ಕೇಂಬ್ರಿಜ್ ಕನ್ನಡ ಬಳಗದ ರಾಜ್ಯೋತ್ಸವ- ದೀಪಾವಳಿ
"ಬಾಳುವುದೇತಕೆ ನುಡಿ ಎಲೆ ಜೀವ, ಸಿರಿಗನ್ನಡದಲಿ ಕವಿತೆಯ ಹಾಡೆ, ಸಿರಿಗನ್ನಡದೇಳಿಗೆಯನು ನೋಡೆ, ಕನ್ನಡ ತಾಯಿಯ ಸೇವೆಯ ಮಾಡೆ" ಎನ್ನುವ ಕು.ವೆಂ.ಪು ಅವರ ಕವಿತೆಯ ಸಾಲುಗಳಂತೆ ಕನ್ನಡಕ್ಕಾಗಿ ಕಟ್ಟಲಾಗಿರುವ ಕೇಂಬ್ರಿಜ್ ಕನ್ನಡ ಬಳಗದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿತ್ತು.
ಕೇಂಬ್ರಿಜ್ ನಗರದ ಪ್ರಾಥಮಿಕ ಶಾಲೆಯೊಂದರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಬಾಲವೃದ್ಧರಾದಿಯಾಗಿ ಇನ್ನೂರಕ್ಕೂ ಮಿಕ್ಕಿ ಜನ ಪಾಲ್ಗೊಂಡಿದ್ದು ವಿಶೇಷ ಕಳೆ ತಂದಿತ್ತು. ಪುಟಾಣಿ ಅನಘಾಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಹಾಡು, ನೃತ್ಯ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಿನಿಮಾ ಗೀತೆಗಳು, ಏಕಪಾತ್ರಾಭಿನಯ, ನಗೆ ನಾಟಕ, ಇತ್ಯಾದಿಗಳಿಂದ ತುಂಬಿ ಸಭಿಕರ ಮನಗೆದ್ಡಿತು.
ಕಡೆಯ ಒಂದು ಗಂಟೆ ವಿಜಯೀಂದ್ರ -ಶ್ರೀದೇವಿ ಅವರ ಯುಗಳ ಗಾಯನ ಮಧುರ ಗೀತೆಗಳಿಂದ ಕೇಳುಗರ ಮನತಣಿಸಿತು. 50ರ ದಶಕದಿಂದ ಇಂದಿನವರೆಗೂ ಅಷ್ಟೇ ಜನಪ್ರಿಯವಾಗಿರುವ ಪ್ರಸಿದ್ಧವಾದ ಹಾಡುಗಳನ್ನು ಹಾಡಿ ಎಲ್ಲರ ಮೈ ಮನಗಳನ್ನು ಕುಣಿಸಿದರು. [ಕನ್ನಡ ಕುರಿತು ಯುಕೆ ಕನ್ನಡತಿಯ ಲೇಖನ]
ಉತ್ತಮ ಊಟ-ಉಪಚಾರಗಳ ವ್ಯವಸ್ಥೆ, ಉತ್ಕೃಷ್ಟ ಧ್ವನಿ ವರ್ಧಕದ ಅನುಕೂಲ ಹಾಗೂ ಕಾರ್ಯಕರ್ತರ ತೆರೆಮರೆಯ ಶ್ರಮ ಈ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಿತೆಂದರೆ ಉತ್ಪೇಕ್ಷೆಯಲ್ಲ. ಡಾ. ಚಂದ್ರಪ್ಪ, ಡಾ.ವಿಜಯ ಲಕ್ಷ್ಮಿ, ಶಶಿಧರ, ವೆಂಕಟೇಶ್ ರಂಗನಾಥ್, ರವಿಕಿರಣ್ ಮಾನ್ಯ ಮತ್ತು ಹಲವರು ಈ ಕಾರ್ಯಕ್ರಮ ಹಾಗೂ ಕನ್ನಡ ಕೂಟದ ಬೆನ್ನೆಲುಬುಗಳು. ಶಶಿಧಾ ಸ್ವಾಗತ ಭಾಷಣ ಮಾಡಿದರು, ಅಪೂರ್ವ ಹಾಗು ಪ್ರಿಯ ಕಾರ್ಯಕ್ರಮ ನಿರೂಪಿಸಿದರೆ ಡಾ. ಚಂದ್ರಪ್ಪ ವಂದನಾರ್ಪಣೆ ಅರ್ಪಿಸಿದರು.
ಕೇಂಬ್ರಿಜ್ ಕನ್ನಡ ಬಳಗ ಅನೌಪಚಾರಿಕವಾಗಿ ಶುರುವಾಗಿದ್ದು 2014ರ ಏಪ್ರಿಲ್ ತಿಂಗಳಲ್ಲಿ. ನಂತರ ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ಕನ್ನಡ ಬಳಗ ತನ್ನ ಚಟುವಟಿಕೆ ಆರಂಭಿಸಿದೆ. ಬಳಗದಲ್ಲಿ ಸುಮಾರು 200 ಸದಸ್ಯರಿದ್ದಾರೆ.