ಅಕ್ಕ ಸಹ ಸಂಚಾಲಕ ರಘು ಹಾಲೂರು ಸಂದರ್ಶನ
ಆಗಸ್ಟ್ 29ರಿಂದ 31ರವರೆಗೆ ನಡೆಯಲಿರುವ ವಿಶ್ವ ಕನ್ನಡ ನುಡಿಹಬ್ಬ ಇನ್ನೇನು ಶುರುವಾಗಲಿದೆ. ಹಿಂದಿನ ಎಲ್ಲ ಕನ್ನಡ ಸಮ್ಮೇಳನಗಳಿಗಿಂತ ಸ್ಯಾನ್ ಹೋಸೆಯಲ್ಲಿ ನಡೆಯುತ್ತಿರುವ ಈ ಕನ್ನಡ ಜಾತ್ರೆ ಹೇಗೆ ವಿಭಿನ್ನವಾಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿದೆ. ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಹ ಸಂಚಾಲಕ ಆದ ರಘು ಹಾಲೂರು ಅವರು ಪೂರ್ಣಿಮ ಮೋಹನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪೂರ್ಣಿಮ ಮೋಹನ್ : ಸ್ನೇಹಿತರೆ, ಈ ದಿನ ಅಕ್ಕ ಸಮ್ಮೇಳನದ ಕೋ-ಕನ್ವೀನರ್ ಆದ ರಘು ಹಾಲೂರು ಅವರು ನಮ್ಮೊಂದಿಗಿದ್ದಾರೆ. ಅವರು ಇಲ್ಲಿಗೆ ಬಂದು ಮಾತನಾಡಲು ಒಪ್ಪಿರುವುದು ನಮ್ಮ ಸೌಭಾಗ್ಯ. ನಮಸ್ಕಾರ ರಘು ಅವರೆ!
ರಘು ಹಾಲೂರು : ನಮಸ್ಕಾರ!
ಪೂರ್ಣಿಮ ಮೋಹನ್ : ಈ ಕನ್ವೆನ್ಷನ್ ನ ಥೀಮ್ ಆದ 'ಸಾಧನೆ, ಸಂಭ್ರಮ, ಸಂಕಲ್ಪ,' ಬಹಳ ಅದ್ಭುತವಾಗಿ ಬಂದಿದೆ. ಇದರ ಒಂದು ಹಿನ್ನೆಲೆ ಏನು? ಇದರ ಆಧಾರದ ಮೇಲೆ ನಾವು ಕನ್ವೆನ್ಷನ್ ನಲ್ಲಿ ಏನನ್ನು ಎಕ್ಸ್ಪೆಕ್ಟ್ ಮಾಡಬಹುದು?
ರಘು ಹಾಲೂರು : ಈ ಸಮ್ಮೇಳನದ ಆಧಾರವಸ್ತು ಅಥವಾ ಥೀಮ್ ವಿಶೇಷವಾಗಿರಬೇಕು ಅಂತ ನಾವು ಬಹಳ ಯೋಚಿಸಿದೆವು. ಅದಕ್ಕೂ ಮುಂಚೆ ಹೋಗಿ ಹೇಳುವುದಾದರೆ, ನಮ್ಮ ಕನ್ವೆನ್ಷನ್ ವಿಶೇಷ ರೀತಿಯಲ್ಲಿ ಮೂಡಿಬರಬೇಕು, ಜನರ ಮನಸ್ಸಿಗೆ ತಟ್ಟಬೇಕು, ಹತ್ತು ಹದಿನೈದು ವರ್ಷಗಳ ಕಾಲ ಅವರ ಮನಸ್ಸಿನಲ್ಲಿ ಸಂತಸ ತರುವ ವಿಷಯವಾಗಿ, ಖುಷಿ ತರುವ ನೆನಪಾಗಿ ಉಳಿಯಬೇಕು ಎಂದರೆ ಸಮ್ಮೇಳನಕ್ಕೆ ಒಂದು ಥೀಮ್ ಅಥವ ಒಂದು fixed boundary ಡಿಫೈನ್ ಮಾಡಬೇಕು ಎಂದುಕೊಂಡೆವು. ಹಾಗೆ ಅಂದುಕೊಂಡಾಗ, ಈಗ ನಡೆಯುತ್ತಿರುವುದು ವಿಶ್ವ ಕನ್ನಡ ಸಮ್ಮೇಳನವಾದ್ದರಿಂದ, ಕನ್ನಡಿಗರ ಬಗ್ಗೆ, ಅಂದರೆ ಕನ್ನಡಿಗರ ಸಾಧನೆಯನ್ನು ಹೈಲೈಟ್ ಮಾಡುವಂಥ ಥೀಮ್ ಅನ್ನು ಏಕೆ ಇಟ್ಟುಕೊಳ್ಳಬಾರದು ಅಂತ ಯೋಚಿಸಿದೆವು.
