ಜರ್ಮನಿಯಲ್ಲಿ ಹೂವಿನ ಮೇಲೊಂದು ಕತ್ತರಿ ಪ್ರಯೋಗ
ಚೆಲುವೆಲ್ಲಾ ತಂದೆಂದಿತು ಎಂದು ಹಾಡುವ ಹೂವು ಎಂದರೆ ಹಾವಿನಂತಹ ಜಡೆಬಿಟ್ಟ ಮಹಿಳೆಯರ ಮನವು ಡೇರೆಯಂತೆ ಅರಳುತ್ತದೆ. ಅದರಲ್ಲೂ ಘಮಘಮಿಸುವ ಜಾಜಿ ಮಲ್ಲಿಗೆ, ಪಿಂಕ್ ಆಬುಲಿ, ಕೆಂಡಸಂಪಿಗೆ ಹೂವುಗಳೆಂದರೆ ಜಡೆಬಿಟ್ಟ, ಸೀರೆಯುಟ್ಟ, ಹಣೆಗೆ ಸಿಂಧೂರವಿಟ್ಟ ಹೆಂಗಳೆಯರಿಗೆ ಪ್ರಾಣ, ಗಂಡ ತಂದುಕೊಟ್ಟರೆ ಪಂಚಪ್ರಾಣ.
ಸೂರ್ಯಕಾಂತಿಯ ಈ ತೋಟದಲ್ಲಿ ಸೆಲ್ಫಿ ತಗೊಳಕ್ಕೆ ಜಸ್ಟ್ 20 ರುಪೀಸ್
ಈಗ ಹೂವಿನ ಬಗ್ಗೆ ವಿಶೇಷವಾಗಿ ಬರೆಯಲು ಕಾರಣವೇನೆಂದರೆ, ಜರ್ಮನಿಯಲ್ಲಿ, ಬೇಸಿಗೆಯ ಹೊತ್ತಿನಲ್ಲಿ ಉಪನಗರ(Suburb)ಗಳಲ್ಲಿ, ಜನರು ತಮ್ಮ ಸಣ್ಣ ಜಮೀನಿನಲ್ಲಿ ಹೂವುಗಳನ್ನು ಬೆಳೆಯುತ್ತಾರೆ. ಗ್ಲಾಡಿಯೋಲಸ್, ಸೂರ್ಯಕಾಂತಿ, ಲಿಲಿ, ಡಾಲಿಯಾ ಇತ್ಯಾದಿ ಹೂವುಗಳನ್ನು ಬೆಳೆಯುತ್ತಾರೆ.
ಆದರೆ ಇಲ್ಲಿನ ವಿಶೇಷವೇನೆಂದರೆ, ಎಲ್ಲಿ ಹೂವುಗಳನ್ನು ಬೆಳೆಸಲಾಗಿರುತ್ತದೆಯೋ, ಅಲ್ಲಿನಿಂದಲೇ ನೇರವಾಗಿ ಹೂವುಗಳನ್ನು ಕತ್ತರಿಸಿಕೊಂಡು ಬರಬಹುದು. ಯಾರ ಮೇಲ್ವಿಚಾರಣೆಯೂ ಇರುವುದಿಲ್ಲ, ಯಾರೂ ಹೂವುಗಳನ್ನು ಕತ್ತರಿಸಿಯೂ ಕೊಡುವುದಿಲ್ಲ. ಯಾರಿಗೆ ಬೇಕು, ಅವರೇ ಕತ್ತರಿಸಿಕೊಂಡು ಬರಬೇಕು.
ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್
ಜಮೀನಿನಲ್ಲಿ ವಿವಿಧ ಹೂವುಗಳನ್ನು ಸಾಲು ಸಾಲುಗಳಾಗಿ ಅಕ್ಕಪಕ್ಕದಲ್ಲಿ ನೆಡಲಾಗುತ್ತದೆ. ಅದರ ಹತ್ತಿರವೇ ದುಡ್ಡು ಸಂಗ್ರಹಿಸುವ ಡಬ್ಬಿ ಮತ್ತು ಕತ್ತರಿಯನ್ನು ಇಡಲಾಗಿರುತ್ತದೆ .ಪ್ರತಿ ಹೂವಿನ ತುಂಡಿಗೂ ಒಂದು ಬೆಲೆಯನ್ನು ನಿಗದಿ ಪಡಿಸಲಾಗಿರುತ್ತದೆ. ಯಾರಿಗೆ ಎಷ್ಟು ಹೂವುಗಳು ಬೇಕು, ಅಷ್ಟನ್ನು ಕತ್ತರಿಸಿಕೊಂಡು ಅದರ ನಿಗದಿ ಪಡಿಸಿದ ಬೆಲೆಗೆ ಅನುಗುಣವಾಗಿ ಲೆಕ್ಕ ಮಾಡಿ ದುಡ್ಡನ್ನು ಡಬ್ಬಿಯಲ್ಲಿ ಹಾಕಿ ಬರಬೇಕು. ನಾನು ಮೊದಲೇ ಹೇಳಿದ ಹಾಗೆ, ಯಾರೂ ಮೇಲ್ವಿಚಾರಕರು ಇರುವುದಿಲ್ಲ. ಜನರ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ.
