ಸಿಂಗಪುರದಲ್ಲಿ ಜ. 23ರಂದು ಸಂಗೀತದ 'ಲಯತರಂಗ'
ಸಿಂಗಪುರದಲ್ಲಿ ಕನ್ನಡ ಸಂಘವು ಅಧಿಕೃತವಾಗಿ ನೋಂದಾಯಿತವಾಗಿದ್ದು 1996ರಲ್ಲಿ. "ಪುಟ್ಟ ಕೆಂಪು ಚುಕ್ಕೆ" ಸಿಂಗಪುರದಲ್ಲಿ ನಮ್ಮ ಕನ್ನಡ ಸಂಘ 20ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮ, ಸಡಗರ. ಈ ಮೈಲಿಗಲ್ಲನ್ನು ಆಚರಿಸಲು ಕನ್ನಡ ಸಂಘ(ಸಿಂಗಪುರ)ವು 2016ರಲ್ಲಿ ವರ್ಷವಿಡೀ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ನಿಟ್ಟಿನಲ್ಲಿ 2016ರಲ್ಲಿ ಮೊಟ್ಟಮೊದಲ ಬೃಹತ್ ಕಾರ್ಯಕ್ರಮ "ಲಯತರಂಗ"ವನ್ನು ಜನವರಿ 23ನೇ ತಾರೀಖು ಶನಿವಾರದಂದು School Of The Arts (SOTA) ಸಂಗೀತ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಭಾರತದ ಸಂಗೀತ ತಂಡಗಳಲ್ಲಿ ಹಾಗೂ ಸುಪ್ರಸಿದ್ಧವಾಗಿರುವ ಅತ್ಯುತ್ಸಾಹೀ ತಂಡ ಲಯತರಂಗ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿಶ್ವದ ವಿವಿಧೆಡೆಗಳ ಸಂಗೀತದ ಸುಂದರ ಸಮ್ಮಿಶ್ರಣ ಮಾಡುವ ಮೂಲಕ ವಿಶ್ವ ಸಂಗೀತದ ಸಂಕೇತವಾಗಿರುವ ಈ ತಂಡದ ಕಲಾಕಾರರು: ರವಿಚಂದ್ರ ಕುಳುರು (ಕೊಳಲು), ಜಯಚಂದ್ರ ರಾವ್(ಮೃದಂಗ), ಗಿರಿಧರ್ ಉಡುಪ (ಘಟ), ಪ್ರಮಾಥ್ ಕಿರಣ್ (ಪರ್ಕಶನ್), ಮಥಿಯಾಸ್ ಮುಲ್ಲರ್ (ಗಿಟಾರ್) ಮತ್ತು ಅರುಣ್ ಕುಮಾರ್ (ಡ್ರಮ್ಸ್).
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಸಂಗೀತ ವಾದ್ಯಗಳ ಮೂಲಕ ವಿಖ್ಯಾತರಾಗಿರುವ ಈ ಸಂಗೀತಗಾರರು ಒಂದುಗೂಡಿ, ತಮ್ಮ ಶ್ರೀಮಂತ ಸಂಗೀತ ಜ್ಞಾನವನ್ನು ಬಳಸಿಕೊಂಡು ವಿಶಿಷ್ಟವಾದ ಸಂಗೀತಶೈಲಿಯನ್ನು ಹೊರತಂದಿದ್ದಾರೆ. ಕರ್ನಾಟಕ ಶೈಲಿಯ ಇಂಪಾದ, ಲಯಬದ್ಧ, ಕುತೂಹಲ ಕೆರಳಿಸುವ ಜಟಿಲ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಈ ತಂಡ ಉಲ್ಲಾಸಮಯ ಸಂಗೀತ ಶೈಲಿಯನ್ನು ನೀಡುತ್ತಿದೆ. ಅವರ ಈ ಪ್ರಯೋಗ ತಂಡಕ್ಕೆ ವಿಶ್ವದೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. [ಒಂಭತ್ತನೇ ಅಕ್ಕ ಕನ್ನಡ ಸಮ್ಮೇಳನಕ್ಕೆ ನೋಂದಣಿ ಆರಂಭ]
ಹಲವಾರು ಅಂತಾರಾಷ್ಟ್ರೀಯ ಸಂಗೀತ ಸಭೆಗಳಲ್ಲಿ ಭಾಗವಹಿಸಿರುವ 'ಲಯತರಂಗ' ತಂಡದ ಕಲಾವಿದರು ವಿಶ್ವವಿಖ್ಯಾತ ಪಾಶ್ಚಾತ್ಯ ಸಂಗೀತಗಾರರಾದ ಸ್ಟೀವ್ ಸ್ಮಿತ್, ಕರ್ಶ್ ಕಲೆ, ಲ್ಯಾರಿ ಕೋರ್ಯೆಲ್, ಜಾರ್ಜ್ ಬ್ರೂಕ್ಸ್ ಇನ್ನೂ ಮುಂತಾದವರೊಂದಿಗೆ ಮತ್ತು ಭಾರತದ ಸಂಗೀತ ಸಾಮ್ರಾಟರಾದ ಪಂಡಿತ್ ರವಿಶಂಕರ್, ಡಾ.ಎಂ. ಬಾಲಮುರಳಿಕೃಷ್ಣ, ಡಾ. ಎಲ್. ಸುಬ್ರಮಣಿಯಮ್, ಪಂಡಿತ್ ಜಸರಾಜ್, ಉಸ್ತಾದ್ ಅಮ್ಜದ್ ಅಲಿ ಖಾನ್, ಉಸ್ತಾದ್ ಝಾಕಿರ್ ಹುಸೇನ್, ಶಿವಮಣಿ, ಮ್ಯಾಂಡೊಲಿನ್ ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣಿಯಮ್, ಯೇಸುದಾಸ್, ಹರಿಹರನ್ ಮುಂತಾದವರೊಡನೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. [ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಕಿಚ್ಚುಹಚ್ಚಿದ ಸಂಗೀತ!]