ಕನ್ನಡಿಗರು ಒಂದು ಕಮ್ಯೂನಿಟಿ ಆಗಿ, ಒಂದು ಸಮುದಾಯವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಹಲವಾರು ರೀತಿಯ ಸಾಧನೆಗಳನ್ನು ಮಾಡಿದ್ದೇವೆ. ಕನ್ನಡಿಗರ ಗುಣವೇ ಅಂಥದ್ದು. ಕನ್ನಡಿಗರಿಗೆ ವಿಶಾಲ ಹೃದಯದ ಜೊತೆ ಸ್ವಲ್ಪ ಸಂಕೋಚದ ಸ್ವಭಾವವೂ ಇದೆ. ಅವರ ಬಗ್ಗೆ ಅವರು ಹೇಳಿಕೊಳ್ಳುವುದು ಕಮ್ಮಿ. ಆಮೇಲೆ ಕನ್ನಡಿಗರು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೆ leadership roles ತಗೆದುಕೊಳ್ಳುವುದು ಕಮ್ಮಿ ಎಂತಲೂ ಅವರ ಬಗ್ಗೆ ಮಾತು ಕೇಳಿಬರುತ್ತದೆ. ಹಾಗಾಗಿ ಈ ಒಂದು ಅವಕಾಶವನ್ನು ನಾವು ಬಳಸಿಕೊಂಡು, ಕನ್ನಡಿಗರು ಶತಮಾನಗಳಿಂದ ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ರೀತಿಯ ಸಾಧನೆಗಳನ್ನು ಮಾಡಿದ್ದೀವಿ ಅನ್ನುವುದರ ಬಗ್ಗೆ ಒಂದು ಅವಲೋಕನ ಮಾಡುತ್ತಾ, ನೆನಪು ಮಾಡಿಕೊಳ್ಳುತ್ತಾ, ಸ್ಮರಿಸುತ್ತಾ ಅವರ ಸಾಧನೆಯನ್ನು ಸೆಲೆಬ್ರೇಟ್ ಮಾಡೋಣ ಅಂತ ಅಂದುಕೊಂಡೆವು. ಆದರೆ ಅದು ಸೆಲೆಬ್ರೇಶನ್ಗೇ ನಿಲ್ಲಬಾರದು. ಇನ್ನೊ ಒಂದು ಹೆಜ್ಜೆ ಮುಂದೆ ಹೋಗಿ, ಇಷ್ಟು ವರ್ಷ ಮಾಡಿದ ಸಾಧನೆಯಿಂದ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತೇವೆ ಎನ್ನುವ ಹುರುಪು ತರಬೇಕು.
