ಸಿಂಗಪುರದ 'ಕಲಾವೈಭವ'ದಲ್ಲಿ ಮೆರೆದ 'ಸಿಂಗಾರ ವೈಭವ'
ಸಿಂಗಪುರದ ಪ್ರತಿಷ್ಠಿತ ಕಲಾ ಸಂಸ್ಥೆ SIFAS (ಸಿಂಗಪುರ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ) ಗುರುವಾರದಿಂದ ಆರಂಭಿಸಿರುವ ಸಂಗೀತ ಮತ್ತು ನೃತ್ಯ ಕಲಾ ಸಮ್ಮೇಳನವಾದ "ಕಲಾವೈಭವ" ಏಪ್ರಿಲ್ 10ರವರೆಗೆ ಮುಂದುವರೆಯಲಿದ್ದು, ಇದರಲ್ಲಿ ಭಾಗವಹಿಸಿದ ಕನ್ನಡ ಸಂಘ (ಸಿಂಗಪುರ)ವು ನೆರೆದಿದ್ದ ಜನರನ್ನು ಮಂತ್ರಮುಗ್ದರನ್ನಾಗಿಸಿತು.
ಕರ್ನಾಟಕ ಸಂಗೀತ ಸಂಯೋಜಕರ ರಚನೆಗಳು, ಪಿಟೀಲು ವಾದನ ಹಾಗೂ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಅದ್ಭುತ ರಂಗಕಲೆ ಯಕ್ಷಗಾನದ ಒಂದು ಕಿರು ಪ್ರಸ್ತುತಿಯು ಕರ್ನಾಟಕ ಪರಂಪರೆಯನ್ನು ಪ್ರತಿಬಿಂಬಿಸಿತು.[ಸಿಂಗಪುರದಲ್ಲಿ 'ಕನ್ನಡ ಕಲಿ'ಯುತ್ತಿರುವ ಮಕ್ಕಳಿಗೆ ಅಭಿನಂದನೆ]
"ಕಲಾವೈಭವ"ದಲ್ಲಿ ನಡೆದ ವಿಭಿನ್ನ ಕಾರ್ಯಕ್ರಮಗಳು:
ಕಾರ್ಯಕ್ರಮದ ಪ್ರಾರಂಭದಲ್ಲಿ " ಸಪ್ತವಾಹಿನಿ" ತಂಡದ ವಿದುಷಿಯರಾದ ಡಾ. ಭಾಗ್ಯಮೂರ್ತಿ, ಅಶ್ವಿನಿ ಸತೀಶ್, ಶೋಭಾ ರಘು, ಶೃತಿ ಆನಂದ್, ಪ್ರತಿಮಾ ಬೆಳ್ಳಾವೆ, ಗೋಧಾ ಹಾಗು ರೂಪ ಶ್ರೀಕಾಂತ್ ರವರು ತಮ್ಮ ಗಾನ ರಸಧಾರೆ ಹರಿಸಿದರು.
ಶ್ರೀ ಮುತ್ತಯ್ಯ ಭಾಗವತರ ಕಮಾಚ್ ರಾಗ ಆದಿ ತಾಳ ದಲ್ಲಿ ಮಾತೆ ಮಲಯದ್ವಜ ಎಂಬ ದರುವರ್ಣ ಮತ್ತು 'ಸಿದ್ಧಿವಿನಾಯಕಂ' ಎಂಬ ಕೃತಿಯು ಸಮೂಹ ಗಾನದಲ್ಲಿ ಮೇಳೈಸಿತು. ಗೋದಾರವರು ಭಾಗವತರ ಮತ್ತೊಂದು ಕೃತಿಯಾದ 'ಅಂಬಾವಾಣಿ' ಯನ್ನು ಕೀರವಾಣಿ ರಾಗದಲ್ಲಿ ಪ್ರಸ್ತುತ ಪಡಿಸಿದರು.[ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ']
ಶೋಭಾ ರಘು ಅವರಿಂದ ಮೈಸೂರು ವಾಸು ದೇವಾಚಾರ್ಯರ 'ಪ್ರಣಮಾಮ್ಯಹಂ' ರಚನೆಯು ರಂಜನಿ ರಾಗದಲ್ಲಿ ಶಂಕರಾಭರಣ ರಾಗದಲ್ಲಿ ಅವರದೇ ವಿರಚಿತ 'ಸ್ಮರರಾಮ ಚಂದ್ರಮ್' ಡಾ.ಭಾಗ್ಯ ಮೂರ್ತಿಯವರ ಸಿರಿ ಕಂಠದಲ್ಲಿ ಮಧುರವಾಗಿ ಮೂಡಿಬಂದಿತು.
ಅಶ್ವಿನಿ ಸತೀಶ್ ಅವರು 'ಪ್ರಣತಾರ್ತಿ ಹರಮ್ ಭಜೆ ಶಂಕರಂ' ಕೃತಿಯನ್ನು ಝಂಝುಟಿ ರಾಗ ಖಂಡತ್ರಿಪುಟ ತಾಳದಲ್ಲಿ ಪ್ರಸ್ತುತಪಡಿಸಿದರು. ಮೈಸೂರು ಮಹಾರಾಜರ ವಿರಚಿತ 'ದುರ್ಗಾದೇವಿ ಸಂರಕ್ಷಮಾಂ' ಕೀರ್ತನೆಯನ್ನು ಶೃತಿ ಆನಂದ್ ಅವರು ಧರ್ಮಾವತಿ ರಾಗದಲ್ಲಿ ಸುಶ್ರಾವ್ಯಾವಾಗಿ ಹಾಡಿದರು.
