ಅಕ್ಕ ಸಮ್ಮೇಳನದ ಸೂತ್ರಧಾರಿ ರಾಜ್ ಪಾಟೀಲ್ ಸಂದರ್ಶನ
ಅಮೆರಿಕದ ಉದ್ಯಾನ ರಾಜ್ಯ ನ್ಯೂಜೆರ್ಸಿಯ 'ಅಟ್ಲಾಂಟಿಕ್ ಸಿಟಿ'ಯಲ್ಲಿ, ಲೇಬರ್ ಡೇ ವಾರಾಂತ್ಯವಾದ ಸೆಪ್ಟೆಂಬರ್ 2, 3 ಮತ್ತು 4ರಂದು ನಡೆಯಲಿರುವ 9ನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ'ವನ್ನು ಸ್ಮರಣೀಯವಾಗಿ ಮಾಡಲು ಭಾರೀ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ, ಸಿದ್ಧತೆಗಳು ಹೇಗೆ ನಡೆಯುತ್ತಿವೆ, ಏನೆಲ್ಲ ವಿಶೇಷತೆಗಳಿರುತ್ತವೆ, ಯಾರ್ಯಾರು ಬರಲಿದ್ದಾರೆ, ಊಟೋಪಚಾರಗಳು ಹೇಗೆ ಇರಲಿವೆ ಎಂಬ ಬಗ್ಗೆ 'ಅಕ್ಕ' ಅಧ್ಯಕ್ಷ ರಾಜ್ ಪಾಟೀಲ್ ಅವರು ಸತ್ಯ ಪ್ರಸಾದ್ ಅವರು ನಡೆಸಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸತ್ಯ : ಸರ್ ನಮಸ್ಕಾರ, ಹೇಗಿದ್ದೀರಾ? ಹೇಗೆ ನಡೀತಿದೆ ಅಕ್ಕ ತಯಾರಿ?
ರಾಜ್ : ನಮಸ್ಕಾರ ಸತ್ಯ, ಎಲ್ಲ ಆರಾಮ. ಭರ್ಜರಿಯಾಗಿ ನಡೀತಿದೆ ಅಕ್ಕ ತಯಾರಿ (ನಗು).
ಸತ್ಯ : ಕೇವಲ ಆರು ವರ್ಷಗಳ ಹಿಂದೆ ನ್ಯೂಜೆರ್ಸಿಯಲ್ಲಿ ಅಕ್ಕ ಸಮ್ಮೇಳನ ನಡೆದಿತ್ತು, ಇಷ್ಟು ಶೀಘ್ರದಲ್ಲಿ ಇದೇ ರಾಜ್ಯದಲ್ಲಿ ಮತ್ತು ಅಟ್ಲಾಂಟಿಕ್ ಸಿಟಿಯನ್ನೇ ಆರಿಸಿಕೊಂಡ ನಿರ್ಣಯಕ್ಕೆ ಕಾರಣವೇನು?
ರಾಜ್ : ಒಳ್ಳೆಯ ಪ್ರಶ್ನೆ, ಇದರಲ್ಲಿ 2-3 ಅಂಶಗಳಿವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿಬಾರಿ ಅಕ್ಕ ಸಮ್ಮೇಳನವನ್ನು ಅಲ್ಲಿನ ಸ್ಥಳೀಯ ಒಂದು ಕನ್ನಡ ಸಂಘದ ಸಹಕಾರ ಮತ್ತು ಸಹಯೋಗದೊಂದಿಗೆ ಆಚರಿಸುತ್ತಿದ್ದೆವು. ಈ ಬಾರಿ ಆ ಪದ್ದತಿಯನ್ನು ಸ್ವಲ್ಪ ಬದಲಾಯಿಸಿದ್ದೇವೆ. ಸುಮಾರು ಕನ್ನಡ ಸಂಘಗಳಿಗೆ ಮತ್ತು ಅದರ ಸದಸ್ಯರಿಗೆ ಆಸೆಯಿದ್ದರೂ ಅವಕಾಶ ಸಿಗುತ್ತಿರಲಿಲ್ಲ. ಆದುದರಿಂದ ಒಂದಕ್ಕಿಂತ ಹೆಚ್ಚು ಸ್ಥಳೀಯ ಕನ್ನಡ ಕೂಟಗಳು ಒಟ್ಟಾರೆಯಾಗಿ ಹಸ್ತ ಜೋಡಿಸಿ ಈ ಹಬ್ಬವನ್ನು, ಕನ್ನಡ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುವ ನಿರ್ಣಯಕ್ಕೆ ಬಂದೆವು.
