ಬೇ ಏರಿಯಾದಲ್ಲಿ ನಾಟಕ ಚೈತ್ರದ ಎರಡು ನಾಟಕಗಳು
ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಈಗ ಕನ್ನಡ ನಾಟಕಗಳ ಸಂಭ್ರಮ. ನಾಟಕ ಚೈತ್ರದ ಏಳನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎರಡೆರಡು ನಾಟಕಗಳು ಅಮೆರಿಕದ ರಂಗಭೂಮಿಗೆ ಕಳೆತರಲಿವೆ. ಫೆ.11 ಮತ್ತು 12ರಂದು ಪ್ರದರ್ಶನವಿರಲಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಹವ್ಯಾಸಿ ರಂಗಕಲಾವಿದರು ಒಗ್ಗೂಡಿ ಕಟ್ಟಿದ ತಂಡವೇ "ನಾಟಕ ಚೈತ್ರ". ಈ ವರ್ಷ ನಾಟಕ ಚೈತ್ರ ತಂಡಕ್ಕೆ ಏಳು ವರ್ಷ ತುಂಬಿದ ಸಂಭ್ರಮ. ಸತತ ಐದನೆಯ ನಿರ್ಮಾಣ ಮತ್ತು ಪ್ರದರ್ಶನಕ್ಕೆ ಸಿದ್ಧವಾಗಿದೆ.
ಈ ತಂಡದ ಉದ್ದೇಶಗಳಲ್ಲಿ ಮುಖ್ಯವಾದವು ಎರಡು. ಮೊದಲನೆಯದು ಅಮೆರಿಕನ್ನಡಿಗರಿಗೆ ಉತ್ತಮ ಗುಣಮಟ್ಟದ ಕನ್ನಡ ನಾಟಕಗಳನ್ನು ಪ್ರಸ್ತುತಪಡಿಸಬೇಕೆನ್ನುವ ಅದಮ್ಯ ಬಯಕೆ ಹಾಗು ಪ್ರಾಮಾಣಿಕ ಪ್ರಯತ್ನ. ಎರಡನೆಯದು ಒಂದು ಸ್ವಯ೦ ಸೇವಕ ಸ೦ಸ್ಥೆಗೆ ಧನ ಸಹಾಯ ಮಾಡುವ ಸಾರ್ಥಕತೆ.
"ನಾಟಕ ಚೈತ್ರ" ಅಧಿಕೃತವಾಗಿ 501(c)(3) non-profit ಸಂಸ್ಥೆಯಾಗಿ ನೋಂದಾಣಿಕೆಯಾಗಿದ್ದು, ಇಡೀ ನಾಟಕ ಚೈತ್ರ ತಂಡಕ್ಕೆ ಈ ವರ್ಷದ ಮಹತ್ವದ ಮೈಲಿಗಲ್ಲು. ಇದು ನಾಟಕ ಚೈತ್ರ ತಂಡ ತನ್ನ ಪೂರ್ಣ ಪ್ರಮಾಣದ ಗುರಿ ಮತ್ತು ಸದುದ್ದೇಶಗಳನ್ನು ಮುಟ್ಟುವ ದಿಕ್ಕಿನಲ್ಲಿ ಮೊದಲ ಅಡಿಪಾಯ.
ಈ ಬಾರಿ ಎರಡು ನಾಟಕಗಳು ರಂಗಾಸಕ್ತರನ್ನು ತಣಿಸಲಿವೆ. ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದ ಎಲ್ಎಸ್ ಸುಧೀಂದ್ರ ಅವರ ಮಳೆ ದಂಡ ಮತ್ತು ಅಭಿಷೇಕ್ ಅಯ್ಯಂಗಾರ್ ರಚನೆಯ ಮಾಗಡಿ ಡೇಸ್. ಈ ನಾಟಕಗಳನ್ನು ಆಸ್ವಾದಿಸಲು ಸಿದ್ಧತೆ ಮಾಡಿಕೊಳ್ಳಿ.
