮೂಲದ ಪತ್ರಿಕೆಯೊಂದರಲ್ಲಿ 9 ವರ್ಷಗಳ ಕಾಲ ಕೆಲಸ ಮಾಡಿರುವ ಆಚಾರ್ಯ ವ್ಯಂಗ್ಯ ಚಿತ್ರಗಳು ಇಎಸ್ ಪಿಎಸ್ ಕ್ರಿಕ್ ಇನ್ಫೋ, ಸಿಫಿ, ಸಿಟಿ ಟುಡೆ, ಬಾಲಿವುಡ್ ಹಂಗಾಮಾ ಮುಂತಾದ ವೆಬ್ ಪೋರ್ಟಲ್ ಗಳಲ್ಲಿ ಜನಪ್ರಿಯವಾಗಿವೆ.[ವ್ಯಂಗ್ಯಚಿತ್ರಕಾರ ಶ್ರೀಸಾಮಾನ್ಯ' ಆರ್.ಕೆ ಲಕ್ಷ್ಮಣ್ ವಿಧಿವಶ]
ಎಸ್ ಪಿಎಸ್ ಕ್ರಿಕ್ ಇನ್ಫೋದಲ್ಲಿ ಪ್ರಸಾರವಾಗುವ ಹಲವು ವ್ಯಂಗ್ಯಚಿತ್ರಗಳ ಸಂಗ್ರಹವೇ ಜನವರಿ 31 ರಂದು 'ನಾನ್ ಸ್ಟ್ರೈಕರ್' ಹೆಸರಿನ ಪುಸ್ತಕವಾಗಿ ಅನಾವರಣಗೊಳ್ಳಲಿದೆ.
ಸತೀಶ್ ಫೋರ್ಬ್ಸ್ ಮ್ಯಾಗಜಿನ್ ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದ್ದು ಭಾರತದ 24 ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಕಾರ್ಯಕ್ರಮ ಜನವರಿ 31 ರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ಆರಂಭವಾಗಲಿದ್ದು ಕ್ರಿಕೆಟಿಗ ಸದಾನಂದ ವಿಶ್ವನಾಥ್ ಹಾಗೂ ಹಿರಿಯ ಕಾರ್ಟೂನಿಸ್ಟ್ ಪ್ರಭಾಕರ್ ರಾವ್ ಬೈಲ್ ಹಾಜರಿರುವರು.
ಇಂಡಿಯನ್ ಕಾರ್ಟೂನು ಗ್ಯಾಲರಿ ಎಲ್ಲಿದೆ?
ಬೆಂಗಳೂರಿನ ಎಂಜಿ ರಸ್ತೆಯ ಕಿಡ್ಸ್ ಕೆಂಪ್ ಬಳಿ ಇಂಡಿಯನ್ ಕಾರ್ಟೂನ್ ಗ್ಯಾಲರಿಯಿದೆ. ಟ್ರಿನಿಟಿ ವೃತ್ತದ ಸಮೀಪ ಬಸ್ ಇಳಿದರೆ ಸುಲಭವಾಗಿ ತಲುಪಬಹುದು.
ಸತೀಶ್ ಆಚಾರ್ಯ ಫೇಸ್ ಬುಕ್ ಪೇಜ್