ನಾನು ಮೊದಲ ಬಾರಿ ಈ (Selbst schneiden-ಸ್ವತಃ ಕತ್ತರಿಸುವುದು) ದೃಶ್ಯವನ್ನು ನೋಡಿದಾಗ ಆಶ್ಚರ್ಯವಾಗಿತ್ತು. ಏಕೆಂದರೆ, ನಮ್ಮ ದೇಶದಲ್ಲಿ ಇನ್ನೊಬ್ಬರ ಮನೆಯ ಕಾಂಪೌಂಡ್ ಹಾರಿ ಹೂವುಗಳನ್ನು ಕೀಳುವ ದೃಶ್ಯ ಅಲ್ಲಲ್ಲಿ ಕಾಣಲು ಸಿಗುತ್ತದೆ. ಇಲ್ಲಿ ಭಾರತ ಮತ್ತು ಜರ್ಮನಿಯನ್ನು ಹೋಲಿಕೆ ಮಾಡುತ್ತಿಲ್ಲ. ಆದರೆ, ಬೇರೆ ಬೇರೆ ದೇಶದ ವೈವಿಧ್ಯತೆಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ.
ಹೀಗೆಯೇ ನಮಗೆ ಬೇಕಾದಷ್ಟು ಹೂಗಳನ್ನು ನೇರವಾಗಿ ತೋಟದಿಂದ ಕಿತ್ತು, ಅಲ್ಲಿಯೇ ಹಣ ಪಾವತಿ ಮಾಡುವ ದೃಶ್ಯ ನಮ್ಮ ಕರ್ನಾಟಕದಲ್ಲೂ ನೋಡಲು ಸಿಗುತ್ತದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಕದರಮಂಡಲಗಿಗೆ ಹೋಗುವ ದಾರಿಯಲ್ಲಿ ಕೆಲವು ತೋಟಗಳಲ್ಲಿ ಸೇವಂತಿಗೆ ಹೂವುಗಳನ್ನು ಬೆಳೆಯುತ್ತಾರೆ.
ಅಲ್ಲಿ ನಮಗೆ ಬೇಕಾದಷ್ಟು ಹೂವುಗಳನ್ನು ಕಿತ್ತು ತೂಕ ಮಾಡಿಸಿ ದುಡ್ಡು ಕೊಟ್ಟು ಬರಬಹುದು. ಆದರೆ ಅಲ್ಲಿ ಹಣ ಸಂಗ್ರಹಿಸಲು ಡಬ್ಬಗಳು ಇಲ್ಲ. ಹಣವನ್ನು ತೆಗೆದುಕೊಳ್ಳಲು ತೋಟಕ್ಕೆ ಸಂಬಂಧಪಟ್ಟ ಜನರು ಇರುತ್ತಾರೆ. ಆದರೆ ಬೇಸರದ ಸಂಗತಿ ಏನೆಂದರೆ, ಅಲ್ಲಿ ಯಾರೂ ಇಲ್ಲದಿದ್ದಾಗ ಕೆಲವು ಕಿಡಿಗೇಡಿಗಳು ಹೂವುಗಳನ್ನು ಕಿತ್ತುಕೊಂಡು ಹಾಗೆಯೇ ಓಡಿ ಹೋಗುತ್ತಾರೆ.
ಕದರಮಂಡಲಗಿ ಕಾಂತೇಶ ಅಂತಹ ಕಳ್ಳರಿಗೆ ಒಳ್ಳೆಯ ಬುದ್ಧಿ ಕೊಡ್ಲಪ್ಪ...