ದೋಹಾ ಕನ್ನಡಿಗರ ನಲಿದಾಡಿಸಿದ ಶ್ರೀನಾಥ್, ರವಿಶಂಕರ್
ಅರಬ್ ದೇಶವಾದ ಕತಾರ್ ನ ರಾಜಧಾನಿ ದೋಹಾದಲ್ಲಿರುವ, ಕರ್ನಾಟಕ ಸಂಘವು, ಇತ್ತೀಚೆಗೆ ಅದ್ಧೂರಿಯಾಗಿ "ವಸಂತೋತ್ಸವ" ಕಾರ್ಯಕ್ರಮವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ನಟರಾದ ಪ್ರಣಯ ರಾಜ ಶ್ರೀನಾಥ್ ಹಾಗು ಸಕಲ ಕಲಾವಲ್ಲಭ ರವಿಶಂಕರ್ ಅವರುಗಳು ಆಗಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಖ್ಯಾತ ವಾಗ್ಮಿಗಳು ಹಾಗು ಚಿಂತಕರು ಆದ ಡಾ.ವಿ.ಬಿ. ಆರತಿ ಅವರ ನಮ್ಮ ಆಚಾರ-ವಿಚಾರ, ನಮ್ಮ ಭಾಷೆ ಹಾಗು ಸಂಪ್ರದಾಯಗಳ ಕುರಿತ ಮಾತು ಸಭಿಕರ ಮೆಚ್ಚುಗೆಯ ಕರತಾಡನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ಮುಖ್ಯ ಮನೋರಂಜಕರಾಗಿ ಆಗಮಿಸಿದ್ದ, ವಿಶ್ವೇಶ್ ಭಟ್ ನೇತೃತ್ವದ, "ಸ್ವರಾಮೃತ" ವಾದ್ಯ ತಂಡ ತಮ್ಮ ವಿಶೇಷ Kan-fusionಗಳ someಗೀತೋತ್ಸವ ನೆರೆದಿದ್ದ ಪ್ರೇಕ್ಷಕರ ಒಲುಮೆಯನ್ನು ಗಳಿಸಿದ್ದಲ್ಲದೆ, ಶ್ರೀನಾಥ್, ರವಿಶಂಕರ್ ಹಾಗು ಸಭಿಕರುಗಳು ಅವರ ಹಾಡಿನ Kan-fusionಗೆ ಎದ್ದು ಕುಣಿಯಲಾರಂಭಿಸಿದ್ದು ಮತ್ತೊಂದು ವಿಶೇಷ.
ನಟ ರವಿಶಂಕರ್ ಅವರ ಹಾಡಿಗೆ ಮತ್ತು ಅವರ ಸಂಭಾಷಣೆಯ ಆರ್ಭಟಕ್ಕೆ ಇಡೀ ಸಭಾಂಗಣ ತಲ್ಲಣಿಸಿತು. ಅವರ "ಕನ್ನಡ ಅಂದ್ರೆ ವಾಹ್ ವಾಹ್.. ಕರ್ನಾಟಕ ಸಂಘ ಅಂದ್ರೆ ದೋಹಾ.." ಎಂಬ ಡೈಲಾಗ್ ಗೆ ಕರತಾಡನ ಮುಗಿಲು ಮುಟ್ಟಿತ್ತು. ತಿರುಗಿಸಿ-ಮುರುಗಿಸಿ ಪ್ರಶ್ನೆಗಳನ್ನು ಕೇಳಿ ಸತಿ-ಪತಿಯರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ, ಶ್ರೀನಾಥ್ ಅವರ "ಆದರ್ಶ ದಂಪತಿ" ಕಾರ್ಯಕ್ರಮ, ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ, ರಂಜಿಸುವಲ್ಲಿ ಯಶಸ್ವಿಯಾಯಿತು.
ಶ್ರೀನಾಥ್ ಮತ್ತು ರವಿಶಂಕರ್ ಗೆ ಸನ್ಮಾನ : ಮಮತಾ ಫಣೀಂದ್ರ ಅವರ ಸ್ವಾಗತ ಗೀತೆಯೊಂದಿಗೆ ಆರಂಭವಾಗಿ, ಸಂಘದ ಅಧ್ಯಕ್ಷ ಎಚ್.ಕೆ ಮಧು ಅವರ ಸ್ವಾಗತ ಭಾಷಣದೊಂದಿಗೆ ಮುಂದುವರೆದ ಕಾರ್ಯಕ್ರಮದಲ್ಲಿ, ಪ್ರಣಯ ರಾಜ ಶ್ರೀನಾಥ್ ಅವರಿಗೆ "ಕಲಾ ತಪಸ್ವಿ" , ರವಿಶಂಕರ್ ಅವರಿಗೆ "ಪ್ರತಿಭಾ ಪ್ರಖರ ನಟ ಶಿರೋಮಣಿ" ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಯಿತು. ಸಂಘದ ಸದಸ್ಯರಾದ ಲಕ್ಕಪ್ಪ ಗೌಡ ಹಾಗು ಅಕ್ಷಯ ಶೆಟ್ಟಿ ಅವರಿಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಲ್ಲಿಸುತ್ತಿರುವ ಸೇವೆಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಶ್ರೀನಾಥ್ ಹಾಗು ರವಿಶಂಕರ್ ಅವರ ಚಲನಚಿತ್ರ ಗೀತೆಗಳ ನೃತ್ಯವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನೀಲ್ ಕಮಲಾಕ್ಷ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎಚ್.ಕೆ. ಮಧು ಅವರು ರಚಿಸಿದ, ಅಶ್ವಿನ್ ರಾಗ ಸಂಯೋಜನೆಯ ಹಾಡುಗಳ "ನಮ್ಮ ಹಾಡು ಭಾಗ-1" ಅಡಕ ಮುದ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ನಿರೂಪಕರಾಗಿ ಬಿಟಿವಿ ಸುದ್ದಿ ನಿರೂಪಕ, ಬೆಳ್ಳಿ ತೆರೆಯಲ್ಲೂ ನಟಿಸಿರುವ ಚಂದನ್ ಶರ್ಮ ಅವರು ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ಸ್ಥಳೀಯ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಷಾ ರವಿಶಂಕರ್ ಅವರು ಆಗಮಿಸಿದ್ದರು.
{promotion-urls}