ಆದ್ದರಿಂದ, 'ಸಾಧನೆ, ಸಂಭ್ರಮ, ಸಂಕಲ್ಪ. ' ಎಂಬ ಸ್ಲೋಗನ್ ತಯಾರು ಮಾಡಿದೆವು. ಹಾಗೆಂದರೆ, ಹಿಂದಿನ ಸಾಧನೆಗಳಿಗೆ ಸಂಭ್ರಮ, ಮುಂದಿನ ಸಾಧನೆಗಳಿಗೆ ಸಂಕಲ್ಪ ಅಂತ. ನಮ್ಮ ಕನ್ವೆನ್ಷನ್ನು ಒಂದು ಸಂಭ್ರಮದ ತಾಣ. ಈ ಸಂಭ್ರಮದ ತಾಣದಲ್ಲಿ ಸುಮ್ಮನೆ ಒಂದು ಮೀನಿಂಗ್ಲೆಸ್ ಸೆಲೆಬ್ರೇಶನ್ ಮಾಡದೆ, ಅದಕ್ಕೊಂದು ಸಾಲಿಡ್ ಮೀನಿಂಗ್ ಕೊಟ್ಟು ಎಲ್ಲ ಸಾಧನೆಗಳನ್ನು ಸ್ಮರಿಸುವ ಮೂಲಕ ಈ ಸಂಭ್ರಮದ ವಾತಾವರಣವನ್ನು ಸೃಷ್ಟಿ ಮಾಡೋಣ, ಹಾಗೆಯೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಪೀಳಿಗೆಗೆ ಉತ್ತೇಜನ ನೀಡುವಂತೆ ಸಂಕಲ್ಪ ಕೂಡ ಮಾಡೋಣ. ನಾನು ಎಲ್ಲರಿಗೂ ಒಂದು ಉದಾಹರಣೆಯನ್ನು ಕೊಡುತ್ತಿರುತ್ತೇನೆ- ಒಂದು harvesting cycle ನೋಡಿದರೆ, ನಾವು ವರ್ಷವಿಡೀ ದುಡಿಯುತ್ತೇವೆ, ಆಮೇಲೆ crop ಬರುತ್ತದೆ. Crop ಬಂದಮೇಲೆ ಸಂಕ್ರಾಂತಿ, ಸುಗ್ಗಿ ಅಂತ ಸಂಭ್ರಮ ಆಚರಿಸುತ್ತೇವೆ. ಆದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ. ನಾವು ಅಲ್ಲಿಗೇ ಬಿಡದೆ, ಮುಂದಿನ ವರ್ಷ ಇನ್ನೂ ಹೆಚ್ಚಿನ ಬೆಳೆ ತೆಗೆಯುವುದಕ್ಕೆ ಪ್ರಯತ್ನ ಮಾಡುತ್ತೇವೆ, ಬೀಜ ಬಿತ್ತುತ್ತೇವೆ. ಅದೇ ರೀತಿ, ಸಾಧನೆ ಸಂಭ್ರಮ ಸಂಕಲ್ಪ ಕೂಡ. ಹಿಂದಿನ ಸಾಧನೆಗಳಿಗೆ ಸಂಭ್ರಮ, ಮುಂದಿನ ಸಾಧನೆಗಳಿಗೆ ಸಂಕಲ್ಪ.
ಪೂರ್ಣಿಮ ಮೋಹನ್ : ಬಹಳ ಅದ್ಭುತವಾಗಿದೆ. ಡೀಟೇಲ್ ಆಗಿ ನೀವು ಎಕ್ಸ್ಪ್ಲೇನ್ ಮಾಡಿದ್ದಕ್ಕೆ ಧನ್ಯವಾದ. ನೀವು ಕೋ-ಕನ್ವೀನರ್ ಆಗಿ ಎಂಟರ್ಟೇನ್ಮೆಂಟ್ ಸೇರಿದಂತೆ, ಹಲವಾರು ಸೆಕ್ಷನ್ಗಳಲ್ಲಿ you have taken the lead. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರೂ ಎದುರು ನೋಡುತ್ತಿರುವುದು ಮನರಂಜನೆ. ಈ ಮನರಂಜನೆಯನ್ನು ಎಷ್ಟು ವಿಭಿನ್ನವಾಗಿ ಮಾಡುತ್ತಿದ್ದೀರ ಎಂಬುದರ ಬಗ್ಗೆ ನಮಗೆ ಈಗಾಗಲೇ ಒಂದಷ್ಟು ಟ್ರೇಲರ್ಸ್ ಬಂದಿವೆ. ನೀವು ಇದಕ್ಕೆ ಏನಾದರೂ ಸೇರಿಸುವುದಿದೆಯೆ?