ಎರಡನೇ ಅಂಶ ಹೋದ ಬಾರಿ 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ west coastನಲ್ಲಿ ನಡೆದಿತ್ತು. ಆದುದರಿಂದ ಈ ಬಾರಿ east coastಗೆ ಹೆಚ್ಚು ಒತ್ತು ಕೊಟ್ಟೆವು. ಮೂರನೇ ಅಂಶ 6 ಘಂಟೆಯ driving distanceನಲ್ಲಿ ಹೆಚ್ಚು ಕನ್ನಡಿಗರು ಸೇರುವ common place ಆರಿಸಬೇಕಿತ್ತು. ಮತ್ತೊಂದು ಅಂಶ, signature place ಅಂದರೆ ಅದಕ್ಕೆ ಅದರದೇ ಆದ ವೈಶಿಷ್ಟವಿರುವ ಸ್ಥಳ ಬೇಕಾಗಿತ್ತು ಮತ್ತು ಒಂದು ಮದುವೆಗೆ ಛತ್ರ ಹೇಗೆ ಮುಖ್ಯವೋ ಹಾಗೆ ನಮಗೆ ಅತ್ಯುತ್ತಮ ಸಭಾಂಗಣ ಬೇಕಾಗಿತ್ತು.
ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಊಟ ಅಷ್ಟೇ ಮುಖ್ಯ. ಆದುದರಿಂದ ಅದಕ್ಕೆ ಹೊಂದಿಕೊಂಡಂತೆ ಅಡುಗೆಮನೆ ಬೇಕಾಗಿತ್ತು, ಒಟ್ಟಾರೆಯಾಗಿ ನಮಗೆ ಗುಣಮಟ್ಟದಲ್ಲಿ ಗುಲಗಂಜಿಯಷ್ಟೂ compromise ಮಾಡಿಕೊಳ್ಳಲು ತಯಾರಿರಲಿಲ್ಲ. ಈ ಅಂಶಗಳನ್ನೆಲ್ಲ ಕ್ರೊಢೀಕರಿಸಿ ನೋಡಿದಾಗ ನಮಗೆ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿ ಮತ್ತು ಕನ್ವೆಂಷನ್ ಹಾಲ್ ಹೇಳಿ ಮಾಡಿಸಿದ ಜಾಗ ಅನ್ನಿಸಿತು. ಆದ್ದರಿಂದ ಅದನ್ನೇ ಆಯ್ಕೆ ಮಾಡಿಕೊಂಡೆವು.
ಸ್ವಲ್ಪ ವಿವರವಾಗಿ ಮೇಲಿನ ಅಂಶಗಳನ್ನು ನೋಡುವುದಾದರೆ, ಈ ಬಾರಿ ನ್ಯೂ ಜೆರ್ಸಿ, ನ್ಯೂ ಯಾರ್ಕ್, ಕನೆಕ್ಟಿಕಟ್, ಪೆನ್ಸಲ್ವೇನಿಯಾ, ಮೇರಿಲ್ಯಾಂಡ್, ವಾಷಿಂಗ್ಟನ್ DC, ವರ್ಜಿನಿಯಾ ಮುಂತಾದ ಕನ್ನಡ ಕೂಟಗಳು ಅತ್ಯುತ್ಸಾಹದಿಂದ ಸ್ವಯಂ ಸೇವಕ ತಂಡಗಳಾಗಿ ಭಾಗವಹಿಸುತ್ತಿವೆ. ಅಟ್ಲಾಂಟಿಕ್ ಸಿಟಿ ಗೆ 5-6 ಗಂಟೆ ಡ್ರೈವಿಂಗ್ ದೂರ ದಲ್ಲಿರುವ ಪ್ರಮುಖ ನಗರಗಳು ಅಂದರೆ, ನ್ಯೂ ಯಾರ್ಕ್, ವಾಷಿಂಗ್ಟನ್ DC, ಫಿಲಡೆಲ್ಫಿಯಾ, ರಿಚ್ಮಂಡ್, ಬೋಸ್ಟನ್, ನ್ಯೂಜೆರ್ಸಿಯಿಂದ ಭಾಗವಹಿಸುವವರಿಗೆ ಪ್ರಯಾಣ ತುಂಬಾ ಅನುಕೂಲವಾಗಲಿದೆ. ನಿಮಗೆಲ್ಲ ತಿಳಿದಿರುವಂತೆ west coastಗೆ ಹೇಗೆ ಲಾಸ್ ವೇಗಾಸ್ ಪ್ರಖ್ಯಾತವೋ, ಹಾಗೆ east coastಗೆ ಅಟ್ಲಾಂಟಿಕ್ ಸಿಟಿ. ಮಕ್ಕಳಿಂದ ವಯೋವೃದ್ಧರನ್ನು ಸೆಳೆಯುವ ಜಾಗ. ಪ್ರಸಿದ್ಧ ಕ್ಯಾಸಿನೋಗಳು, ಕಡಲ ಕಿನಾರೆ, ಬೋರ್ಡ್ ವಾಕ್, ಶಾಪಿಂಗ್, ರಾತ್ರಿ ಝಗಝಗಿಸುವ ಗಗನಚುಂಬಿ ಕಟ್ಟಡ ಮತ್ತು ನಗರ ಇತ್ಯಾದಿ ಇತ್ಯಾದಿ.