ಈ ತಂಡದ ಕಲಾಕಾರರು ವೈಯುಕ್ತಿಕವಾಗಿ ಮತ್ತು ತಂಡ ಸಹಿತ ಅಮೆರಿಕಾ, ಕೆನಡಾ, ಜರ್ಮನಿ, ಯೂರೋಪಿನ ಹಲವಾರು ದೇಶಗಳು, ರಷ್ಯಾ, ಹಾಂಗ್ ಕಾಂಗ್, ಜಪಾನ್, ಮಲೇಶಿಯ, ಆಸ್ಟ್ರೇಲಿಯಾ, ನ್ಯೂಜಿಲಂಡ್, ದಕ್ಷಿಣ ಆಫ್ರಿಕ, ಶ್ರೀಲಂಕಾ, ಇಂಡೋನೇಶಿಯ ಇನ್ನೂ ಹಲವಾರು ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪೋಲೆಂಡಿನ ಗೌರವಾನ್ವಿತ "Krakow International Percussion Festival (2007)"ಗೆ ವಿಶೇಷ ಆಮಂತ್ರಣ ಪಡೆದ ಮೊಟ್ಟ ಮೊದಲ ಭಾರತೀಯ ಸಂಗೀತದ ತಂಡ ಲಯತರಂಗ.
ಇವರೊಂದಿಗೆ ಶಾಸ್ತ್ರೀಯ, ಜಾನಪದ ಮತ್ತು ಸಮಕಾಲೀನ ಸಂಗೀತದ ಮೂಲಕ ಸಿಂಗಪುರದ ಕಲಾಪ್ರೇಮಿಗಳನ್ನು ರಂಜಿಸಲು ಕರ್ನಾಟಕದ ಸುಪ್ರಸಿದ್ಧ ಹಿನ್ನೆಲೆ ಗಾಯಕಿ, ಕನ್ನಡ ಸುಗಮ ಸಂಗೀತ ಕಲಾವಿದೆ, ನಟಿ ಮತ್ತು ದೂರದರ್ಶನದ ಉದ್ಘೋಷಕಿ ಪಲ್ಲವಿ ಅರುಣ್ ಅವರು ಬರುತ್ತಿದ್ದಾರೆ. ಸುಮಾರು 7-8 ವರ್ಷಗಳ ಹಿಂದೆ ಕನ್ನಡ ಸಂಘದ ಆಹ್ವಾನದ ಮೇರೆಗೆ ಗಂಗಾವತಿ ಪ್ರಾಣೇಶ್ ಅವರೊಂದಿಗೆ ಪಲ್ಲವಿ ಮತ್ತು ಅರುಣ್ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಈ ಬಾರಿಯೂ ಅಂಥದೇ ಒಂದು ಮೋಡಿಗೆ ಕಲಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಕಾರ್ಯಕ್ರಮದ ಪ್ರಾಯೋಜಕರು KNS INFRASTRUCTURE Pvt. Ltd. Bangalore.
ಹೆಚ್ಚಿನ ವಿವರಗಳಿಗೆ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.
ಇನ್ನೇಕೆ ತಡ? ಸಿಂಗಪುರದಲ್ಲಿರುವ ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ, ಕಲಾಪ್ರೇಮಿಗಳಿಗೆ ಫೋನಾಯಿಸಿ. ಈ ಕಾರ್ಯಕ್ರಮಕ್ಕೆ ತಪ್ಪದೇ ಬರಲು ತಿಳಿಸಿ!