ಐರಿಶ್ ಕನ್ನಡಿಗರ ಸಂಗೀತ ಸಂಜೆ 'ಇಂಚರ'
ಬೆಂಗಳೂರಿನಿಂದ ಬಂದಿದ್ದ ಆ ಇಬ್ಬರು ಸಂಗೀತಗಾರರು ಒಂದಾದಮೇಲೊಂದಂತೆ ಕನ್ನಡ ಮತ್ತು ಹಿಂದಿ ಚಿತ್ರರಂಗದ ಅದ್ಭುತ ಗೀತೆಗಳನ್ನು ಹಾಡುತ್ತಿದ್ದರೆ, ಐರಿಶ್ ಕನ್ನಡಿಗರಲ್ಲಿ ಉತ್ಸಾಹದ ಬುಗ್ಗೆ ಉಕ್ಕಿ ಹರಿದಿತ್ತು. ಪ್ರತಿಯೊಂದು ಹಾಡಿಗೂ ಲಯಬದ್ಧವಾಗಿ ಕುಣಿಯುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು.
ಮೇ ತಿಂಗಳಲ್ಲಿ ಐರಿಶ್ ಕನ್ನಡಿಗರ ಸಂಘ ಆಯೋಜಿಸಿದ್ದ 'ಇಂಚರ' ಸಂಗೀತ ಕಾರ್ಯಕ್ರಮ ಕನ್ನಡಿಗರಲ್ಲಿ ನವೋತ್ಸಾಹ ತುಂಬಿತು. ರಿಪಬ್ಲಿಕ್ ಆಫ್ ಐರ್ಲೆಂಡ್ನ ಡಬ್ಲಿನ್ ನಲ್ಲಿರುವ ವಾಕಿನ್ಸ್ಟೌನ್ ಸ್ಪೋರ್ಟ್ಸ್ ಮತ್ತು ಅಥ್ಲೆಟಿಕ್ ಅಸೋಸಿಯೇಷನ್ ನ ಮೋರನ್ ಕಮ್ಯೂನಿಟಿ ಹಾಲ್ನಲ್ಲಿ 'ಇಂಚರ' ಯಶಸ್ಸಿನ ಹಾಡು ಹಾಡಿತು.
ಬೆಂಗಳೂರಿನಿಂದ ಬಂದಿದ್ದ ಸಂಗೀತಗಾರರಾದ ಸಂಗೀತಾ ರಾಜೀವ್ ಮತ್ತು ಸಾಗರ್ ಗುರುರಾಜ್ ಅವರು ಕೇಳುಗರನ್ನು ಮೋಡಿ ಮಾಡಿದರು. ಮಾಧುರ್ಯ ತುಂಬಿದ ಹೊಸ ಮತ್ತು ಹಳೆ ಹಾಡುಗಳು ಕೇಳುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು, ದೈನಂದಿನ ಜೀವನವನ್ನು ಮರೆಸಿ ಹೊಸ ಲೋಕಕ್ಕೆ ಕೊಂಡೊಯ್ದವು.
ಡಬ್ಲಿನ್ ಮತ್ತು ಸುತ್ತಲಿನ ನಗರಗಳಿಂದ 100ಕ್ಕೂ ಹೆಚ್ಚು ಕನ್ನಡ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದವು. ಹಿರಿಯರು, ಮಧ್ಯ ವಯಸ್ಕರು, ಮಕ್ಕಳು ಸಖತ್ ಎಂಜಾಯ್ ಮಾಡಿದರು. ಕರ್ನಾಟಕದ ಸಂಸ್ಕೃತಿಯನ್ನು ಉಳಿಸುವ ಮತ್ತು ಯುವಜನತೆಯಲ್ಲಿ ಬಿತ್ತುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ಐರಿಶ್ ಕನ್ನಡಿಗರ ಸಂಘ ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ.
ಸಂಗೀತಾ ರಾಜೀವ್ ಮತ್ತು ಸಾಗರ್ ಗುರುರಾಜ್ ಅವರು ಡಬ್ಲಿನ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮುನ್ನ ಲಂಡನ್ ಮತ್ತು ಮ್ಯಾಂಚೆಸ್ಟರ್ ನಲ್ಲಿಯೂ ಸಂಗೀತ ಸುಧೆ ಹರಿಸಿದ್ದರು. ಅಂದ ಹಾಗೆ, ಈ ವರ್ಷದ ಸೂಪರ್ ಹಿಟ್ ಸಿನೆಮಾ ಎನಿಸಿರುವ, ಶ್ರೀಮುರುಳಿ ಅಭಿನಯಿಸಿರುವ 'ಉಗ್ರಂ' ಚಲನಚಿತ್ರ ಜೂನ್ 8ರಂದು ಡಬ್ಲಿನ್ ನಲ್ಲಿ ಪ್ರದರ್ಶಿಸಲಾಯಿತು.