ಅಶೋಕ ಉಪಾಧ್ಯ ನಿರ್ದೇಶನದ ಮಳೆ ದಂಡ
ಎಲ್.ಎಸ್. ಸುಧೀಂದ್ರರ "ಮಳೆ ದಂಡ" ಕನ್ನಡ ರಂಗಭೂಮಿಯಲ್ಲಿ ಒಂದು ಹೊಸ ದೃಷ್ಟಿಕೋನ ಹಾಗೂ ಆಯಾಮವನ್ನು ಸೃಷ್ಟಿಸಿದ ನಾಟಕ. ಈ ನಾಟಕದ ಸತ್ವ, ನಾಟಕದಲ್ಲಿ ಬರುವ ಪಾತ್ರ, ಸನ್ನಿವೇಶ ನಿಜ ಜೀವನಕ್ಕೆ ತೀರಾ ಹತ್ತಿರವಾದದ್ದಾದ್ದರಿಂದ ಪ್ರೇಕ್ಷಕರ ಮನ ಮುಟ್ಟುತ್ತದೆ. ಅಲ್ಲದೆ ಕೊನೆಯವರೆಗೂ ಉಳಿಯುವ ಕುತೂಹಲ, ಕೋರ್ಟ್ ರೂಮ್ ಸನ್ನಿವೇಶದಲ್ಲಿನ ಸಂವಾದ-ಸಂಭಾಷಣೆ, ಗಂಗಾಪ್ರವಾಹದಂತೆ ಗಂಭೀರವಾಗಿ ಹಂತ ಹಂತವಾಗಿ ಮುನ್ನಡೆಯುವ ವೇಗ ನಾಟಕದ ಪ್ರಭಾವವನ್ನು ಹೆಚ್ಚಿಸಿದೆ. ಅಣಕು ಕೋರ್ಟಿನಲ್ಲಿ ನಾಲ್ವರು ಗೆಳೆಯರ ಸಮ್ಮುಖದಲ್ಲಿ ಕಳಚಿ ಬೀಳುವ ಆರೋಪಿಯ ಮುಖವಾಡವೇ ನಾಟಕದ ಕಥಾವಸ್ತು. ಈ ನಾಟಕವನ್ನು ನಿರ್ದೇಶಿಸುತ್ತಿರುವುದು ಅಶೋಕ ಉಪಾಧ್ಯ.
ಅಭಿಷೇಕ್ ಅಯ್ಯಂಗಾರ್ ರಚನೆಯ ಮಾಗಡಿ ಡೇಸ್
ಸಾಫ್ಟ್ ವೇರ್ ಇಂಜಿನಿಯರ್ ಅನಂತ್ ಕೆಲಸ ಬಿಟ್ಟು ರಾಜಕಾರಣ ಸೇರಿ, ಮುಖ್ಯಮಂತ್ರಿಯಾಗಿ 'ಸ್ಪೆಂಡ್ ಲೆಸ್ ಗವರ್ಮೆಂಟ್ ' ಅಂತ ಕರೆಸಿಕೊಳ್ಳೋ ಯೋಜನೆಗಳನ್ನು ಜಾರಿಗೊಳಿಸಿ, ನಂತರ ಜನರಿಗೆ ಹತ್ತಿರವಾಗೋ ದೃಷ್ಟಿಯಿ೦ದ ರಾಜಕಾರಣದಲ್ಲಿ 'ಫೇಸ್ ಬುಕ್' ನ ಬಳಕೆ ಕಡ್ಡಾಯಗೊಳಿಸಲು ಹೋಗಿ ಅದರಿಂದ ಆವಾಂತರಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ಆ ಆವಾಂತರಗಳಿಗೆ 'ಅನಂತ'ನೇ ಕಾರಣವೇ ಅಥವಾ ಅನಂತನ ಹಿಂದಿರುವ ಅನೇಕರೇ? ಎನ್ನುವುದು ನಾಟಕದ ತಿರುಳು. ಈ ನಾಟಕದ ರಚನೆ ಅಭಿಷೇಕ್ ಅಯ್ಯಂಗಾರ್. ನಿರ್ದೇಶನ ಶರ್ಮಿಳ ವಿದ್ಯಾಧರ ಮತ್ತು ಅಭಿಷೇಕ್ ಅಯ್ಯಂಗಾರ್.
