ನ. 28 ಆಕ್ರೋಶ್ ದಿವಸ್ : ನಾಲ್ಕು ಜನ ಏನಂತಾರೆ?
ಬಂದ್ ಹೆಸರು ಕೇಳಿದರೆ ಕೆಲವರಿಗೆ ಸಂತೋಷ, ಕೆಲವರಿಗೆ ದುಃಖ, ಕೆಲವರಿಗೆ ಆತಂಕ, ಕೆಲವರಿಗೆ ಏನೂ ಅನಿಸುವುದಿಲ್ಲ. ಬಂದ್ಗೆ ಇರುವ ಭಾವನೆಗಳಿಗೆ ನಾನಾ ಮುಖಗಳು! ಒಳ್ಳೇದಾಯ್ತಪ್ಪ ಇನ್ನೊಂದು ರಜಾ ಸಿಕ್ತು ಅಂತ ಖುಷಿ ಪಡುವವರೇ ಜಾಸ್ತಿ. ಕೆಲವರಿಗೆ ಚೆಲ್ಲಾಟವಾದರೆ, ಮಕ್ಕಳ ತಂದೆತಾಯಂದಿರಿಗೆ ಪ್ರಾಣಸಂಕಟ! ಶಾಲೆ ಇರುತ್ತೋ ಇಲ್ವೋ ಎಂಬ ದುಗುಡ.
ಬಂದ್ ಗಳಿಗೆ, ಹರತಾಳಗಳಿಗೆ, ಮುಷ್ಕರಗಳಿಗೆ ಭಾರತದಲ್ಲಿ ಬರವೇ ಇಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಂದ್ ಗಳು ಮಹತ್ವವನ್ನೂ ಕಳೆದುಕೊಳ್ಳುತ್ತಿವೆ. ಏನೇ ಆಗಲಿ, ಮತ್ತೊಂದು ಪ್ರತಿಭಟನೆ ಎದುರಾಗಿದೆ. ಅಪನಗದೀಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಪಟ್ಟುಹಿಡಿದಿರುವ ವಿರೋಧ ಪಕ್ಷಗಳು ನವೆಂಬರ್ 28ರಂದು ಆಕ್ರೋಶ್ ದಿವಸ್ ಆಚರಿಸಲಿದ್ದಾರೆ. [ಧೈರ್ಯವಿದ್ರೆ ಲೋಕಸಭೆ ವಿಸರ್ಜಿಸಿ, ನರೇಂದ್ರ ಮೋದಿಗೆ ಮಾಯಾವತಿ ಚಾಲೆಂಜ್]
ಬೇರೆ ಯಾವುದೇ ಬಂದ್ ಆಗಿದ್ದರೆ ಕಚೇರಿಗೆ ಹೋಗುವವರು, ವಾವ್ ಸೋಮವಾರವೂ ರಜಾ ಅಂತ ಮಜಾ ಮಾಡುತ್ತಿದ್ದರೆ. ಆದರೆ, ವಿರೋಧಪಕ್ಷಗಳು ಕರೆದಿರುವ ಪ್ರತಿಭಟನೆಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಇದೆಯಲ್ಲ, ಅದು ವಿಶಿಷ್ಟವೂ, ಅಸಹಜವೂ ಆಗಿದೆ.
ನೀವು ಈ ದೇಶವನ್ನು ಪ್ರೀತಿಸುವವರಾಗಿದ್ದರೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಡಿ. ಪ್ರತಿಯಾಗಿ, ಆ ದಿನ ಮತ್ತೊಂದು ಗಂಟೆ ಹೆಚ್ಚು ಕೆಲಸ ಮಾಡೋಣ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದವರ ವಿರುದ್ಧವೇ ಯುದ್ಧ ಸಾರಿರುವವರಿಗೆ ತಕ್ಕ ಪಾಠ ಕಲಿಸೋಣ ಎಂಬ ಒಕ್ಕೊರಲಿನ ಕೂಗು ಸೋಷಿಯಲ್ ಮೀಡಿಯಾದಲ್ಲಿ ಅಡ್ಡಾಡುತ್ತಿದೆ. [ಕಪ್ಪು ಹಣ ಬದಲಿಸುವ ದಂಧೆಯ ಕೈಗಳು, ಸರಕಾರ ಏನ್ ಮಾಡ್ಬೇಕು?]
3 ಗಂಟೆ ಹೆಚ್ಚಿಗೆ ಕೆಲಸ ಮಾಡುತ್ತೇವೆ
ಮೋದಿಯವರಿಗೆ ನಮ್ಮ ಬೆಂಬಲ ಯಾವಾಗಲು ಇದೆ. ಬಂದ್ ದಿನ 3 ಗಂಟೆ ಹೆಚ್ಚಿಗೆ ಕೆಲಸ ಮಾಡುತ್ತೇವೆ. ಪ್ರಜೆಗಳ ಬೆಂಬಲ ಇಲ್ಲದ ಬಂದ್ ಹೇಗೆ ನಡೆಯುತ್ತೆ ಅಂತ ನಾವು ನೋಡ್ತೇವೆ. ಮೋದಿ ಸಾಹೇಬರೇ ನಿಮ್ಮ ಜೊತೆ ನಾವು ಯಾವಾಗ್ಲೂ ಇರುತೇವೆ. ನಮಗೆ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ. ನೀವು ಯಾರಿಗೂ ತಲೆ ಬಾಗಬೇಡಿ ಧೈರ್ಯವಾಗಿ ಮುಂದುವರಿಯಿರಿ. ಮೋದಿ ಸಾಹೇಬ್ರಿಗೆ ಜೈ. ಜೈ ಜೈ ಎಂದಿದ್ದಾರೆ ಶೈಲಾ ಎನ್ನುವವರು.
