ಪುಣೆ, ಡಿ.22: ವಿಶ್ವಕಪ್ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡದೆ ಕಡೆಗಣಿಸಿದ ಬಿಸಿಸಿಐಗೆ ಎಡಗೈ ಬ್ಯಾಟ್ಸ್ ಮನ್, ವಿಶ್ವಕಪ್ ವೀರ ಯುವರಾಜ್ ಸಿಂಗ್ ತಕ್ಕ ಉತ್ತರ ನೀಡಿದ್ದಾರೆ. ಸತತ ಶತಕ ಸಿಡಿಸಿರುವ ಯುವರಾಜ್ ಸಿಂಗ್ ತಮ್ಮ ಆಟ ಇನ್ನೂ ಕಳೆಗುಂದಿಲ್ಲ ಎಂದು ಸಾಬೀತು ಮಾಡಿದ್ದಾರೆ.
ರಣಜಿ ಟೂರ್ನಿಯಲ್ಲಿ ಪಂಜಾಬ್ ಪರ ಆಡುವ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 59 ರನ್ ಗಳಿಸಿ ನಂತರ ಎರಡನೇ ಇನ್ನಿಂಗ್ಸ್ ನಲ್ಲಿ 130 ರನ್ (160 ಎಸೆತ, 14X4, 5X6) ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು.
ಮಹಾರಾಷ್ಟ್ರ ವಿರುದ್ಧ ಪುಣೆಯ ಎಂಸಿಎ ಮೈದಾನದಲ್ಲಿ ನಡೆದಿರುವ ಎರಡನೇ ಪಂದ್ಯದಲ್ಲಿ ಸೋಮವಾರ ಮತ್ತೊಮ್ಮೆ ಯುವರಾಜ್ ಸಿಂಗ್ ಶತಕ ಸಿಡಿಸಿದ್ದಾರೆ. [30 ಮಂದಿ ಟೀಂ ಇಂಡಿಯಾ ಪ್ರಕಟ]
ಟೀಂ ಇಂಡಿಯಾ ಪರ ಡಿಸೆಂಬರ್ 11, 2013ರಂದು ಯುವರಾಜ್ ಸಿಂಗ್ ಕೊನೆ ಏಕದಿನ ಕ್ರಿಕೆಟ್ ಪಂದ್ಯವಾಡಿದ್ದರು. ಇದಾದ ಮೇಲೆ ಕಳೆದ ಏಪ್ರಿಲ್ ನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ಭಾರತದ ಜರ್ಸಿ ಧರಿಸಿದ್ದರು. ಅದರೆ, ವಿಶ್ವಕಪ್ 30 ಜನ ಸದಸ್ಯರ ಸಂಭಾವ್ಯ ಪಟ್ಟಿಯಿಂದ ಯುವರಾಜ್ ಸಿಂಗ್ ಅವರನ್ನು ಹೊರಹಾಕಲಾಗಿದ್ದು, ಬಿಸಿಸಿಐ ಆಯ್ಕೆಯನ್ನು ಸಮರ್ಥಿಸಿಕೊಂಡಿತ್ತು.