ಓಲೆ : ಗೋಹತ್ಯೆ ವಿರೋಧಿಸುವವರಿಗೆ ಕೆಲ ಪ್ರಶ್ನೆಗಳು
'ಕೃತಘ್ನ ಮಾತ್ರ ಹಸುವಿನ ಕೆಚ್ಚಲಿಗೆ ಚೂರಿ ಹಾಕುತ್ತಾನೆ' ಎಂಬ, ಗೋಹತ್ಯೆ ನಿಷೇಧ ಬೆಂಬಲಿಸಿ ರಘು ಶರ್ಮಾ ಅವರು ಬರೆದಿದ್ದ ಲೇಖನಕ್ಕೆ ಓದುಗರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಚಲನಚಿತ್ರ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಯಾಗಿ ರಘು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಗೋಹತ್ಯೆ ಯಾಕೆ ನಿಷೇಧಿಸಬಾರದು ಎಂದು ಸ್ವರ್ಣ ಕುಮಾರ್ ಎಂಬುವವರು ವ್ಯತಿರಿಕ್ತವಾದ ವಾದ ಮಂಡಿಸಿದ್ದಾರೆ. ಈ ವಾದಕ್ಕೆ ನಿಮ್ಮ ಪ್ರತಿವಾದವೇನು ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ಬರೆಯಿರಿ - ಸಂಪಾದಕ.
ಪ್ರಾಣಿ ಹತ್ಯೆ ವಿರೋಧದ ನೆಲೆಯಿಂದ ಹಸುಮಾಂಸ ತಿನ್ನುವುದನ್ನು ವಿರೋಧಿಸುವವರಿಗೆ ಈ ಪ್ರಶ್ನೆಗಳು - ಕೀಟನಾಶಕ (ಜೈವಿಕ ಅಥವಾ ರಾಸಾಯನಿಕ) ಬಳಸಿ ಬೆಳೆದ ಸಸ್ಯಾಹಾರ, ಮಾಂಸಾಹಾರಕ್ಕಿಂತ ಹೇಗೆ ಉತ್ತಮ? ಕೀಟ ಕೊಲ್ಲುವುದು ಪ್ರಾಣಿ ಕೊಲ್ಲುವುದಕ್ಕಿಂತ ಕಡಿಮೆ ಹಿಂಸೆಯೇ? ಕೀಟಗಳನ್ನು ಕೊಂದರೆ ಪರವಾಗಿಲ್ಲ, ಹಸು, ಕುರಿ, ಮೀನು ಇತ್ಯಾದಿ ಕೊಲ್ಲುವುದು ಸರಿಯಲ್ಲ ಎನ್ನಲು, ಮನುಷ್ಯರಾದ ನಮಗೆ ಹಕ್ಕಿದೆಯೇ?
ನಾಲಿಗೆ ಚಪಲ ತೀರಿಸಿಕೊಳ್ಳಲು ಮಾಂಸಾಹಾರ (ಮತ್ತು ಅದರಿಂದಾಗುವ ಪ್ರಾಣಿ ಹತ್ಯೆ) ವಿರೋಧಿಸುವವರಿಗೆ ಈ ಪ್ರಶ್ನೆಗಳು - ಚಪಲವೇ ತಪ್ಪು ಎನ್ನುವುದಾದರೆ ಸಸ್ಯಾಹಾರಿ ಪಲಾವು ತಿನ್ನುವುದನ್ನೂ ನಿಷೇಧಿಸಬೇಕಲ್ಲವೇ (ಭತ್ತ ಮತ್ತು ತರಕಾರಿ ಬೆಳೆಯಲು ಕೀಟಗಳ ಹತ್ಯೆಯಾಗಿದೆ ಮತ್ತು ಅದರಿಂದ ಮಾಡಿದ ಅನ್ನ/ಪಲಾವು ತಿಂದು ಚಪಲ ತೀರಿಸಿ ಕೊಳ್ಳಲಾಗುತ್ತಿದೆ)? [ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್]
ಅಥವಾ ನೀವು ಮಿತಿಮೀರಿರ ಚಪಲ ತಪ್ಪು, ಮಿತಿಯಲ್ಲಿರುವ ಚಪಲ ತೀರಿಸಿಕೊಳ್ಳಲು ಅನುಮತಿ ಕೋಡೋಣ ಎಂದರೆ - ಕೆಲವು ಹಸುಗಳನ್ನು ಕೊಂದು ತಿನ್ನಲು ಅನುಮತಿ ಕೊಡಬೇಕಲ್ಲವೇ? ಅಥವಾ ಕೀಟನಾಶಕಗಳ ಬಳಕೆಯನ್ನೂ ವಿರೋಧಿಸಬೇಕಲ್ಲವೇ? ಕೀಟನಾಶಕಗಳ ಬಳಸಿದ ಸಸ್ಯಾಹಾರ ತ್ಯಜಿಸಬೇಕಲ್ಲವೇ? ಇವತ್ತಿನ ಮನುಷ್ಯ ಜಗತ್ತಿಗೆ ಕೀಟನಾಶಕಗಳನ್ನು ಬಳಸದೆ ಆಹಾರ ಬೆಳೆಯಲು ಸಾಧ್ಯವಾ?
ಬೇರೆ ಪ್ರಾಣಿಗಳನ್ನು ಕೊಂದು ತಿಂದರೆ ಪರವಾಗಿಲ್ಲ, ಆದರೆ "ನಮ್ಮ" ಸಂಸ್ಕೃತಿಯಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ ಹಾಗಾಗಿ "ನಿಮ್ಮ" ಸಂಸ್ಕೃತಿಯ ಕಥೆ ನಮಗೆ ಹೆಳಬೇಡಿ, ನಾವು ನಿಮಗೆ ಹಸು ಕೊಲ್ಲಲು ಬಿಡುವುದಿಲ್ಲ ಎನ್ನುವವರಿಗೆ, ಈ ಪ್ರಶ್ನೆಗಳು - ಹಸು ತಿನ್ನುವ ಜನರಿರುವ ಬೇರೆದೇಶಗಳೊಂದಿಗೆ ವ್ಯವಹರಿಸುವುದು ಸರಿಯೋ? ಅರಬ್ಬೀ ದೇಶಗಳಿಂದ ಎಣ್ಣೆ ಕೊಳ್ಳಬಹುದೇ? ಅದೇನೋ ಸರಿ ನೈಸರ್ಗಿಕವಾದದ್ದು. ಆದರೆ ಮನುಷ್ಯರ ಜೀವ ಉಳಿಸುವ ಔಷಧಗಳು? ಅದು ಹಸುಗಳ ಮೇಲೆ ಪ್ರಯೋಗಿಸಿ ತಯಾರಿಸಿರುತ್ತಾರೆ. ಅದನ್ನು ಬಳಸಬಹುದೋ? [ಮುಸ್ಲಿಂ ಮಹಿಳೆಯರ ಪೂಜೆ ಸ್ವೀಕರಿಸಿದ ಗೋವು!]
ಇದನ್ನೆಲ್ಲಾ ನೋಡಿದರೆ ಆಹಾರಕ್ಕಾಗಿ ಮತ್ತು ಮನುಕುಲದ ಬದುಕಿಗಾಗಿ ಹಿಂಸೆಯ ಬಳಕೆ ಅವಶ್ಯಕ ಎಂದು ತೋರುತ್ತದೆ! ಉಳಿಯುವ ಪ್ರಶ್ನೆ ಏನೆಂದರೆ, ಎಷ್ಟರ ಮಟ್ಟಿನ ಹಿಂಸೆ? ಯಾವ ರೀತಿಯ ಹಿಂಸೆ? ಹಸುಗಳಿಗೆ ಒಂದು ನ್ಯಾಯ, ಮೀನುಗಳಿಗೆ ಒಂದು ನ್ಯಾಯ ಮಾಡುವುದು ನ್ಯಾಯವೇ? ಈಗಿನ ಕಾಲದ ತಿಳಿವಳಿಕೆಯ ಪ್ರಕಾರ, ಪರಿಸರದಲ್ಲಿ ಸಮತೋಲನ ಉಳಿಸುವುದು ಮುಖ್ಯವೆಂದು ತೋರುತ್ತದೆ. ಅದಕ್ಕಾಗಿ ಏನನ್ನು ತಿನ್ನಬೇಕೋ ಅದನ್ನು ತಿನ್ನಬೇಕು. ಎಷ್ಟನ್ನು ತಿನ್ನಬೇಕೋ ಅಷ್ಟನ್ನು ತಿನ್ನಬೇಕು ಅಲ್ಲವೇ?
