ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆತ್ಮೀಯ ಪತ್ರ
ಮಾನ್ಯ
ಸಚಿವರೇ,
ವಿಷಯ:
ಈ
ಯೋಜನೆಗೆ
ಮುಕ್ತಿ
ನೀಡಿ
ಪ್ಲೀಸ್
ಕೇಂದ್ರ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆ ಸಚಿವರೇ ನಮಗೆ ತಿಳಿದಿರುವಂತೆ ತಾವು ಬಜೆಟ್ ಮಂಡಿಸುವ ಸಾಧ್ಯತೆಗಳು ಇಲ್ಲ, ಅಂದ ಮೇಲೆ ಕರ್ನಾಟಕಕ್ಕೆ ಹೊಸ ಯೋಜನೆ ಜಾರಿ ಮಾಡಲು ಸಾಧ್ಯವೇ ಇಲ್ಲ.
ಆದರೆ ನೆನಗುದಿಗೆ ಬಿದ್ದಿರುವ ಯೋಜೆನೆಯನ್ನು ಪೂರ್ಣ ಮಾಡಿ ಉದ್ಘಾಟನೆ ಮಾಡಲು ಸಾಧ್ಯವಿದೆ. ಮಂಗಳೂರು - ಶ್ರವಣಬೆಳಗೊಳ - ಬೆಂಗಳೂರು ರೈಲ್ವೆ ಯೋಜನೆ ನನಗೆ ತಿಳಿದ ಮಟ್ಟಿಗೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಆರಂಭವಾಗಿ ಇಲ್ಲಿವರೆಗೂ ಮುಕ್ತಿ ಕಂಡಿಲ್ಲ.
ಈ ಯೋಜನೆ ಬಹುತೇಕ ಅಂತಿಮ ಹಂತದಲ್ಲಿದ್ದು ಕುಣಿಗಲ್ ಆಸುಪಾಸಿನಲ್ಲಿ ಭೂಮಿ ಒತ್ತುವರಿಯಲ್ಲಿ ತೊಂದರೆಯಾಗಿದೆ. ಇದರ ಹೊಣೆ ರಾಜ್ಯ ಸರ್ಕಾರಕ್ಕೆ ಸೇರಿದ್ದು, ರೈಲ್ವೆ ಇಲಾಖೆಯಲ್ಲಿ ಯಾವುದೇ ತೊಂದರೆಯಿಲ್ಲ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಆದರೆ, ಯಾರ ಇಚ್ಚಾಶಕ್ತಿ ಕೊರತೆ ಇದೆಯೋ ತಿಳಿಯದು.
ಯೋಜನೆ ಆರಂಭವಾಗಿ 15 ವರ್ಷಗಳಾದರೂ ಯೋಜನೆ ಪೂರ್ಣವಾಗದೆ ಕುಂಟುತ್ತಾ ಸಾಗಿದೆ. ಮಂಗಳೂರಿಗೆ ತೆರಳುವ ರೈಲುಗಳು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಹಾಸನ ತಲುಪಿ ಅಲ್ಲಿಂದ ಮಂಗಳೂರು, ಕೇರಳಕ್ಕೆ ತೆರಳುತ್ತಿವೆ. ಆದರೆ, ಶ್ರವಣಬೆಳಗೊಳ ಮಾರ್ಗ ಬಳಕೆಗೆ ಬಂದರೆ ಬಳಸು ಮಾರ್ಗದಿಂದ ಲಕ್ಷಾಂತರ ರೂಪಾಯಿ ವ್ಯರ್ಥವಾಗಿ ಪೋಲಾಗುತ್ತಿರುವ ರೈಲ್ವೆ ಇಲಾಖೆ ಹಣ ಉಳಿತಾಯವಾಗುತ್ತದೆ.
ಅದೂ ಅಲ್ಲದೆ ಈ ಮಾರ್ಗದಲ್ಲಿ ಬೆಳೆಯುವ ತರಕಾರಿ, ಹಣ್ಣು ಹಂಪಲುಗಳನ್ನು ಮಾರುಕಟ್ಟೆಗೆ ಸಾಗಿಸಲು ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತದೆ. ಈಗಾಗಲೇ ಹಾಸನದಿಂದ ಶ್ರವಣಬೆಳಗೊಳ ವರೆಗೂ ಹಾಗೂ ಯಶವಂತಪುರದಿಂದ ನೆಲಮಂಗಲದವರೆಗೂ ರೈಲುಗಳು ಓಡಾಡುತ್ತಿವೆ. ಈ ಯೋಜನೆ ಪೂರ್ಣಗೊಳ್ಳದೆ ಹೀಗೆ ಕುಂಟುತ್ತಾ ಸಾಗುತ್ತಿದ್ದರೆ ಆಗಿರುವ ಕೆಲಸವೂ ಬಳಕೆಗೆ ಬಾರದೆ ಹಾಳಾಗುವುದರಲ್ಲಿ ಸಂಶಯವಿಲ್ಲ.
ಈ ನಿಟ್ಟಿನಲ್ಲಿ ನೂತನ ರೈಲ್ವೆ ಇಲಾಖೆ ಸಚಿವರಾದ ತಾವು ಹಾಗೂ ರಾಜ್ಯದ ಮುಖ್ಯಮಂತ್ರಿ, ಪ್ರಜ್ಞಾವಂತರು ಕೆಲಸ ಮಾಡಬೇಕಾಗಿ ನಮ್ಮ ತಾಲೂಕಿನ ಜನತೆ ಪರವಾಗಿ ನಿಮ್ಮನ್ನು ವಿನಂತಿಸಿಕೊಳ್ಳುತ್ತಿದ್ದೇನೆ.
ಇಂತಿ,
ಮಂಜೇಗೌಡ,
ಕಲ್ಕೆರೆ
ಮಲ್ಲೇನಹಳ್ಳಿ
ಹೊನ್ನಾವರ
ಪೋಸ್ಟ್
ಬಿಂಡಿಗನವಿಲೆ
ಹೋಬಳಿ
ನಾಗಮಂಗಲ
ತಾಲೂಕು
ಮಂಡ್ಯ
ಜಿಲ್ಲೆ