ಬಿಎಸ್ವೈ ಬಿಜೆಪಿಗೆ ಏಕೆ ಮರಳಬಾರದು - 5 ಕಾರಣ
ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮರಳಿ ಬಿಜೆಪಿ ಸೇರುತ್ತಾರಾ? ಎಂಬ ಸುದ್ದಿಗಳ ಬೆನ್ನಲ್ಲೇ ಅವರು ಕೆಜೆಪಿಯಲ್ಲೇ ಇರಬೇಕು ಎಂಬ ಕೂಗು ಹುಟ್ಟಿಕೊಂಡಿದೆ. ಅವರು ನಮ್ಮ ಬೆಂಬಲಕ್ಕೆ ಇದ್ದರೆ, ನಾವು ಪಕ್ಷ ಸಂಘಟಿಸುತ್ತೇವೆ ಎಂದು ಪಕ್ಷದ ಕಾರ್ಯಕರ್ತರು ಭರವಸೆ ನೀಡಿದ್ದಾರೆ.
ಬಿಜೆಪಿಗೆ ಯಡಿಯೂರಪ್ಪ ಅವರನ್ನು ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಒನ್ ಇಂಡಿಯಾ ಕನ್ನಡದ ಸೋಮವಾರ ಯಡಿಯೂರಪ್ಪ ಬಿಜೆಪಿಗೆ ಏಕೆ ಮರಳಬೇಕು ಎಂಬ ಲೇಖನ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಓದುಗರಾದ ನೀಲಕಂಠ್ ಅವರು, ಯಡಿಯೂರಪ್ಪ ಬಿಜೆಪಿಗೆ ಮರಳಬಾರದು ಎಂದು ಪ್ರತಿಪಾದಿಸಿದ್ದಾರೆ.(ಯಡಿಯೂರಪ್ಪ ಬಿಜೆಪಿಗೆ ಏಕೆ ಮರಳಬೇಕು)
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿ, ಕಳೆದು ಹೋಗಿರುವ ತನ್ನ ಜನಪ್ರಿಯತೆ ಮರಳಿ ಪಡೆಯಬೇಕಾದರೆ, ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯವಾದರೂ, ಅವರು ಕೆಜೆಪಿ ತೊರೆಯಬಾರದು ಎಂದು ನೀಲಕಂಠ್ ಒತ್ತಾಯಿಸಿದ್ದಾರೆ.
ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಬಿಜೆಪಿಗೆ ಯಡಿಯೂರಪ್ಪ ಮರಳಿದರೆ, ಅವರ ಪ್ರತಿಷ್ಠೆ ಏನಾಗಲಿದೆ, ಕೆಜೆಪಿ ಪಕ್ಷದ ಸ್ಥಿತಿ ಏನಾಗಲಿದೆ? ಎಂಬುದು ನೀಲಕಂಠ್ ಅವರ ಪ್ರಶ್ನೆಯಾಗಿದೆ. ಆದ್ದರಿಂದ ಯಡಿಯೂರಪ್ಪ ಬಿಜೆಪಿಗೆ ಮರಳಬಾರದು ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ.
ಕೆಜೆಪಿ ಭವಿಷ್ಯವೇನು?
ಬಿಜೆಪಿಯಿಂದ ಸಿಡಿದು ನಿಂತ ಬಿ.ಎಸ್.ಯಡಿಯೂರಪ್ಪ ಕೆಲವು ತಿಂಗಳುಗಳ ಅಂತರದಲ್ಲಿ ಕೆಜೆಪಿ ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದಾರೆ. ವಿಧಾನಸಭೆಯಲ್ಲಿ ಪಕ್ಷದ ಆರು ಜನ ಶಾಸಕರಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಶೇ 10ರಷ್ಟು ಮತಗಳನ್ನು ಪಡೆದಿದ್ದಾರೆ. ಇದು ಕಡಿಮೆ ಸಾಧನೆಯಲ್ಲ. ಯಡಿಯೂರಪ್ಪ ಬಿಜೆಪಿಗೆ ಮರಳಿದರೆ ಕೆಜೆಪಿ ಭವಿಷ್ಯವೇನು ಎಂಬ ಪ್ರಶ್ನೆಯೂ ಇದೆ.
