ಅಕ್ಷಯ ತದಿಗೆ ಜ್ಯೋತಿಷಿಗಳ ಬೊಗಳೆ ನಂಬಬೇಡಿ
ಆ ದಿನ ಚಿನ್ನ ಅಥವಾ ಆಸ್ತಿ ಖರೀದಿಸುವುದರಿಂದ ಅದು ಅಕ್ಷಯವಾಗುತ್ತದೆ ಎಂದು ಹಿಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಟಿವಿ ಹಾಗೂ ಪತ್ರಿಕೆಗಳಲ್ಲಿ ಜ್ಯೋತಿಷಿಗಳು ಬೊಗಳೆ ಬಿಟ್ಟು ಮುಗ್ಧರನ್ನು ಮೋಸ ಮಾಡುತ್ತಿದ್ದಾರೆ. ಆದರೆ ಯಾವ ನಿರ್ದಿಷ್ಟ ಹಿಂದೂ ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ ಎಂದು ಅವರು ಹೇಳದೇ ತಪ್ಪಿಸಿಕೊಳ್ಳುತ್ತಿದ್ದಾರೆ.
ನಿಜವಾದ ವೇದಾಧ್ಯಾಯಿನಿಗಳು ಹಾಗೂ ಹಿಂದೂ ಪಂಚಾಂಗಕರ್ತರ ಪ್ರಕಾರ ಅಕ್ಷಯ ತೃತೀಯ ಕೇವಲ ದಾನಕ್ಕೆ ಮಾತ್ರ ಶ್ರೇಷ್ಠ ದಿನ, ಆ ದಿನ ಬಡವರಿಗೆ ದಾನ ಮಾಡುವವರು ಸ್ವರ್ಗಕ್ಕಿಂತ ಉನ್ನತ ಸ್ಥಾನ ಪಡೆಯುತ್ತಾನೆ ಎಂದೇ ಸನಾತನ ಪಂಚಾಂಗ ಹಾಗೂ ಎಲ್ಲಾ ಅಧಿಕೃತ ಪಂಚಾಂಗಗಳಲ್ಲಿ ಹೇಳಲಾಗಿದೆ.
ಚಿನ್ನ ಅಂಗಡಿಗಳಿಂದ ಕಮಿಷನ್ ಪಡೆಯುವ ಜ್ಯೋತಿಷಿಗಳು ಹಾಗೂ ಅರ್ಚಕರು ಮುಗ್ಧ ಜನರನ್ನು ಹಾದಿ ತಪ್ಪಿಸುವುದನ್ನು ನಿಲ್ಲಿಸಿದರೆ ಒಳ್ಳೆಯದು.
ಕೇಳದಿದ್ದರು ಎಲ್ಲದರಲ್ಲೂ ಮೂಗುತೂರಿಸುವ ತಮ್ಮ ಅಭಿಪ್ರಾಯ ಹೇಳುವ, ಸ್ಚಾಮೀಜಿಗಳು ಮಠಾಧೀಶರು ನಮ್ಮಲಿದ್ದಾರೆ. ಇವರು ಕೇವಲ ಧಾರ್ಮಿಕ ವಿಷಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದು ಮಾತ್ರವಲ್ಲ, ಇವರು ರಾಜಕೀಯ, ಪರಿಸರ, ಉದ್ಯಮಿಗಳ ವಿಷಯದ ಜತೆಗೆ ಬ್ಲೂಬಾಯ್ಸ್ ಬಗ್ಗೆ ಸರ್ಕಾರಕ್ಕೆ ಸಲಹೆ ಕೊಡಬಲ್ಲರು.
ಇಂಥ ಸರ್ವ ವಿದ್ಯಾ ಪರಾಂಗತಮಠಾಧೀಶರು, ಅಕ್ಷಯ ತೃತೀಯ ವಿಷಯದಲ್ಲಿ ತಮ್ಮ ಅಮೂಲ್ಯ ಸಲಹೆ ಏಕೆ ಕೊಟ್ಟಿಲ್ಲ ? ಅಕ್ಷಯ ತೃತೀಯಾದಂದೇ ಶ್ರಿಬಸವೇಶ್ವರರ ಜಯಂತಿ ಸಹಾ ಇದ್ದು, ಆ ದಿನ ಸರಕಾರಿ ರಜೆ ಇದ್ದರೂ, ಕೇವಲ ಚಿನ್ನ ಮಾರಲೆಂದೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಬಸವೇಶ್ವರ ಜಯಂತಿಯಂದೂ ತೆರೆದಿಡುವುದು, ಸರ್ಕಾರವೇ ಬಸವೇಶ್ವರರಿಗೆ ಅವಮಾನಿಸಿದಂತೆ ಅಲ್ಲ ? ಇದು ಧಾರ್ಮಿಕ ವಿಷಯವಾದರೂ ಸ್ವಾಮೀಜಿಗಳೆಲ್ಲಾ ಏಕೆ ಸುಮ್ಮನಿದ್ದಾರೆ?
ಬ್ಯಾಂಕ್ ಅಲ್ಲದೆ, ಅಂಚೆ ಕಚೇರಿ ಕೂಡಾ ಚಿನ್ನದ ನಾಣ್ಯ ವ್ಯಾಪಾರ ಮಾಡುವುದರಿಂದ ರಜೆ ಇರುವುದಿಲ್ಲ ಎನ್ನಬಹುದು. ವ್ಯಾಪಾರಂ ದ್ರೋಹ ಚಿಂತನಂ ಎಂದು ಇದಕ್ಕೆ ಹೇಳಿದ್ದು ಅನ್ನಿಸುತ್ತದೆ.