ಬಿಲಹರಿ ರಾಗದಲ್ಲಿ ಮೈಸೂರು ವಾಸು ದೇವಾಚಾರ್ಯರ ಅತ್ಯಂತ ಜನಪ್ರಿಯ 'ಶ್ರೀ ಚಾಮುಂಡೇಶ್ವರಿ ಪಾಲಯಮಾಂ' ರಚನೆಯನ್ನು ರೂಪಾ ಶ್ರೀಕಾಂತ್ ರವರು ಹಾಡಿ ತಮ್ಮ ನೈಪುಣ್ಯತೆಯಿಂದ ಸಭಿಕರ ಮನ ಗೆದ್ದರು. ಪ್ರತಿಮಾ ಗಣೇಶ್ ರವರು ಹಿಂದೂಸ್ತಾನಿ ಶೈಲಿಯಲ್ಲಿ ವಾದಿರಾಜರ 'ಕಂಡೆ ಕಂಡೆನೋ ಕೃಷ್ಣ' ಎಂಬ ಕೃತಿಯನ್ನು ತಿಲಾಂಗ್ ರಾಗದಲ್ಲಿ ಹಾಡಿ ತಮ್ಮ ಪ್ರತಿಭೆಯನ್ನು ಮೆರೆದರು.
ಸಪ್ತವಾಹಿನಿ ಕಾರ್ಯಕ್ರಮವು ಕನಕದಾಸರ 'ಬಂದೆವಯ್ಯ ಗೋವಿಂದ ಸೆಟ್ಟಿ' ಹಾಗು ಮುತ್ತಯ್ಯ ಭಾಗವತರ ಹಮೀರ್ ಕಲ್ಯಾಣಿ ರಾಗದ ತಿಲ್ಲಾನ ಸಮೂಹ ಗಾಯನದೊಂದಿಗೆ ಮುಕ್ತಾಯಗೊಂಡಿತು. ಈ ಕಲಾವಿದರಿಗೆ ಮೃದಂಗದಲ್ಲಿ ಗುರು ಶ್ರೀ ಶ್ರೀಕಾಂತ, ತಬಲದಲ್ಲಿ ಗುರು ಶ್ರೀ ಸಂದೀಪ್ ಬ್ಯಾನರ್ಜಿ, ವಯೊಲಿನ್ ನಲ್ಲಿ ತೇಜಸ್ ಮಂಜುನಾಥ್ ಹಾಗು ತಂಬೂರಿಯಲ್ಲಿ ಶ್ರೀಮತಿ ಭಾರ್ಗವಿ ಆನಂದ್ ಮತ್ತು ಶ್ರೀಮತಿ ವಿನುತ ಭಟ್ ಸಹಯೋಗ ನೀಡಿದರು.[ನೋಡಿ : ಕನ್ನಡಿಗರು ಹೆಮ್ಮೆ ಪಡುವ ಚಿತ್ರಗಳಿವು]
ಕಾರ್ಯಕ್ರಮದ ಎರಡನೇ ಭಾಗದಲ್ಲಿ ಬೆಂಗಳೂರಿನ "ಬಾಸ್ಟನ್ ಬ್ರದರ್ಸ್"ಎಂದೇ ಪರಿಚಿತರಾಗಿರುವ ತೇಜಸ್ ಮತ್ತು ಪ್ರಣವ್ ಮಂಜುನಾಥ್ ಜೋಡಿಯು ತಮ್ಮ ಪಿಟೀಲು ವಾದನದಿಂದ ನೆರೆದಿದ್ದ ಸಂಗೀತ ಪ್ರೇಕ್ಷಕರನ್ನು ಭಕ್ತಿರಸದಲ್ಲಿ ತೇಲಿಸಿದರು.
ಈ ಯುವ ಸಹೋದರರು ಅಮೆರಿಕಾದ ಬಾಸ್ಟನ್ ನಲ್ಲಿ ಹುಟ್ಟಿ ಬೆಳೆದು ಪಿಟೀಲು ವಾದನದಲ್ಲಿ ಅಪಾರ ಪರಿಣಿತಿ ಹೊಂದಿದ್ದು 'ನಾದಚಿಂತಾಮಣಿ', 'ಪ್ರತಿಭಾಕಾಂಕ್ಷಿ' ಮುಂತಾದ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
"ಸಿಂಗಾರ ವೈಭವ"ದಲ್ಲಿ ಶ್ರೀಲೇಖ ಚಂದ್ರಶೇಖರ ಅವರು ಮಹಾಭಾರತದ ಸನ್ನಿವೇಶವನ್ನಾಧರಿಸಿದ ವರ್ಣರಂಜಿತ ಯಕ್ಷಗಾನ ಪ್ರಸಂಗದ ಕಿರುಪ್ರಸ್ತುತಿಯನ್ನು ಅತ್ಯದ್ಭುತವಾಗಿ ಪ್ರದರ್ಶಿಸಿದರು. 'ಕೊಳಲನೂದುತ ಬಂದ' ಮತ್ತು 'ಕೃಷ್ಣಾರ್ಜುನ ಕಾಳಗ' ಎಂಬ ಪ್ರಸಂಗದಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಶ್ರೀಲೇಖ ಅವರು ಪ್ರೇಕ್ಷಕರಿಗೆ ಕರ್ನಾಟಕದ ಕಲಾವೈಭವದಿಂದ ರಂಜಿಸಿದರು.
ವರದಿ
-
ಶ್ರೀವಿದ್ಯಾ
ವೆಂಕಟೇಶ್
ಛಾಯಾಚಿತ್ರ
-
ಗಿರೀಶ್
ಜಮದಗ್ನಿ