ಕೋತಿ ಮೊಸರನ್ನ ತಿಂದು
ಹಣ ಕಳೆದುಕೊಂಡಿರುವುದು ಬಡ ಜನರಲ್ಲ, ಪಶ್ಚಿಮ ಬಂಗಾಳದಲ್ಲಿ ಬಡ ಜನರ ದುಡ್ಡನ್ನು ಶಾರದಾ ಚಿಟ್ ಫಂಡ್ಸ್ ಹೆಸರಿನಲ್ಲಿ ಗುಳುಂ ಮಾಡಿದ ಮಮತಾ ಬ್ಯಾನರ್ಜಿ ಮತ್ತು 70 ವರ್ಷಗಳಿಂದ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು. ಕೋತಿ ಮೊಸರನ್ನ ತಿಂದು ಮೇಕೆ ಬಾಯ್ಗೆ ಒರಸಿದಂತೆ ಇವರುಗಳು ಕದ್ದು ತಿಂದು ಈಗ ಬಡ ಜನರನ್ನು ತೋರಿಸಿ ತಮ್ಮ ಕಪ್ಪು ಹಣ ಉಳಿಕೊಳ್ಳುವ ಹುನ್ನಾರ. ಇವರಿಗೆ ಜನರೇ ಸರಿಯಾಗಿ ಬುದ್ಧಿ ಕಲಿಸಬೇಕು. ಎಂದಿರುವವರು ಟ್ರೂ ಇಂಡಿಯನ್.
ಚಪ್ಪಲಿ ಪೂಜೆ ಗ್ಯಾರಂಟಿ
ನೋಟು ನಿಷೇಧ ವಿರೋಧಿಸಿ ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಹ ಅದರ ಪರಿವೆ ಇಲ್ಲದಂತೆ ಮಹಿಳಾ ಸಿಬ್ಬಂದಿಯೊಬ್ಬರು ಗಿಡಗಳಿಗೆ ನೀರುಣಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಂದ್ರೆ ಬರುವ 28ನೇ ತಾರೀಖು ನಡೆಯುವ ಬಂದ್ ಗೆ ಸಾರ್ವಜನಿಕರಿಂದ ಇದೆ ಪ್ರತಿಕ್ರಿಯೆ. ನೋಡ್ತಾ ಇರಿ ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಬಂದ್ ಮಾಡಲು ಹೋಗುವವರಿಗೆ ಚಪ್ಪಲಿ ಪೂಜೆ ಗ್ಯಾರಂಟಿ ಎಂದಿರುವವರು ಕಾಂತಿವೀರ ಎನ್ನುವವರು.
ಯಾರೂ ಇದ್ದಕೆ ಬೆಂಬಲ ಕೊಡುತ್ತಿಲ್ಲ
ಸಾಮಾನ್ಯ ಜನರ ಬೆಂಬಲವಿಲ್ಲದ ಬಂದ್. ಇದು ಬರಿ ರಾಜಕೀಯ ಪಕ್ಷಗಳ ಬಂದ್. ಯಾರೂ ಇದ್ದಕೆ ಬೆಂಬಲ ಕೊಡುತ್ತಿಲ್ಲ. ಯಾಕೆ ಬಂದ್? ದೇಶಕ್ಕೆ ಏನಾದರು ಒಳ್ಳೇದು ಆಗುತೆ ಅಂದ್ರೆ ನಿಮಗೆ ಸಹಿಸೋಕೆ ಆಗೋಲ್ವಾ? ಎಂದು ಪ್ರಶ್ನಿಸಿದ್ದಾರೆ ಸಂತೋಷ್ ಕುಮಾರ್.
ಪೋಲ್ : ಬಂದ್ ಗೆ ಖಂಡಿತ ಬೆಂಬಲ ಇಲ್ಲ
ಇದೇ ವಿಷಯವನ್ನು ಮುಂದಿಟ್ಟುಕೊಂಡು ಒನ್ಇಂಡಿಯಾ ಕನ್ನಡ ಒಂದು ಪ್ರಶ್ನೆ ಕೇಳಿತ್ತು. ಅಪನಗದೀಕರಣ ವಿರೋಧಿಸಿ ಕರೆಯಲಾಗಿರುವ ನ.28ರ 'ಭಾರತ್ ಬಂದ್'ಗೆ ನಿಮ್ಮ ಬೆಂಬಲವಿದೆಯಾ? ಎಂಬ ಪ್ರಶ್ನೆಗೆ... ಶೇ.84ರಷ್ಟು ಜನ ಖಂಡಿತ ಇಲ್ಲ, ಮೋದಿ ಬೊಂಬಾಟ್ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಶೇ.11ರಷ್ಟು ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದರೆ, ಶೇ.5ರಷ್ಟು ಮಾತ್ರ ಈ ನಿಷೇಧವನ್ನು ವಾಪಸ್ ಪಡೆಯಲಿ ಎಂದು ಅಭಿಮತವಿತ್ತಿದ್ದಾರೆ.