ಮದುವೆಯ ಸಂಭ್ರಮ, ಜಾನಪದ ನೃತ್ಯದ ಸೊಗಸು
ಸಿಂಗಪುರದಲ್ಲಿ ಏಪ್ರಿಲ್ 18ರ ಸಂಜೆ ಆಯೋಜಿಸಲಾಗಿದ್ದ ಹೊಸವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಕರ್ನಾಟಕದ ಮದುವೆಯ ಸಂಭ್ರಮ, ಜಾನಪದ ನೃತ್ಯದ ಸೊಗಸು, ಭಾವಗೀತೆಯ ಇಂಪು ಮತ್ತು ಕನ್ನಡದ ಕಂಪು, ಸಿಂಗಪುರದ ವಿವಿಧ ಸಮುದಾಯಗಳ ನಡುವೆ ಮೆರೆದು ತನ್ನತನವನ್ನು ಸಾರಿತ್ತು.
LISHA (Little India Shopkeepers and Heritage Association) ಆಯೋಜಿಸಿದ್ದ "Indian New Year - 2014"ನ ಸಂಭ್ರಮದಲ್ಲಿ ಕನ್ನಡ ಸಂಘ (ಸಿಂಗಪುರ)ವು ಭಾಗವಹಿಸಿತ್ತು. ಏಪ್ರಿಲ್ 18ರ ಸಂಜೆ 6.30ಕ್ಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿಂಗಪುರದ ಶಿಕ್ಷಣ ಸಚಿವರಾದ Mr. Heng Swee Keat ಅವರನ್ನು ಭಾರತದ ವಿವಿಧ ರಾಜ್ಯಗಳ ವಧು-ವರರ ವೇಷಭೂಷಣಗಳಿಂದ ಅಲಂಕೃತಗೊಂಡ ಪುಟಾಣಿಗಳು ವಾಲಗದ ಸಮೇತ ಸ್ವಾಗತಿಸಿದರು.
ಮದುವೆ ಮನೆಯಂತೆ ಅಲಂಕೃತಗೊಂಡಿದ್ದ ತಮ್ಮ ಮಳಿಗೆಗಳಿಗೆ ಕರೆದೊಯ್ದು ಮದುವೆಯಲ್ಲಿ ಬಳಸುವ ಸಾಮಗ್ರಿಗಳನ್ನು, ಕರಕುಶಲ ವಸ್ತುಗಳನ್ನು ಮತ್ತು ಅನುಸರಿಸುವ ಪದ್ಧತಿ ಹಾಗೂ ಶಾಸ್ತ್ರಗಳ ಪರಿಚಯ ಮಾಡಿಕೊಟ್ಟರು. ಕನ್ನಡ ಸಂಘದ ಪುಟಾಣಿಗಳಾದ ಮಾನ್ಯ ಹಾಗೂ ವೇದಜ್ಞ ನರಸಿಂಹ ಅವರು ವಧು-ವರರ ಅಲಂಕಾರದಲ್ಲಿ ಎಲ್ಲರ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಘದ ವತಿಯಿಂದ ಮಂತ್ರಿ ಮಹೋದಯರಿಗೆ ಗಂಧದ ಹಾರ ಹಾಗೂ ಮೈಸೂರು ಪೇಟವನ್ನು ಹಾಕಿ ಗೌರವಿಸಲಾಯಿತು. ಉದ್ಘಾಟನೆಯ ಸಮಾರಂಭದಲ್ಲಿ ಎಲ್ಲಾ ಸಂಘದ ಪ್ರತಿನಿಧಿಗಳು ಹಾಗೂ ಸುಂದರವಾಗಿ, ವಧು-ವರರಾಗಿ ಅಲಂಕೃತಗೊಂಡ ಎಲ್ಲಾ ಮಕ್ಕಳ ಸಮ್ಮುಖದಲ್ಲಿ ದೀಪ ಬೆಳಗುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವರ್ಷದ ಆಚರಣೆಯಲ್ಲಿ ವಿವಿಧ ಸಮುದಾಯಗಳಿಗೆ ಮಳಿಗೆಗಳನ್ನು ನೀಡಿ ಅಲ್ಲಿ "ಮದುವೆ" ವಿಷಯ ಆಧರಿಸಿ ತಮ್ಮ ಮಳಿಗೆಗಳನ್ನು ಅಲಂಕರಿಸಲು ಸೂಚನೆ ನೀಡಿತ್ತು. ಕನ್ನಡ ಸಂಘ (ಸಿಂಗಪುರ)ದ ಮಳಿಗೆಯನ್ನು ಸಾಂಪ್ರದಾಯಿಕವಾಗಿ ಸಿದ್ದಪಡಿಸಲು ಹಾಗೂ ಕರ್ನಾಟಕದಲ್ಲಿನ ಮೈಸೂರು ಪ್ರಾಂತ್ಯದ ಮದುವೆಯ ಪರಂಪರೆಯನ್ನು ಬಿಂಬಿಸುವಂತೆ ಹಗಲಿರುಳು ದುಡಿದ ಲಕ್ಷ್ಮಿ ಶ್ರೀ, ರಮೇಶ್ ವಿ.ಜಿ, ಸಂಧ್ಯಾ ರಾಮಪ್ರಸಾದ, ಅರ್ಚನ ಪ್ರಕಾಶ್, ಜಯಪ್ರಕಾಶ್, ಕವಿತಾ ರಾಘವೇಂದ್ರ, ಕನಕೇಶ್, ಸಾದ್ವಿ ಸಂಧ್ಯಾ ಮತ್ತು ಇತರ ಸ್ವಯಂ ಸೇವಕರ ಶ್ರಮ ಶ್ಲಾಘನೀಯ.
ಇದೇ ಸಂದರ್ಭದಲ್ಲಿ ನಡೆದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಸಂಘದಿಂದ ಕರ್ನಾಟಕದ "ಕಂಸಾಳೆ" ಜಾನಪದ ನೃತ್ಯವನ್ನು "ಉಘೇ..ಮಾತ್ ಮಲ್ಲಯ್ಯ" ಎನ್ನುವ ಹಾಡಿಗೆ ಸುನೀತ ಎನ್.ಎಮ್, ದೀಪಾಶ್ರೀ ಮಲ್ಲೇಶ್, ಕೆ.ಆರ್.ಆದಿತ್ಯಕುಮಾರ್, ನವೀನ್ ಹೆಗ್ಡೆ, ಚಿನ್ಮಯಾನಂದ ಉಪಾಧ್ಯಾಯ, ವಿಜಯ ಮಹಾಂತೇಶ್ ಶೀಗಿ ಅವರು ಸೊಗಸಾಗಿ ಪ್ರದರ್ಶಿಸಿದರು. ಕುಮಾರಿ. ಶೀತಲ್ ಭಾರದ್ವಾಜ್, ಶ್ರೀ ಲಕ್ಷ್ಮಿ ನಾರಾಯಣ ಭಟ್ಟರ "ತಾಯೇ ನಿನ್ನ ಪ್ರೀತಿಯ ಬಾಗಿನ..." ಎಂಬ ಭಾವಗೀತೆಯನ್ನು ಸುಮಧುರವಾಗಿ ಹಾಡಿ ಸಭಿಕರನ್ನು ರಂಜಿಸಿದರು.