ರಘು ಹಾಲೂರು : ಖಂಡಿತ. ನೀವು ಹೇಳಿದ ರೀತಿಯಲ್ಲಿ ನಾನು ತೆಗೆದುಕೊಂಡಿರುವುದು ನಾಲಕ್ಕು ಏರಿಯಾಗಳನ್ನು-Entertainment, publicity, innovation and souvenir. ನೀವು ಇವುಗಳನ್ನು ಅವಲೋಕಿಸಿ ನೋಡಿದರೆ, ಈ ನಾಲ್ಕೂ ತುಂಬ ಕ್ರಿಯೇಟಿವಿಟಿ ಬೇಕಾದಂಥ ಏರಿಯಾಗಳು. ನನ್ನ ಫ್ರೆಂಡ್ ಸರ್ಕಲ್ನಲ್ಲಿ ತುಂಬ ಕ್ರಿಯೇಟಿವ್ ಪೀಪಲ್ ಇದ್ದಾರೆ. ಎಂಟರ್ಟೇನ್ಮೆಂಟ್ ಆಗಲೀ, ಪಬ್ಲಿಸಿಟಿ ಆಗಲೀ, ಸೂವನಿಯರ್ ಆಗಲೀ, ಅಥವ ಹೊಸದಾಗಿ ಮಾಡಿಕೊಂಡಿರುವ ಇನೋವೇಶನ್ ಆಗಲೀ- ಈ ನಾಲ್ಕೂ ಏರಿಯಾಗಳಲ್ಲಿರುವ ಕ್ರಿಯೇಟಿವ್ ಎನರ್ಜಿಯನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ. ಆದ್ದರಿಂದ ನನ್ನ ಸ್ನೇಹಿತರ ಜೊತೆಸೇರಿ 110 ಜನರ ತಂಡವನ್ನು ಕಟ್ಟಿದ್ದೇನೆ, ಈ ನಾಲ್ಕೂ ಏರಿಯಾಗಳನ್ನು ಒಳಗೊಳ್ಳೋದಕ್ಕೆ.
ಈಗಾಗಲೇ ನೀವು ಹೇಳಿದಂತೆ ಪ್ರತಿಯೊಂದು ಏರಿಯಾನೂ ವಿಶಿಷ್ಟವಾದ ರೀತಿಯಲ್ಲಿ ಕವರ್ ಮಾಡಿದ್ದೇವೆ. ಈ ನಾಲ್ಕರಲ್ಲೂ ಏನಾದರೂ ಒಂದು uniqueness... ಒಂದು highest level of creativity... ಒಂದು ಸ್ಪೆಷಲ್ ಫೀಚರ್ ಇಟ್ಟುಕೊಳ್ಳಬೇಕು ಅಂತ ಪ್ರಯತ್ನ ಮಾಡಿದೀವಿ. ಬ್ರೀಫ್ ಆಗಿ ಪ್ರತಿಯೊಂದು ಏರಿಯಾ ಬಗ್ಗೆನೂ ಹೇಳ್ತೀನಿ. ಮನರಂಜನೆಯ ವಿಷಯಕ್ಕೆ ಬಂದರಂತೂ ಬೇ ಏರಿಯಾ ಜನರು ಅದೃಷ್ಟಶಾಲಿಗಳು ಅಂತ ಹೇಳ್ಬೇಕು. ಇಷ್ಟೊಂದು ಪ್ರತಿಭೆ ಕರ್ನಾಟಕವನ್ನು ಬಿಟ್ಟು ಹೊರಗಡೆ ಇರುವುದಾದರೆ ಅದು ಬೇ ಏರಿಯಾದಲ್ಲಿ ಅಂತ ಅಮೇರಿಕದ ಬೇರೆ ಭಾಗಗಳ ಜನ ಹೇಳುತ್ತಾರೆ. "ನೀವು ಬೇ ಏರಿಯಾದವರು ಪರವಾಗಿಲ್ಲ ಬಿಡಿಪ್ಪ, ಕೆಕೆಎನ್ಸಿಯಲ್ಲಿ ತುಂಬ ಟ್ಯಾಲೆಂಟ್ ಇದೆ" ಅಂತ ಅನ್ನುತ್ತಾರೆ.
