ಅಕ್ಕ ಸಮ್ಮೇಳನ - ವೇದಿಕೆಯ ಉಸ್ತುವಾರಿ ಕೃಷ್ಣ ಪ್ರಸಾದ್ ಸಂದರ್ಶನ
9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ. ಇನ್ನು 2 ವಾರಗಳಲ್ಲಿ ನ್ಯೂ ಜೆರ್ಸಿಯ ಸುಂದರ ನಗರಿ ಅಟ್ಲಾಂಟಿಕ್ ಸಿಟಿಯಲ್ಲಿ ಕನ್ನಡದ ಜಾತ್ರೆ ಭರ್ಜರಿಯಾಗಿ ನೆರವೇರಲಿದೆ. ತಮ್ಮೆಲ್ಲ ಕೆಲಸಗಳ ಮದ್ಯೆ ಸಮಯ ಮಾಡಿಕೊಂಡು ವೇದಿಕೆಯ ಉಸ್ತುವಾರಿ, MC ಸಮಿತಿಯ ಮುಖ್ಯಸ್ಥ ಕೃಷ್ಣ ಪ್ರಸಾದ್ ನಮ್ಮೊಂದಿಗೆ ತಮ್ಮ ರೂಪು ರೇಷೆಗಳನ್ನು ಹಂಚಿಕೊಂಡಿದ್ದಾರೆ.
ಸತ್ಯ : ಕೃಷ್ಣ ಪ್ರಸಾದ್ ನಮಸ್ಕಾರ, ನಿಮ್ಮ MC ಸಮಿತಿ ಹೆಚ್ಚು ಮಾನ್ಯತೆಯೊಂದಿಗೆ ವಿಜೃಂಭಿಸುವ ತಂಡ, ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು. ಇವರ ಆಯ್ಕೆಯ ಪ್ರಕ್ರಿಯೆ ಹೇಗೆ ನಡೆಯಿತು ಮತ್ತು ಇದರ ಮಾನದಂಡಗಳೇನು?
ಕೃಷ್ಣ : ನಮಸ್ಕಾರ ಸತ್ಯ, ಒಳ್ಳೆಯ ಪ್ರಶ್ನೆ. ಒಂದು ಕಾರ್ಯಕ್ರಮದ ದಿಕ್ಸೂಜಿಯಾಗಿ ಹೆಚ್ಚು visibilityಯೊಂದಿಗೆ ಕೆಲಸ ಮಾಡುವ ಸಮಿತಿ ನಮ್ಮ MC ಸಮಿತಿ. ಆದುದರಿಂದ ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು. ನಾವು audition ಮುಖಾಂತರ ಆಯ್ಕೆ ಮಾಡಿದ್ದೇವೆ. ಆಯ್ಕೆಗೆ ಮುನ್ನ ಒಂದು ಕನ್ನಡದ ಕಿರು ಗದ್ಯವನ್ನು ಪ್ರಕಟಿಸಿ ಅದರ ವಿಡಿಯೋ ಕಳುಹಿಸಲು ಕೋರಿದ್ದೆವು. ವಿಡಿಯೋಗಳ ಪ್ರವಾಹವೇ ಹರಿದು ಬಂದಿತ್ತು. ನಮ್ಮ ನುರಿತ ತಂಡ ಕೂಲಂಕುಷವಾಗಿ ಅವರ ಹಾವ, ಭಾವ, ಶಬ್ದ ಉಚ್ಚಾರ, ಸ್ವರ ಏರಿಳಿತ, ಸ್ಪಷ್ಟತೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಛಾತಿ ಇತ್ಯಾದಿ ಪರಿಶೀಲಿಸಿ ಅಂತಿಮ ಪಟ್ಟಿಯನ್ನು ನಿರ್ಧರಿಸಿತು. [ಅತಿಥಿಗಳ ಆದರಾತಿಥ್ಯಕ್ಕೆ 'ಅಕ್ಕ' ಆತಿಥ್ಯ ತಂಡ ಸಜ್ಜು]
ಸತ್ಯ : ಆಯ್ಕೆಯಾದವರ ಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ?