ಸಂಸ್ಕೃತಿಗಳ ವಿಚಾರದಲ್ಲಿ, ನಾಯಿ ತಿನ್ನುವ ಸಂಸ್ಕೃತಿಗಳಿದ್ದಾವೆ(ಭಾರತದಲ್ಲೂ ಇದ್ದಾವಂತೆ), ಹಾವು ತಿನ್ನುವ ಸಂಸ್ಕೃತಿಗಳಿದ್ದಾವೆ, ಮತ್ತು ಜನರನ್ನೂ ತಿನ್ನುವ ಸಂಸ್ಕೃತಿಗಳೂ ಇದ್ದವು. ಅಷ್ಟಲ್ಲದೇ, ತುಂಬಾ ವಿಪರೀತದ ಸಂದರ್ಭಗಳಲ್ಲಿ ಎಲ್ಲ ಸಂಸ್ಕೃತಿಯವರೂ ಜನರನ್ನೂ ತಿಂದಾರು ಹೊಲಸನ್ನೂ ತಿಂದಾರು. ಹಿಂದೂಗಳಲ್ಲಿ ಹಸುವಿನ ಉಚ್ಚೆ ಕುಡಿಯುವುದು (ಪಂಚಗವ್ಯ) ಈಗಲೂ ನಡೆಯುತ್ತದೆ.
ಈಗಿನ ಭಾರತದ ಸಂದರ್ಭದಲ್ಲಿ, ಹಿಂದೂ ಸಂಸ್ಕೃತಿ ಎಂದು ಏನನ್ನು ಕರೆಯಲಾಗುತ್ತಿದೆಯೋ ಅದರಲ್ಲಿ ಹಸು ತಿನ್ನುವುದನ್ನು ಒಪ್ಪುವುದಿಲ್ಲ (ಸನಾತನ ಧರ್ಮದಲ್ಲಿ ಹಸು ತಿನ್ನುತ್ತಿದ್ದರೆಂದು ಪುರಾಣದ ಕಥೆಗಳಲ್ಲಿದೆ). ಅದೇ ರೀತಿ ಮುಸಲ್ಮಾನರಲ್ಲಿ ಹಂದಿ ತಿನ್ನುವುದನ್ನು ಒಪ್ಪುವುದಿಲ್ಲ. ಭಾರತದ ಹಲವು ಭಾಗಗಳಲ್ಲಿ ಹಲವು ಆಹಾರ ಪದ್ಧತಿಗಳಿವೆ. ಕೆಲವು ಕಡೆ ನಾಯಿ ತಿನ್ನುವುದೂ ಉಂಟೆಂದು ಕೇಳಿದ್ದೇನೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಹಸು ಕೊಲ್ಲುವುದು/ತಿನ್ನುವುದು ತಪ್ಪು ಅಥವಾ ಸರಿ ಎಂದು ಕಡ್ಡಿ ತುಂಡಾದಂತೆ ಹೇಳಲಿಕ್ಕೆ ಬರುವುದಿಲ್ಲ.
ಹಾಗಾಗಿ ಹಸುಕೊಲ್ಲಬಾರದೆಂಬ ಕಾನೂನಿನಲ್ಲಿ ಎರಡು ವಿಚಾರಗಳು ಅಡಕವಾಗಿವೆ ಎಂದು ಮೇಲ್ನೋಟಕ್ಕೆ ತೋರುತ್ತದೆ - ತಾವು ಹಿಂದೂ ಸಂಸ್ಕೃತಿಯವರು ಎಂದು ನಂಬಿದವರ ಧಾರ್ಮಿಕ ಭಾವನೆಗೆ ಸಮಾಧಾನವಾಗುವಂತೆ ಕಾನೂನು ಮಾಡುವುದು. ಈ ರೀತಿಯಲ್ಲಿ, ಈ ಸಂಸ್ಕೃತಿಯನ್ನು ಒಪ್ಪದ ಬೇರೇ ಜನಾಂಗಗಳವರನ್ನು (ದಲಿತರು, ಬೌದ್ಧರು, ಮುಸಲ್ಮಾನರು, ಕ್ರೈಸ್ತರು, ಪಾರ್ಸಿಗಳು, ಚಾರ್ವಾಕರು, ಬುಡಕಟ್ಟು ಜನಾಂಗದವರು, ಇತ್ಯಾದಿ) ರಾಜಕೀಯವಾಗಿ ತುಳಿಯುವುದು.
ಒಂದೇ ಜಾಗದಲ್ಲಿ ಬದುಕಿ ಜೀವನ ನಡೆಸಬೇಕಾದ ಸಂಸ್ಕೃತಿಗಳ ನಡುವಿನ ರಾಜಕೀಯ ಗುದ್ದಾಟದಲ್ಲಿ, ಬೇರೆ ಸಂಸ್ಕೃತಿಗಳ ಬಗ್ಗೆ ಅಸಹನೆ ತುಂಬಿದ ಹಿಂದೂಗಳ ಕೈ ಮೇಲಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.