ಆ ಒಂದು ಇಮೇಜನ್ನು ಕಾಪಾಡಿಕೊಂಡು, ಅದನ್ನು ಇನ್ನೂ enhance ಮಾಡಬೇಕು ಅನ್ನುವ ದೃಷ್ಟಿಯಿಂದ ಗಮನ ಕೊಡ್ತಾ ಇರೋ ಎರಡು ವಿಷಯಗಳು- ಕ್ರಿಯೇಟಿವಿಟಿ ಮತ್ತು ಪ್ರೊಫೆಶನಲಿಸಮ್. ಕ್ರಿಯೇಟಿವಿಟಿ ಅಂದರೆ ಯಾವ ರೀತಿಯ ಹೊಸ ಕಾರ್ಯಕ್ರಮಗಳನ್ನು ತರಬಹುದು? ಮತ್ತು ಯಾವ ರೀತಿ ಒಂದೇ ತರಹದ ಕಾರ್ಯಕ್ರಮಗಳನ್ನು ಮಾಡದೆ, ಬೇರೆ ಬೇರೆ ಥರದವನ್ನು ಸಮನಾಗಿ ವಿಂಗಡಿಸಬಹುದು ಅಂತ ಯೋಚನೆ ಮಾಡಿದ್ದೀವಿ. ಒಬ್ಬೊಬ್ಬರಿಗೆ ಒಂದೊಂದು ಅಭಿರುಚಿ ಇರುತ್ತದೆ. ಕೆಲವರಿಗೆ ಕ್ಲಾಸಿಕಲ್ ಡಾನ್ಸ್ ಇಷ್ಟ ಇರುತ್ತದೆ, ಕೆಲವರಿಗೆ ಮಾಡರ್ನ್-ಕಂಟೆಂಪೊರರಿ ಡಾನ್ಸ್ ಇಷ್ಟ ಇರುತ್ತದೆ, ಕೆಲವರಿಗೆ ಮ್ಯೂಸಿಕ್ ಆದರೆ ಕೆಲವರಿಗೆ ಡ್ರಾಮ ಇಷ್ಟ ಇರುತ್ತದೆ. ಕೆಲವರಿಗೆ mad ads ಅಥವ shadow play ಅಂಥ unique programs ಇಷ್ಟ ಇರುತ್ತದೆ.
ಎಲ್ಲರ ಅಭಿರುಚಿಯನ್ನು ಕಾಪಾಡಿಕೊಂಡು ಅವರವರ ಕ್ಯಾಟಗರಿಗೆ ಕೇಟರ್ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ -ಇದು ಕ್ರಿಯೇಟಿವಿಟಿ ಆಯಿತು. ಇನ್ನು ಪ್ರೊಫೆಶನಲಿಸಮ್ ವಿಷಯಕ್ಕೆ ಬಂದರೆ-time management. Zero delay ಅನ್ನುವ ಸಂಗತಿ ನಮ್ಮ ಹೃದಯಕ್ಕೆ ಬಹಳ ಹತ್ತಿರವಾದದ್ದು. ಆದಷ್ಟು ಮಟ್ಟಿಗೆ ನಾವು ಹೇಳಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಮತ್ತು ಮುಗಿಸಬೇಕು ಎಂದು ತುಂಬ ಕಟ್ಟುನಿಟ್ಟಾದ ಪ್ರಯತ್ನ ಮಾಡುತ್ತಿದ್ದೇವೆ. ಅದು ಹಾಗೇ ಆಗಲಿ ಅಂತ ಆಶಿಸೋಣ.