ಕೃಷ್ಣ : ಖಂಡಿತಾ, ಆಯ್ಕೆ ಯಾದವರ ಪಟ್ಟಿ ಹೀಗಿದೆ : ಅನುಪಮಾ ಬೆನಕಟ್ಟಿ, ಗುರುದತ್ ರಾವ್, ಉಷಾ ದೇವಿ ಕುಳೂರ್, ಸ್ನೇಹ ಎಚ್ ಯಸ್, ಶ್ರೀನಾಥ್ ರೂಪ, ಶ್ರಾವಣಿ ಸಾಮಗ, ನಟರಾಜ್ ಕೋಟೆ, ವೈಷ್ಣವಿ ನಂಜುಂಡ ಸ್ವಾಮಿ, ಮೀನಾ ಗೋಪಿನಾಥ್, ನವೀನ ಏರಿ, ಪದ್ಮ ಕಶ್ಯಪ್, ಚೇತನ ಧನಂಜಯ, ವಿನಯ್ ನಾಗರಾಜಪ್ಪ.
ಸತ್ಯ : ಆಯ್ಕೆಯಾದ ಪ್ರತಿಭೆಗಳಿಗೆ ಶುಭಾಶಯಗಳು. ಎಲ್ಲರಿಗೂ ತಿಳಿದಿರುವ ಹಾಗೆ ಅಕ್ಕ ಸಮ್ಮೇಳನವೆಂದರೆ ದೊಡ್ಡ ಜಾತ್ರೆ, ಸಾವಿರಾರು ಜನ ಹತ್ತಾರು ಸಮಾನಾಂತರ ಕಾರ್ಯಕ್ರಮಗಳು, ನಿಮ್ಮ ತಂಡದಿಂದ ಈ ಎಲ್ಲ ಕಾರ್ಯ ಕ್ರಮಗಳನ್ನು ಹೇಗೆ ನಿರ್ವಹಿಸುತ್ತೀರಿ? ಇದರ ಬಗ್ಗೆ ಹೆಚ್ಚಿನ ವಿವರ ಕೊಡುವಿರಾ?
ಕೃಷ್ಣ : ಪ್ರಮುಖವಾಗಿ 3 ದೊಡ್ಡ ವೇದಿಕೆಗಳಲ್ಲಿ ಮತ್ತು ಹತ್ತಾರು ಬ್ರೇಕ್ ರೂಮ್ ಗಳಲ್ಲಿ ಸಮಾನಾಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ನಮ್ಮ ಸಮಿತಿಯಿಂದ ಪ್ರತಿ ವೇದಿಕೆಯಲ್ಲಿ ಇಬ್ಬರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆ. ಒಬ್ಬ ಕಾರ್ಯಕ್ರಮದ ರೂವಾರಿಯಾದರೆ ಮತ್ತೊಬ್ಬರು ಸಭಿಕರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೆಲ್ಲದರ ಜೊತೆ MC ಸಮಿತಿಯ ದೊಡ್ಡ ಜವಾಬ್ದಾರಿಯೆಂದರೆ ಕಾಲ ನಿರ್ವಹಣೆ. ಪ್ರತಿಯೊಂದು ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ಪ್ರಾರಂಭವಾಗಿ ಮುಕ್ತಾಯವಾಗಬೇಕು. ಇದರೊಂದಿಗೆ ಪ್ರತಿ ಕಾರ್ಯಕ್ರಮದ ಇಂಚಿಂಚು ವಿವರಗಳನ್ನು ತಿಳಿದು ಕಲಾವಿದರಿಗೆ ನ್ಯಾಯ ಒದಗಿಸಬೇಕು. [ಅಕ್ಕ ಸಮ್ಮೇಳನದಲ್ಲಿ ಬಾಯಲ್ಲಿ ನೀರೂರಿಸುವ ಭಕ್ಷ್ಯಭೋಜ್ಯ]
ಸತ್ಯ : ಈ ಬಾರಿ MC ಸಮಿತಿಯ ವೈಶಿಷ್ಟವೇನು?