ಹಿಂದೆ ಪ್ರದರ್ಶನಗೊಂಡ ನಾಟಕಗಳು
ನಾಟಕ ಚೈತ್ರ ತಂಡ 2010ರಲ್ಲಿ ಟಿ. ಎನ್. ಸೀತಾರಾಮ್ ರವರ "ನಮ್ಮೊಳಗೊಬ್ಬ ನಾಜೂಕಯ್ಯ" ಮತ್ತು ಎಚ್ ದುಂಡಿರಾಜ್ ರವರ "ಕೊರಿಯಪ್ಪನ ಕೊರಿಯೋಗ್ರಫಿ" ನಾಟಕಗಳನ್ನು ಪ್ರದರ್ಶಿಸಿ, ಇದರಿಂದ ಸಂಗ್ರಹವಾದ ಮೊತ್ತವನ್ನು "ಮೈತ್ರಿ" ಸಂಸ್ಥೆಗೆ ಸಂದಾಯ ಮಾಡಿತ್ತು. 2012ರಲ್ಲಿ ಬಿ.ಆರ್.ಲಕ್ಷ್ಮಣ್ ರಾವ್ ರವರ "ನಂಗ್ಯಾಕೋ ಡೌಟು" ಮತ್ತು ಚಂದ್ರಶೇಖರ ಕಂಬಾರರ "ಸಾಂಬಶಿವ ಪ್ರಹಸನ" ನಾಟಕಗಳನ್ನು ಪ್ರಸ್ತುತಪಡಿಸಿ ಇದರಿಂದ ಸಂಗ್ರಹವಾದ ಮೊತ್ತವನ್ನು "Second Harvest Food Bank" ಮತ್ತು "OSAAT" ಸಂಸ್ಥೆಗಳಿಗೆ ಸಂದಾಯ ಮಾಡಿತ್ತು. (ಚಿತ್ರದಲ್ಲಿರುವವರು ಅಭಿಷೇಕ್ ಅಯ್ಯಂಗಾರ್)
'ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್'ಗೆ ದಾನ
2014ರಲ್ಲಿ ರಾಜೇಂದ್ರ ಕಾರಂತರ "ಮುದ್ದಣ್ಣನ ಪ್ರಮೋಷನ್ ಪ್ರಸಂಗ" ಮತ್ತು ಕೆ.ವಿ. ಅಕ್ಷರ ರವರ "ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ" ನಾಟಕಗಳನ್ನು ಪ್ರದರ್ಶಿಸಿ ಇದರಿಂದ ಸಂಗ್ರಹವಾದ ಮೊತ್ತವನ್ನು 'ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್'ಗೆ ದಾನ ಮಾಡಿತ್ತು. ಇನ್ನು 2016ರಲ್ಲಿ ರಾಜೇಂದ್ರ ಕಾರಂತರ "ಮರಣ ಮೃದಂಗ" ಮತ್ತು "ಮರಿಯಮ್ ಳ ಮೂರನೇ ಮದುವೆ" ಯಶಸ್ವೀ ನಾಟಕಗಳು ಪ್ರದರ್ಶನಗೊಂಡು ಸಂಗ್ರಹವಾದ ಮೊತ್ತವನ್ನು"OSAAT" ಸಂಸ್ಥೆಗೆ ಸಂದಾಯ ಮಾಡಿತ್ತು. (ರಾಜೇಂದ್ರ ಕಾರಂತ್ ಜೊತೆ ಅಶೋಕ ಉಪಾಧ್ಯಾಯ)
ನಾಟಕ ಚೈತ್ರದ ಬೆನ್ನುಲುಬಾಗಿರುವ ಸೌಜನ್ಯ ಕೇಣಿ
ನಾಟಕ ಚೈತ್ರದ ಬೆನ್ನುಲುಬಾಗಿರುವ ಸೌಜನ್ಯ ಕೇಣಿ, ಈ ಬಾರಿಯೂ ರಂಗ ಸಜ್ಜಿಕೆ ಹಾಗು ಗ್ರಾಫಿಕ್ಸ್ ಡಿಸೈನ್ ಗಳನ್ನು ನಿರ್ವಹಿಸುತ್ತಿದ್ದಾರೆ. ಫೆಬ್ರವರಿ 11, 12ರಂದು ಸಾಂಟಾ ಕ್ಲಾರದಲ್ಲಿ ಪ್ರದರ್ಶನವಾಗುತ್ತಿರುವ ಎರಡು ನಾಟಕಗಳನ್ನು ನೋಡಿ ಆನಂದಿಸಲು ವೆಬ್ ಸೈಟಿನಲ್ಲಿ ಇಂದೇ ಟಿಕೆಟ್ ಖರೀದಿ ಮಾಡಿ.