ಎಸ್ಎಲ್ ಭೈರಪ್ಪನವರಿಗೆ ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ
ಸಭಿಕರ ಪ್ರಚಂಡ ಕರತಾಡನದೊಂದಿಗೆ ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಡಾ. ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ, "ಸಿಂಗಾರ ಸಾಹಿತ್ಯ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಿಂಗಪುರ, ಅಕ್ಟೋಬರ್ 29 : ಸಂಜೆಯಾಗುತ್ತಲೇ ಸಿಂಗಪುರದ ಕನ್ನಡ ಮನಗಳೆಲ್ಲಾ ಕಾತುರದಿಂದ ಕಾಯುತ್ತಿದ್ದ ಘಳಿಗೆ ಬಂದಿತು. ಅದು ಕನ್ನಡ ಸಂಘ (ಸಿಂಗಪುರ) ದ ಮಾಸ ಪತ್ರಿಕೆ "ಸಿಂಚನ"ದ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭ.
ಕನ್ನಡ ಸಾರಸ್ವತ ಲೋಕ ಕಂಡ ಅತ್ಯಂತ ಜನಪ್ರಿಯ ಕಾದಂಬರಿಕಾರ ಡಾ. ಎಸ್ ಎಲ್ ಭೈರಪ್ಪ ಅವರು, ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ, ಪಬ್ಲಿಕ್ ಟಿವಿಯ ಸಿದ್ಧಹಸ್ತ ಪತ್ರಕರ್ತ ಎಚ್ ಆರ್ ರಂಗನಾಥ, ಜಾನಪದ ಅಕಾಡೆಮಿಯ ಅಧ್ಯಕ್ಷ ಕಪ್ಪಣ್ಣ ಮುಂತಾದವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
ಸಭಿಕರ ಪ್ರಚಂಡ ಕರತಾಡನದೊಂದಿಗೆ ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಡಾ. ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ, "ಸಿಂಗಾರ ಸಾಹಿತ್ಯ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ, "ಸಿಂಗಾರ ವಾಸ್ತು ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ, ಎಸ್ ಎನ್ ಓಂಕಾರ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ, "ಸಿಂಗಾರ ಯೋಗ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಬ್ಲಿಕ್ ಟಿವಿಯ ಸಿದ್ಧಹಸ್ತ ಪತ್ರಕರ್ತ ಎಚ್ ಆರ್ ರಂಗನಾಥ, ಜಾನಪದ ಅಕ್ಯಾಡೆಮಿಯ ಅಧ್ಯಕ್ಷ ಕಪ್ಪಣ್ಣ, ಕನ್ನಡ ಸಂಸ್ಕೃತಿ ಇಲಾಖೆಯ ಶ್ರೀ ಚೆನ್ನೂರ್, ಮತ್ತು ಆರ್ಟ್ ಆಫ್ ಲಿವಿಂಗ್ನ ರವೀಂದ್ರ ಪ್ರಸಾದ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸಲ್ಲಿಸಿ ಗೌರವಿಸಲಾಯಿತು.
ನಂತರ ಡಾ. ಎಸ್ ಎಲ್ ಭೈರಪ್ಪ ಮಾತನಾಡುತ್ತ, ಅವರನ್ನು ಒಬ್ಬ ಬರಹಗಾರರಾಗಿ ಬೆಳೆಸುವುದರಲ್ಲಿ ಓದುಗರ ಪಾತ್ರವೇ ಪ್ರಮುಖ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಎಲ್ಲರಿಗೂ "ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಕೆಟ್ಟ ಚಾಳಿ"ಯನ್ನು ಕನ್ನಡಿಗರು ತೊರೆದು, ಮನೆಯಲ್ಲಿ ಮತ್ತು ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಲ್ಲಿ ಕನ್ನಡದಲ್ಲೇ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಕನ್ನಡ ಸಂಘ (ಸಿಂಗಪುರ)ದ ಪ್ರಯತ್ನವನ್ನು ಶ್ಲಾಘಿಸಿದ ಅವರು, ಈ ಪ್ರಯತ್ನ ಸದಾ ಮುಂದುವರೆಯಬೇಕು ಎಂದು ಪ್ರೋತ್ಸಾಹಿಸಿದರು. ಉದಾಹರಣೆಯಾಗಿ ಇಂಗ್ಲೆಂಡಿನಲ್ಲಿ ನೆಲೆಸಿರುವ ಮಾರ್ವಾಡಿಗಳು ಮತ್ತು ಗುಜರಾತಿಗಳು ತಮ್ಮ ಮಕ್ಕಳಿಗೆ ತಮ್ಮ ಭಾಷೆಯನ್ನೇ ಕಲಿಸುವ ರೂಢಿಯನ್ನು ಕುರಿತಾಗಿ ಮಾತನಾಡಿದರು.
ನಮ್ಮ ಜನರು ಮಕ್ಕಳನ್ನು ಕೇವಲ ಉದ್ಯೋಗಾವಕಾಶಕ್ಕಾಗಿ ಮಾತ್ರ ಬದುಕಗೊಡದೇ, ಉದ್ಯೋಗಪತಿಗಳಾಗುವಂತೆ ತರಬೇತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇದರಿಂದ ತಮ್ಮತನ, ಭಾಷೆ, ಮತ್ತು ಸಂಸ್ಕೃತಿಗೆ ಬಲಬರುತ್ತದೆ ಎಂದು ನಮ್ಮವರು ಅರಿಯಬೇಕು ನುಡಿದರು.
ರಂಗನಾಥ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ, ದೂರದಲ್ಲಿರುವವರಿಗೆ ತಮ್ಮ ನೆಲ ಜಲದ ಬಗ್ಗೆ ಸ್ವಾಭಾವಿಕ ಆಸಕ್ತಿ ಮತ್ತು ಭಕ್ತಿ ಎಂದು ಹೇಳಿದರು. ಕನ್ನಡ ಸಂಘ (ಸಿಂಗಪುರ)ದ ಈ ಬೃಹತ್ ಪ್ರಯತ್ನವನ್ನು ಶ್ಲಾಘಿಸಿದರು. ಬೆಂಗಳೂರಿನಲ್ಲಿ ಕೂಡ ಇಂತಹ ಪ್ರಯತ್ನಗಳನ್ನು ಮಾಡುವ ಕಾಲ ಮುಂದೊಂದು ದಿನ ಬರಬಹುದು ಎಂದು ವಿಡಂಬನಾತ್ಮಕವಾಗಿ ಮಾತನಾಡಿದರು. ಸಿಂಗಪುರದ ಹೆಸರಿನಲ್ಲೇ ಕನ್ನಡವಿದೆ ಎಂದು ನುಡಿದ ಅವರು, ಸಿಂಗನ್ನಡಿಗರು ತಮ್ಮ ಕನ್ನಡ ಪ್ರೇಮವನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡ ವರ್ಗಾಯಿಸಬೇಕು ಎಂದು ಕರೆ ನೀಡಿದರು.