ಸತ್ಯ : ಸಮ್ಮೇಳನಕ್ಕೆ ಪಾಲ್ಗೊಳ್ಳುವವರಿಗೆ ಸಭಾಂಗಣ, ಊಟ ವಸತಿಯ ಬಗ್ಗೆ ಸ್ವಲ್ಪ ವಿವರ ಕೊಡುವಿರಾ?
ರಾಜ್ : ಸಭಾಂಗಣ, ಊಟ ಮತ್ತು ವಸತಿಯ ಬಗ್ಗೆ ಹೇಳುವುದಾದರೆ ಪುಟಗಳೇ ಬೇಕಾಗಬಹುದು (ನಗು). ಸಂಕ್ಷಿಪ್ತವಾಗಿ ಹೇಳುವುದಾದರೆ 5 ಎಕರೆಯಷ್ಟು ವಿಶಾಲವಾದ ಸಭಾಂಗಣ, ಸಾವಿರಾರು ಜನ ಕುಳಿತು ವೀಕ್ಷಿಸಬಹುದಾದ 3 ದೊಡ್ಡ ಸ್ಟೇಜ್ ಗಳು, 20 ಬ್ರೇಕ್ ರೂಮ್ ಹಾಲ್ ಗಳು. ಅದಕ್ಕೆ ಹೊಂದಿಕೊಂಡಂತೆ ದೊಡ್ಡ ಅಡುಗೆಮನೆ ಮತ್ತು ಒಂದು ಪಂಕ್ತಿಗೆ 2 ಸಾವಿರ ಜನ ಕೂತು ಊಟ ಮಾಡಬಹುದಾದಂತ ಭೋಜನ ಶಾಲೆ. ಸಭಾಂಗಣದ ಪಕ್ಕಕ್ಕೆ ಹೊಂದುಕೊಂಡ ಟ್ರೈನ್ ಸ್ಟೇಷನ್.
ಇನ್ನು ವಸತಿಯ ಬಗ್ಗೆ ಹೇಳುವುದಾದರೆ ಪ್ರಸಿದ್ಧ ಹೋಟೆಲ್ ಗಳಲ್ಲಿ ಭಾರೀ ರಿಯಾಯಿತಿ ದರದಲ್ಲಿ ತಂಗಲು ವ್ಯವಸ್ಥೆ, ವಿವರಗಳು ವೆಬ್ ಸೈಟ್ ನಲ್ಲಿ ಲಭ್ಯ. ಊಟದ ಬಗ್ಗೆ ಹೇಳುವುದಾದರೆ, ಅಮೆರಿಕಾ ಪ್ರಸಿದ್ಧ ಬಾಣಸಿಗ ಸತೀಶ್ ಮತ್ತು ತಂಡದಿಂದ. ಕನಿಷ್ಠ 45ಕ್ಕೂ ಹೆಚ್ಚು ಬಾಣಸಿಗರು ಸಮ್ಮೇಳನಕ್ಕೆ 10 ದಿನ ಮುಂಚಿತವಾಗಿಯೇ ಅಲ್ಲಿಗೆ ಬಂದು ತಯಾರಿ ಪ್ರಾರಂಭಿಸುತ್ತಾರೆ. 3 ದಿನ ಅವಿರತವಾಗಿ ಬಗೆ ಬಗೆಯ ತಿಂಡಿ, ಊಟ ಮತ್ತು ಕಾಫೀ ಲಭ್ಯವಿರುತ್ತದೆ.
