ಸಿಂಗಾಪುರದಲ್ಲಿ ಮಂಡ್ಯರಮೇಶ್ ತಂಡದಿಂದ ನಾಟಕ ಪ್ರದರ್ಶನ
ಸಿಂಗಾಪುರದ ಕನ್ನಡ ಸಂಘವು ಪ್ರತೀ ವರ್ಷ ಅದ್ಧೂರಿಯಾಗಿ ಆಯೋಜಿಸುವ 'ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ'ದಲ್ಲಿ ಮಂಡ್ಯರಮೇಶ್ ನೇತೃತ್ವದ ನಟನ ರಂಗಶಾಲೆಯ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಸಿಂಗಾಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್ ನಲ್ಲಿ ಅಕ್ಟೋಬರ್ 29 ಮತ್ತು 30ರಂದು ನಟನದ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಅಕ್ಟೋಬರ್ 29ರಂದು ಡಾ.ಸುಜಾತಾ ಅಕ್ಕಿ ಅವರ ಜಾನಪದ ಸೊಗಡಿನ ನಾಟಕ 'ಚಾಮಚಲುವೆ' ಪ್ರದರ್ಶನಗೊಳ್ಳಲಿದ್ದು, ಅಕ್ಟೋಬರ್ 30ರಂದು ಜ್ಞಾನಪೀಠ ಪುರಸ್ಕೃತ ವರಕವಿ ದ.ರಾ.ಬೇಂದ್ರೆ ಅವರ ಪ್ರಖ್ಯಾತ ವಿಡಂಬನೆಯಾದ 'ಸಾಯೋ ಆಟ' ಪ್ರದರ್ಶನಗೊಳ್ಳಲಿದೆ.
ಈ ಎರಡೂ ನಾಟಕಗಳನ್ನು ಮಂಡ್ಯ ರಮೇಶ್ ಅವರು ನಿರ್ದೇಶಿಸಿದ್ದು, ಅವರೊಂದಿಗೆ ಕಲಾವಿದರಾದ ಮೇಘ ಸಮೀರ, ರಾಮು ನಟನ, ರಾಗ್ ಅರಸ್, ದಿಶಾ ರಮೇಶ್, ಕಾವ್ಯಾ ರಾಜೇಂದ್ರ, ಛಾಯಾಶ್ರೀ ಮೈಸೂರು, ದೇವಾನಂದ ವರಪ್ರಸಾದ್ ಮತ್ತು ಸಿರೀಶ್ ಚಂದ್ರಶೇಖರ್ ಅವರು ಕೈಜೋಡಿಸಿದ್ದು, ಸಿಂಗಾಪುರಕ್ಕೆ ತೆರಳಲಿದ್ದಾರೆ.
ಕಳೆದ ಮೂವತ್ತು ವರ್ಷಗಳಲ್ಲಿ ರಂಗಾಯಣದ ನಂತರ ವಿದೇಶದಲ್ಲಿ ನಾಟಕ ಪ್ರದರ್ಶನ ನೀಡುತ್ತಿರುವ ಮೈಸೂರಿನ ಏಕೈಕ ತಂಡ ಎನ್ನುವ ಅಗ್ಗಳಿಕೆ ನಟನ ರಂಗಶಾಲೆಯದಾಗಿದೆ.