ದೋಹಾದಲ್ಲಿ ಶ್ವೇತಾ ಶ್ರೀವಾತ್ಸವ್, ರಂಜಿಸಿದ ಸುಗಮ ಸಂಗೀತ
ಕತಾರ್ನ ದೋಹಾದಲ್ಲಿ ಕರ್ನಾಟಕ ಸಂಘ ಆಯೋಜಿಸಿದ್ದ ವನಿತಾ ಮತ್ತು ಮಕ್ಕಳ ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್, ಸುಗಮ ಸಂಗೀತ ಕಲಾಕಾರರಾದ ಪಂಚಮ್ ಹಳಬಂಡಿ, ರತ್ನಮಾಲಾ ಪ್ರಕಾಶ್, ವಾಣಿ ವಿಶ್ವನಾಥ್ ಭಾಗವಹಿಸಿದ್ದರು.
ಕರ್ನಾಟಕ ಸಂಘವು ಇತ್ತೀಚೆಗೆ ದೋಹಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ವನಿತಾ ಪ್ರತಿಭಾ ಸಂಭ್ರಮ ಹಾಗು ಮಕ್ಕಳ ಪ್ರತಿಭಾನೇಷ್ವಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ 'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಖ್ಯಾತಿಯ ಚಿತ್ರತಾರೆ ಶ್ವೇತಾ ಶ್ರೀವಾತ್ಸವ್ ಆಗಮಿಸಿದ್ದರು. ಜನಪ್ರಿಯ ಗಾಯಕರಾದ ರತ್ನಮಾಲಾ ಪ್ರಕಾಶ್, ಇಂದು ವಿಶ್ವನಾಥ್ ಹಾಗೂ ಪಂಚಮ್ ಹಳಿಬಂಡಿಯವರಿಂದ ಮಧುರಗೀತೆಗಳ ಭಾವಸಂಗಮದಲ್ಲಿ ಹೃದಯಂಗಮದ ಭಾವಗೀತೆಗಳು, ಜನಪ್ರಿಯ ಕನ್ನಡ ಮತ್ತು ಹಿಂದಿ ಚಲನಚಿತ್ರಗೀತೆಗಳು ಮನ ತಣಿಸಿದವು. [ವಿಮರ್ಶಕರ ಪ್ರಕಾರ 'ಗಯ್ಯಾಳಿಗಳು' ಗೆದ್ದುಬಿಟ್ಟರು ಕಣ್ರೀ.!]
ವನಿತೆಯರಿಗಾಗಿ ನಡೆದ ಫ್ಯಾಷನ್ ಶೋಗೆ ಹಿರಿಯ ಮಹಿಳೆಯೊಬ್ಬರು ವೇದಿಕೆ ಮೇಲೆ ನಡೆದು ಸಂಚಲನ ಮೂಡಿಸಿದರು. ನಂತರ ಅನೇಕ ವನಿತೆಯರು ವರ್ಣಮಯ ಸೀರೆ, ಉಡುಗೆ-ತೊಡುಗೆಗಳಲ್ಲಿ ವೇದಿಕೆಯಲ್ಲಿ ಹೆಜ್ಜೆ ಹಾಕಿ ಭರ್ತಿ ಚಪ್ಪಾಳೆ ಗಿಟ್ಟಿಸಿದರು.
ಕಿಕ್ಕಿರಿದ ಜನಸ್ತೋಮದೆದುರು ಶ್ವೇತಾ ಶ್ರೀವಾತ್ಸವ್, ರತ್ನಮಾಲಾ ಪ್ರಕಾಶ್, ಇಂದು ವಿಶ್ವನಾಥ್ ಹಾಗೂ ಪಂಚಮ್ ಹಳಿಬಂಡಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸನ್ಮಾನದ ನಂತರ, ಶ್ವೇತಾ ಮಾತನಾಡಿ ಸಂಘದ ಕೆಲಸವನ್ನು ಹೊಗಳಿದರು. ವನಿತೆಯರಿಗೆ ಕೆಲವು ಕಿವಿ ಮಾತನ್ನೂ ಹೇಳಿದರು. [ಕತಾರ್ ರಾಜ್ಯೋತ್ಸವಕ್ಕೆ ರಂಗು ತಂದ ರಂಗೇಗೌಡ, ಶಿವಣ್ಣ]
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಕತಾರಿನ ಎಂ.ಈ.ಎಸ್ ಭಾರತೀಯ ಶಾಲೆಯ ಉಪ ಪ್ರಾಂಶುಪಾಲರಾದ ಹಮೀದ ಖಾದರ್ ಅವರು ನಾರಿಯರು ಶಕ್ತಿಯುತವಾಗಲು ಕರೆ ನೀಡಿದರು. ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಅಡ್ಡಬರಬಾರದೆಂದರು.
ಮಕ್ಕಳಿಗೆ ಮತ್ತು ವನಿತೆಯರಿಗೆ ಏರ್ಪಡಿಸಿದ್ದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ , ಶೈಕ್ಷಣಿಕವಾಗಿ ಹಾಗು ಪಠ್ಯೇತರ ವಿಭಾಗದಲ್ಲಿ ಅತ್ಯುನ್ನತ ಸಾಧನೆಗೈದ ಏಳು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. [ಕತಾರ್ ಸಾಂಸ್ಕೃತಿಕ ಸಂಭ್ರಮದಲ್ಲಿ ತಾರೆ ಸುಧಾರಾಣಿ]
ಸಂಘದ ಅಧ್ಯಕ್ಷ, ಎಚ್.ಕೆ.ಮಧು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಡಾ. ರೋಹಿಣಿ ದೊರೆ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ, ಶಿಲ್ಪಾ ಶೆಟ್ಟಿ ವಂದಿಸಿದರು.