ಕೃಷ್ಣ : ಇದೊಂದು ಹೊಸ ಪ್ರಯತ್ನ, ಈ ಬಾರಿ ವಿಶಿಷ್ಟ ಥೀಮ್ ಗಳ ಮೇಲೆ ನಿರೂಪಣೆಯನ್ನು ಮಾಡಲಿದ್ದೇವೆ, ಇದರರ್ಥ ಇಡೀ ಅಕ್ಕ ಕಾರ್ಯಕ್ರಮಗಳನ್ನು ವೈವಿಧ್ಯಮಯ themeಗಳನ್ನಾಗಿ ವಿಂಗಡಿಸಿ, ಪ್ರತಿ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ. ಸಹಜವಾಗಿ ಎಲ್ಲ themeಗಳು ಕನ್ನಡ ಮತ್ತು ಕರ್ನಾಟಕವನ್ನು ಬಿಂಬಿಸುತ್ತವೆ. ಉದಾಹರಣೆಗೆ... ಕರ್ನಾಟಕ ನದಿಗಳು, ಕನ್ನಡ ಗಾದೆಗಳು ಇತ್ಯಾದಿ...
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಸಭಿಕರೊಂದಿಗೆ ಸಂಪರ್ಕದಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸುತ್ತೇವೆ. ಸಭಿಕರೊಂದಿಗೆ ಹರಟೆ, ಹಾಸ್ಯ ಮತ್ತು ಕನ್ನಡಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ಇತ್ಯಾದಿ. ಒಟ್ಟಾರೆಯಾಗಿ ಇಡೀ ಕಾರ್ಯಕ್ರಮವನ್ನು ಹರ್ಷಮಯ ವಾತಾವರಣದಲ್ಲಿ ನಡೆಸಿಕೊಡುತ್ತೇವೆ.
ಸತ್ಯ : ನಿಮ್ಮ core team ಬಗ್ಗೆ ಎರಡು ಮಾತು
ಕೃಷ್ಣ : ನಮ್ಮ core teamನಲ್ಲಿ ನಾರ್ಥ್ ಕರೋಲಿನಾದಿಂದ ಯಮುನಾ ನಾಗರಾಜ್, ನ್ಯೂ ಜೆರ್ಸಿಯಿಂದ ಅಹೀಶ್ ಭಾರದ್ವಾಜ್, ಸರಿತಾ ನವಲೆ, ಮಿಚಿಗನ್ ನಿಂದ ನಾಗಮಣಿ ಸಕ್ರಿಯರಾಗಿದ್ದಾರೆ. ಪರಿಣಿತಿ ಹೊಂದಿರುವ ಇಂತಹ ದಕ್ಷರೊಂದಿಗೆ ಕೆಲಸ ಮಾಡುತ್ತಿರುವುದೇ ನನಗೆ ಹೆಮ್ಮೆಯ ವಿಷಯ. ನಮ್ಮ ಈ ತಂಡ audition ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಹ MCಗಳನ್ನು ಆಯ್ಕೆ ಮಾಡಿದ್ದೇವೆ. ಸಂಪೂರ್ಣ ಜವಾಬ್ದಾರಿ ಹೊತ್ತು ಈ ಬಾರಿ ಅಕ್ಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುತ್ತೇವೆ ಎನ್ನುವ ನಂಬಿಕೆ ನನಗಿದೆ. [ಅಟ್ಲಾಂಟಿಕ್ ಸಿಟಿ ಅಕ್ಕ ಕನ್ನಡ ಸಮ್ಮೇಳನದಲ್ಲಿ ಹಲವಾರು ವಿಶೇಷತೆ]