ಸತ್ಯ : ಈ ಸಮ್ಮೇಳನದ ವೈಶಿಷ್ಟವೇನು? ಹಾಗು ಕಾರ್ಯಕ್ರಮಗಳ ಮುಖ್ಯಾಂಶಗಳು ಹೇಗಿವೆ?
ರಾಜ್ : ಇದೊಂದು ಹೊಸ ಪ್ರಯತ್ನ, ಅಕ್ಕ ಸಮ್ಮೇಳನಕ್ಕೆ ಕರ್ನಾಟಕದಿಂದ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಟ್ರಾವೆಲ್ಸ್ ಒಂದರ ಸಹಯೋಗದೊಂದಿಗೆ 3 ಪ್ಯಾಕೇಜ್ ಗಳನ್ನು ಮಾಡಿದ್ದೇವೆ. ಪ್ರತಿ ಹಂತದ paper work ಮತ್ತು ವೀಸಾಗೆ ಸಹಾಯ ಮಾಡುವುದರೊಂದಿಗೆ, ಬೆಂಗಳೂರು ವಿಮಾನ ನಿಲ್ದಾಣದಿಂದ pickup ಮಾಡಿ, ಸಮ್ಮೇಳನದೊಂದಿಗೆ (ಪ್ಯಾಕೇಜ್ ಗೆ ತಕ್ಕಂತೆ) ಅಮೆರಿಕಾದ ಪ್ರಸಿದ್ಧ ಸ್ಥಳಗಳನ್ನು ತೋರಿಸಿ ವಾಪಸ್ ಬೆಂಗಳೂರಿಗೆ ಬಿಡುತ್ತೇವೆ. ಹೆಚ್ಚಿನ ವಿವರಗಳು ವೆಬ್ ಸೈಟ್ ನಲ್ಲಿ ಲಭ್ಯ.
ಈ ಬಾರಿ ಕಲೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದೇವೆ. ಪ್ರತಿ ದಿನ prime event ಗಳಿವೆ, ಈಗಾಗಲೇ ನಿಮಗೆ ತಿಳಿದಿರುವಂತೆ ಕಡೆಯ ದಿನ ಅಂಬಿ ನೈಟ್ ಇದೆ. ಇಡೀ ಕನ್ನಡ ಚಿತ್ರರಂಗದ ದಂಡೇ ಅಕ್ಕ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮಗಳನ್ನು ನೀಡಲಿದೆ. ಅಂಬಿ, ಸುಮಲತಾ, ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗಣೇಶ್, ರವಿಚಂದ್ರನ್, ಜಗ್ಗೇಶ್, ಸಾಧು ಕೋಕಿಲ ಇತ್ಯಾದಿ ನಾಡಿನ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ.
ಬ್ಯುಸಿನೆಸ್ ಫೋರಂಗೆ ಅದರಲ್ಲೂ cross border entrepreneurshipಗೆ ಹೆಚ್ಚು ಒಟ್ಟು ಕೊಟ್ಟಿದ್ದೇವೆ ಮತ್ತು Youth Forum ತುಂಬಾ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಕೊಡಲಿದೆ ಇದು ಬಹು ಮುಖ್ಯ ಅನ್ನವು ನನ್ನ ಭಾವನೆ. CME, Women Forum ಮತ್ತು Health and Fitness Forum ವೈವಿಧ್ಯಮಯ ಕಾರ್ಯ ಕ್ರಮಗಳನ್ನು ನಡೆಸಿ ಕೊಡಲಿವೆ. ಆಸಕ್ತರು ಉಪಯೋಗ ಪಡೆದುಕೊಳ್ಳಬಹುದು.
ಈ ಬಾರಿ ಕನಿಷ್ಠ 20ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ. ಉದಾಹರಣೆಗೆ ಅಕ್ಕ ಅಡುಗೆಮನೆ, ಸೋಲೋ ಮತ್ತು ಡ್ಯುಯೆಟ್ ಹಾಡು ಸ್ಪರ್ಧೆ, ಅಕ್ಕ ಕಿರು ಚಿತ್ರ ಸ್ಪರ್ಧೆ, ಶ್ರೀಮಾನ್ ಶ್ರೀಮತಿ, ಮಿಸ್ಟರ್ ಅಂಡ್ ಮಿಸ್ ಅಕ್ಕ, ವಾಕ್ಪಟುಗಳು ಇತ್ಯಾದಿ ಇತ್ಯಾದಿ.
