ಕರ್ನಾಟಕದ ವೈಭವ ಮೆರೆಸಿದ ಡಾ. ಸಂಜಯ್ ನರ್ತನ
ಕರ್ನಾಟಕದ ವೈಭವದ ಚರಿತ್ರೆಯನ್ನು ನಿರೂಪಿಸುವ, ಡಾ. ಸಂಜಯ ಶಾಂತಾರಾಮ್ ಅವರ 'ಶಿವಪ್ರಿಯ ನಾಟ್ಯ' ತಂಡ ಪ್ರಸ್ತುತಪಡಿಸಿದ "ರಸಮಯ ಕರ್ನಾಟಕ" ಎಂಬ ನೃತ್ಯ ರೂಪಕ ಸಿಂಗನ್ನಡಿಗರ ಮಾತೃ ಭಾಷಾ ಪ್ರೇಮಕ್ಕೆ ಇಂಬು ನೀಡಿತು.
ಸಿಂಗಪುರ, ಅಕ್ಟೋಬರ್ 30 : ಎರಡು ದಿನಗಳ ಸಿಂಗಾರ ಸಮ್ಮೇಳನದ ಮೊದಲ ದಿನ ಡಾ. ಸಂಜಯ ಶಾಂತಾರಾಮ್ ಅವರ 'ಶಿವಪ್ರಿಯ ನಾಟ್ಯ' ತಂಡ ಪ್ರಸ್ತುತಪಡಿಸಿದ ತಂಡ ವಿವಿಧ ಪ್ರಕಾರದ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳ ಮೇಳ ಪ್ರೇಕ್ಷಕರ ಕಿವಿಗಡಚಿಕ್ಕುವ ಚಪ್ಪಾಳೆಗೆ ಪಾತ್ರವಾದವು.
ಕರ್ನಾಟಕದ ವೈಭವದ ಚರಿತ್ರೆಯನ್ನು ನಿರೂಪಿಸುವ ಈ "ರಸಮಯ ಕರ್ನಾಟಕ" ಎಂಬ ನೃತ್ಯ ರೂಪಕ ಸಿಂಗನ್ನಡಿಗರ ಮಾತೃ ಭಾಷಾ ಪ್ರೇಮಕ್ಕೆ ಇಂಬು ನೀಡಿತು. ಕನ್ನಡ ನಾಡಿನ ಇತಿಹಾಸದ ಮುಖ್ಯ ಘಟ್ಟಗಳ ತುಣುಕುಗಳನ್ನು ರಸಮಯವಾಗಿ ನಿರೂಪಿಸಿದ ಈ ಅಮೋಘ ಪ್ರದರ್ಶನದಲ್ಲಿ ಡಾ. ಸಂಜಯ ಶಾಂತಾರಾಮ್ ಅವರ ತಂಡದವರೊಂದಿಗೆ ಸಿಂಗಪುರದ ಕಲಾವಿದರಾದ ಗಿರೀಶ್ ಜಮದಗ್ನಿ ಮತ್ತು ಭಾರ್ಗವಿ ಆನಂದ್ ಅವರು ಕೂಡ ಭಾಗವಹಿಸಿದ್ದು ಸಿಂಗನ್ನಡಿಗರಿಗೆ ಅಭಿಮಾನದ ವಿಷಯವಾಗಿತ್ತು.
ನಂತರ "ಜಾಯ್ ಅಲುಕ್ಕಾಸ್" ಮತ್ತು "ಜೆಟ್ ಏರ್ವೇಸ್" ಅವರು ಪ್ರಾಯೋಜಿಸಿದ ಭಾಗ್ಯಶಾಲಿ ಬಹುಮಾನ ವಿತರಣೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. [ಕನ್ನಡ ಉಳಿಸಬೇಕೆಂದರೆ ಮಕ್ಕಳನ್ನು ಉದ್ಯಮಿಗಳನ್ನಾಗಿಸಿ : ಎಸ್ಎಲ್ ಭೈರಪ್ಪ]
ಸರಳ ವಾಸ್ತು ಕುರಿತ ಸಾಕ್ಷ್ಯಚಿತ್ರ : ಬಹುಮಾನ ವಿತರಣೆಯ ತರುವಾಯ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಕುರಿತಾದ ಸಾಕ್ಷ್ಯ ಚಿತ್ರವನ್ನು ತೋರಿಸಲಾಯಿತು. ಅನಂತರ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಅವರು ಬದುಕನ್ನು ಸಫಲಗೊಳಿಸುವ ಕೆಲವು ಸೂತ್ರಗಳನ್ನು ಕುರಿತು ಮಾತನಾಡಿದರು.