ಯಾವ ಹುದ್ದೆ ದೊರೆಯುತ್ತದೆ
ಬಿಜೆಪಿಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ ಎಲ್ಲಾ ಹುದ್ದೆಗಳನ್ನು ನಿಭಾಯಿಸಿದ್ದಾರೆ. ನಾಯಕರ ಒತ್ತಡಗಳಿಗೆ ಮಣಿದು, ಅವರು ಬಿಜೆಪಿಗೆ ಮರಳಿದರೂ ಅವರಿಗೆ ಯಾವ ಹುದ್ದೆ ನೀಡುತ್ತಾರೆ. ಆದ್ದರಿಂದ ಅವರು ಕೆಜೆಪಿಯಲ್ಲಿ ಇರುವುದೇ ಒಳಿತು.
ಜನರ ಬೆಂಬಲ ಕಷ್ಟ
ಬಿಜೆಪಿಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅಲ್ಲಿ ಸರಿಯಾದ ಸ್ಥಾನಮಾನ ದೊರೆಯಲಿಲ್ಲ ಎಂದು ಕೆಜೆಪಿ ಪಕ್ಷ ಸ್ಥಾಪಿಸಿದರು. ಜನರು ಅದಕ್ಕೆ ಸ್ವಲ್ಪ ಮಟ್ಟಿನ ಬೆಂಬಲ ನೀಡಿದರು. ಆದರೆ, ಈಗ ಅವರು ಪುನಃ ಬಿಜೆಪಿಗೆ ಮರಳಿದರೆ, ಜನರು ಬೆಂಬಲ ನೀಡುತ್ತಾರೆ ಎಂದು ನಂಬುವುದು ಕಷ್ಟ.
ಪ್ರತಿಷ್ಠೆ ಮಣ್ಣುಪಾಲು
ಮೊದಲಿನಿಂದಲೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನರನ್ನು ಸೆಳೆಯುವ ಶಕ್ತಿ ಅಧಿಕಾಗಿದೆ. ಅವರು ಕೆಜೆಪಿ ಬಿಟ್ಟು ಮತ್ತೆ ಬಿಜೆಪಿ ಸೇರಿದರೆ, ಅವರ ಪ್ರತಿಷ್ಠೆ ಹಾಳಾಗುತ್ತದೆ. ಬಿಜೆಪಿ ನಾಯಕರ ವಿರುದ್ಧ ಸಿಡಿದುನಿಂತ ಅವರು ಮತ್ತೊಮ್ಮೆ, ಅದೇ ಪಕ್ಷದ ಕೈ ಹಿಡಿದರೆ, ಜನರ ಮತ್ತು ನಾಯಕರ ಮಟ್ಟದಲ್ಲಿ ಅವರ ಪ್ರತಿಷ್ಠೆ ಹಾಳಾಗುತ್ತದೆ.
ಬಿಜೆಪಿನಾಯಕರು ಒಪ್ಪುತ್ತಾರಾ?
ಬಿಜೆಪಿಯ ಕೆಲವು ನಾಯಕರು ಯಡಿಯೂರಪ್ಪ ಮರಳಲಿ ಎಂದು ಹೇಳುತ್ತಿದ್ದಾರೆ. ಆದರೆ, ಬಿಜೆಪಿಯ ರಾಜ್ಯ ನಾಯಕರಿಂದ ಹಿಡಿದು, ರಾಷ್ಟ್ರ ನಾಯಕರವರೆಗೆ ಎಲ್ಲರ ವಿರುದ್ಧವೂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಆದ್ದರಿಂದ ಬಿಜೆಪಿಯ ಕೆಲವು ನಾಯಕರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಬಹುದು.