ಬೆಂಗಳೂರು, ಡಿ. 18: ಭಾರತದ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರು ಮೈಸೂರು ಸ್ಯಾಂಡಲ್ ರಾಯಭಾರಿ ಆಗಲಿದ್ದಾರೆ. ಈ ಕುರಿತಂತೆ ಅಶ್ವಿನಿ ಅವರ ಜತೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಲಿಮಿಟೆಡ್( ಕೆಎಸ್ಡಿಎಲ್) ಅಧ್ಯಕ್ಷ ಎ.ಸಿ.ಕೇಶವಮೂರ್ತಿ ಅವರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಕೆಎಸ್ಡಿಎಲ್ ಸಂಸ್ಥೆಯ ಪ್ರಮುಖ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪು, ಶಾಂಪೂ ಇನ್ನಿತರೆ ಬ್ರ್ಯಾಂಡ್ ಗಳ ಪರ ಅಶ್ವಿನಿ ಅವರು ಪ್ರಚಾರ ನಡೆಸಲಿದ್ದಾರೆ. ನೈಜ, ಪರಿಶುದ್ಧ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸಲು ಪೊನ್ನಪ್ಪ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಕೇಶವಮೂರ್ತಿ ಅವರು ಹೇಳಿದರು.
2016ರ ಮೇ206ಕ್ಕೆ ನಮ್ಮ ಸಂಸ್ಥೆ ಶತಮಾನೋತ್ಸವ ಆಚರಿಸಲಿದೆ. ಈ ಸಂದರ್ಭದಲ್ಲಿ ಮೈಸೂರು ಸ್ಯಾಂಡಲ್ ಶತಮಾನೋತ್ಸವ ಸ್ಮಾರಕ ಸಾಬೂನು ಹಾಗೂ ಮೈಸೂರು ಸ್ಯಾಂಡಲ್ ಫೇಸ್ಪ್ಯಾಕ್ ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗುವುದು. 100ಗ್ರಾಂ ವಿಶೇಷ ಸೋಪಿನ ಬೆಲೆ 100ರು ಗೆ ಮಾರಾಟ ಮಾಡಲಾಗುತ್ತದೆ.
ಡಿ.18ರಿಂದ 27ರವರೆಗೆ ತುಮಕೂರಿನಲ್ಲಿ ಸಾಬೂನು ಮೇಳ ಆಯೋಜಿಸಲಾಗಿದೆ. ರೈತರಿಗೆ ಹೆಚ್ಚೆಚ್ಚು ಶ್ರೀಗಂಧ ಬೆಳೆಸಲು ಉತ್ತೇಜಿಸಲಾಗುತ್ತಿದೆ ಎಂದರು.[ಮೈಸೂರು ಸ್ಯಾಂಡಲ್ ವಾಸನೆಯಿಂದ ಧೋನಿ ವಂಚಿತ]
2006ರಲ್ಲಿ ಎಂಎಸ್ ಧೋನಿ ಅವರು ಕೆಎಸ್ ಡಿಎಲ್ ಜೊತೆ ಒಪ್ಪಂದ ಮಾಡಿಕೊಂಡು 84 ಲಕ್ಷ ರು.ಗೆ ಸ್ಯಾಂಡಲ್ ಸೋಪ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿ ಕೈ ಕೊಟ್ಟಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ವಲಯದ ಕೆಎಸ್ ಡಿಎಲ್ ಸಂಸ್ಥೆ ತನ್ನ ಲಾಭವನ್ನು ಶೇ 15ರಷ್ಟು ಹೆಚ್ಚಿಸಿಕೊಂಡು 45ಕೋಟಿ ರು ಗಳ್ಸಿಇತ್ತು. ಸಂಸ್ಥೆಯ ಟರ್ನ್ ಓವರ್ 407 ಕೋಟಿ ರು ಮುಟ್ಟಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಲಾಭದ ಜೊತೆಗೆ ಆದಾಯವನ್ನು 450ಕೋಟಿ ರುಗೆ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕೇಶವಮೂರ್ತಿ ಹೇಳಿದರು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್ ಸೈಟ್ ನೋಡಬಹುದು.