ಮುಖ್ಯವಾಗಿ ಅವರು ತಂದೆ ತಾಯಿಗಳನ್ನು ಗೌರವಿಸಲು ಮತ್ತು ಇತರರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದರ ಬಗ್ಗೆ ಒತ್ತಿ ಹೇಳಿದರು. ಸರಳ ವಾಸ್ತುವಿನ ಮೂಲಕ ಮನೆಯಲ್ಲಿ ಒಳ್ಳೆಯ ಶಕ್ತಿಯನ್ನು ವರ್ಧಿಸಿ, ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಹೇಳಿದರು. [ಎಸ್ಎಲ್ ಭೈರಪ್ಪನವರಿಗೆ ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ]
ಜನಮನ ಗೆದ್ದ ಚಾಮ ಚೆಲುವೆ : ಎಲ್ಲ ನಾಟಕ ಪ್ರಿಯರು ಬಹು ಕಾತರದಿಂದ ಕಾಯುತ್ತಿದ್ದ ಮಂಡ್ಯ ರಮೇಶ್ ನಿರ್ದೇಶನದ "ಚಾಮ ಚೆಲುವೆ" ನಾಟಕ ಆರಂಭವಾಯಿತು. ಅದ್ಭುತವಾದ ಪರಿಸಜ್ಜಿಕೆಗಳು, ವರ್ಣಮಯ ಜಾನಪದ ಕಥೆ ಮತ್ತು ವೃತ್ತಿಪರ ಕಲಾವಿದರ ಹದವಾದ ಮಿಶ್ರಣ ಕಾಯುತ್ತಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.
ದೇವತೆಗಳನ್ನೂ ನರಮನುಷ್ಯರಂತೆ ಬೈದಾಡಿಸಿ, ಸವತಿಯರಾದ ಪಾರ್ವತಿ, ದೇವೇರಿ ಚಾಮುಂಡಿಯರನ್ನು ಕಿತ್ತಾಡಿಸಿ, ನಂಜುಂಡನನ್ನು ಹೈರಾಣಾಗಿಸುತ್ತ್, ಪ್ರೇಕ್ಷಕರನ್ನೆಲ್ಲಾ ನಕ್ಕು ನಗಿಸುತ್ತಾ, ದೇವತೆಗಳಿಗಿಲ್ಲದ ಮೇಲು-ಕೀಳು, ಜಾತೀಯತೆ ನಮಗೇಕೆ ಎಂಬ ಸಂದೇಶ ಸಾರಿದ ನಾಟಕ ಚಾಮ ಚಲುವೆ, ಸಿಂಗಪುರದಲ್ಲಿ ಚಾಮುಂಡಿ ಬೆಟ್ಟ, ನಂಜನಗೂಡನ್ನು ತಂದು ತೋರಿಸಿ ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡಿತು.
ಮೈಸೂರು ಪ್ರಾಂತ್ಯದ ಜನಜೀವನದ ಆರಾಧ್ಯ ದೇವತೆಯಾದ ಚಾಮುಂಡೇಶ್ವರಿ ಹಾಗು ಸುತ್ತ ಪ್ರಚಲಿತವಿರುವ ಜಾನಪದ ಕಾವ್ಯವನ್ನು ಆಧರಿಸಿದ ಈ ದೃಷ್ಯಕಾವ್ಯ ಚಾಮ ಚೆಲುವೆ ಮಂಡ್ಯ ರಮೇಶ್ ನೇತೃತ್ವದ ತಂಡದವರ 101ನೇ ಪ್ರದರ್ಶನ, ಈ ಪ್ರದರ್ಶನ ಸಿಂಗಪುರದಲ್ಲಿ ನಡೆದದ್ದು ಸಿಂಗನ್ನಡಿಗರ ಭಾಗ್ಯ ಎನ್ನಬಹುದು.