ಕೊನೆಯದಾಗಿ ಮತ್ತು ಹೆಚ್ಚು ಮಹತ್ವದ್ದು, ಈ ಬಾರಿ ಸಮ್ಮೇಳನದ ಕೊನೆ ದಿನ, ಅಂದರೆ ಗಣೇಶ ಚತುರ್ದಶಿಯ ಭಾನುವಾರ ಬೆಳಿಗ್ಗೆ 7-9ರವರೆಗೆ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಪೂಜಾ ಸಾಮಗ್ರಿಗಳೊಂದಿಗೆ (NR Group ಸೈಕಲ್ ಬ್ರಾಂಡ್ ಅಗರಬತ್ತಿಯವರು ಆಯೋಜಕರು) ವಿದ್ವಾನ್ ಯೋಗೇಂದ್ರ ಭಟ್ ಮತ್ತು ಉಮೇಶ್ ಜೋಯಿಸ್ ಪೂಜೆಯನ್ನು ಮಾಡಿಸುತ್ತಾರೆ. ಆಸಕ್ತ ಆಸ್ತಿಕ ಮಹಾಶಯರು ಗೌರಿ ಗಣೇಶನ ಕೃಪೆಗೆ ಪಾತ್ರರಾಗಲು ಕೋರುತ್ತೇವೆ.
ಸತ್ಯ : ಕಡೆಯದಾಗಿ ನಿಮ್ಮ ಕೆಲಸದ ಒತ್ತಡಗಳ ನಡುವೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ? ಮತ್ತು ಆಕ್ಕ ಪರವಾಗಿ ಕನ್ನಡಿಗರಿಗೆ ಒಂದೆರಡು ಮಾತುಗಳಲ್ಲಿ ಏನಾದರೂ ಹೇಳಬಯಸುತ್ತೀರಾ?
ರಾಜ್ : ಮನಸ್ಸಿದ್ದರೆ ಮಾರ್ಗ (ನಗು). ಸಾವಿರಾರು ಜನರನ್ನು ಸೇರಿಸಿ ಊಟ ವಸತಿಯೊಂದಿಗೆ ಮೂರು ದಿನ ಸಮ್ಮೇಳನ ಮಾಡುವುದು ಸುಲಭದ ಮಾತಲ್ಲ. ನಾಣ್ಯದ ಎರಡು ಮುಖಗಳಂತೆ ಸ್ವಯಂಸೇವಕರು ಮತ್ತು ದಾನಿಗಳು. ಈ ವಿಷಯದಲ್ಲಿ ಮಾತ್ರ ನಾನು ಅದೃಷ್ಟವಂತ. ಕಳೆದ ಆರು ತಿಂಗಳಿಂದ ಸುಮಾರು 200ಕ್ಕೂ ಹೆಚ್ಚು ಸ್ವಯಂ ಸೇವಕರ ತಂಡ ತಮ್ಮ ವೈಯಕ್ತಿಕ ಕೆಲಸಗಳನ್ನೆಲ್ಲ ಬದಿಗೊತ್ತಿ, '9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು' ಅದ್ದೂರಿಯಾಗಿ ನಡೆಸಿ ಯಶಸ್ವಿಗೊಳಿಸಬೇಂದು ಕಂಕಣ ತೊಟ್ಟು, ಹಗಲು ಇರುಳು ಎನ್ನದೆ ದುಡಿಯುತ್ತಿದ್ದಾರೆ. ಅವರಿಗೆ ನಾನು ಚಿರಋಣಿ. ಹಾಗೆ ದಾನಿಗಳು, ಎಂದಿನಂತೆ ನಮ್ಮ ಕರ್ನಾಟಕ ಸರ್ಕಾರ ನಮಗೆ ಎಲ್ಲ ರೀತಿಯ ಸಹಕಾರವನ್ನು ಕೊಡುತ್ತಿದೆ ಅವರಿಗೆ ನನ್ನ ನಮನಗಳು. ಇದರೊಂದಿಗೆ ಅನೇಕ ದಾನಿಗಳು ನಮಗೆ ತಮ್ಮ ತನು ಮನ ಧನ ಸಹಾಯವನ್ನು ಮಾಡುತ್ತಿದ್ದಾರೆ ಅವರೆಲ್ಲರಿಗೂ ನಾನು ಅಭಾರಿ.