ಇನ್ನು ಪಬ್ಲಿಸಿಟಿ ವಿಷಯಕ್ಕೆ ಬಂದರೆ, ಅದರಲ್ಲಿ ಕ್ರಿಯೇಟಿವಿಟಿ ಇರುವ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬೇಕು. ಅದರಲ್ಲಿರುವ ವಿಭಿನ್ನತೆಯನ್ನು ಗಮನಿಸಿರಬೇಕು. ನಮ್ಮ ವೆಬ್ಸೈಟ್, ವಿಡಿಯೋಗಳು, ಫೇಸ್ಬುಕ್ ಗ್ರೂಪ್ ಮತ್ತು ಚಾನಲ್ಗಳು, ಲೋಕಲ್ ಪಬ್ಲಿಸಿಟಿ, ನಾವು ಜನರನ್ನು ರೀಚ್ ಮಾಡುತ್ತಿರುವುದಾಗಲೀ, ನಮ್ಮ ಕನ್ವೆನ್ಷನ್ app ಆಗಲೀ - ಮೊಟ್ಟಮೊದಲ ಬಾರಿಗೆ ಈ ರೀತಿಯ ಕನ್ವೆನ್ಷನ್ಗೆ ಸ್ಪೆಷಲ್ ಆಪ್ ಕ್ರಿಯೇಟ್ ಮಾಡಿದ್ದೇವೆ, ಮತ್ತು ಅದು ತುಂಬಾ ಜನಪ್ರಿಯವಾಗಿದೆ. It has a lot of features-ಹೀಗೆ ಎಲ್ಲವೂ ವಿಭಿನ್ನ.
ಇದೆಲ್ಲವೂ ಪಬ್ಲಿಸಿಟಿ ಮತ್ತು ಇನೊವೇಶನ್ ಟೀಮಿನ ಕೆಲಸ. ಇನೋವೇಶನ್ ಟೀಮ್ ಯಾಕೆ ಕ್ರಿಯೇಟ್ ಮಾಡಿದೆವು ಅಂದರೆ, ಬೇ ಏರಿಯಾದಂತಹ, ಸಿಲಿಕಾನ್ ಕಣಿವೆಯಂಥ ಟೆಕ್ನಾಲಜಿ ಹಬ್ ನಲ್ಲಿ ಇದ್ದುಗೊಂಡು ನಾವು ಕ್ರಿಯೇಟಿವಿಟಿಯ ಜೊತೆ ಟೆಕ್ನಾಲಜಿಯನ್ನು ಕಂಬೈನ್ ಮಾಡಲಿಲ್ಲ ಅಂದರೆ ನಮಗೇ ಸಮಾಧಾನ ಆಗೊಲ್ಲ. ಆದ್ದರಿಂದ ಇನೋವೇಶನ್ ಅಂತ ಹೊಸ ಟೀಮ್ ಅನ್ನು ಶುರು ಮಾಡಿಬಿಟ್ಟು, ಎಂಟರ್ಟೇನ್ಮೆಂಟ್, ಊಟ, ಅಥವ ರಿಜಿಸ್ಟ್ರೇಷನ್-ಹೀಗೆ ಎಲ್ಲ ಏರಿಯಾಗಳಲ್ಲೊ ಇನೋವೇಶನ್ನನ್ನು ತರುವ ಪ್ರಯತ್ನ ಮಾಡಿದ್ದೇವೆ, ನೀವೇ ನೋಡಿರುವಂತೆ ತಂದಿದ್ದೇವೆ ಕೂಡ. ಈವೆಂಟ್ ನ ದಿನ ಇನ್ನೊ ತರುತ್ತೇವೆ.
ಹಾಗೇ ಸೂವನಿಯರ್... ಸ್ಮರಣಸಂಚಿಕೆ ಕೂಡ. ಅದು ಒಂದು treasure box ಅನ್ನುವ ರೀತಿಯಲ್ಲಿರುತ್ತದೆ. ಇಷ್ಟೆಲ್ಲ ಚೆನ್ನಾಗಿ ಕಾರ್ಯಕ್ರಮಗಳಾಗ್ತಾ ಇರೋವಾಗ ಅವುಗಳ ಮಧುರ ನೆನಪುಗಳನ್ನೆಲ್ಲ ಸೆರೆಹಿಡಿದು ಹತ್ತು ಹದಿನೈದು ವರ್ಷಗಳ ನಂತರವೂ ಜನರು ಪುಟಗಳನ್ನು ತಿರುವಿಹಾಕಿ ನೆನಪು ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಅಂತ ಪ್ರಯತ್ನ ಮಾಡುತ್ತಿದ್ದೇವೆ.