ಲಂಡನ್ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ನಿಂದ ಅಂಬೇಡ್ಕರ್ ಜನ್ಮದಿನಾಚರಣೆ
ಲಂಡನ್ ನಲ್ಲಿ ಏಪ್ರಿಲ್ 14ರಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ನಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಭಾರತದ ಸಂವಿಧಾನ ರಚನೆಯ ಪ್ರಧಾನ ವ್ಯಕ್ತಿಗೆ ಗೌರವ ಸಲ್ಲಿಸಲಾಯಿತು.
ಲಂಡನ್, ಏಪ್ರಿಲ್ 15: ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಲಂಡನ್ ನ ಥೇಮ್ಸ್ ನದಿಯ ತೀರದಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ನಿಂದ ಏಪ್ರಿಲ್ 14ರಂದು ಆಚರಿಸಲಾಯಿತು. ಬಸವೇಶ್ವರ ಪುತ್ಥಳಿ ಬಳಿ ಜಯಂತಿ ಕಾರ್ಯಕ್ರಮವನ್ನು ಆಚರಿಸಿದ್ದು ವಿಶಿಷ್ಟವಾಗಿತ್ತು.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದ್ದ ಇಬ್ಬರು ಮಹಾನ್ ಚೇತನಗಳ ಮುಖಾಮುಖಿಯಂತಿ ಈ ಕಾರ್ಯಕ್ರಮವಿತ್ತು. ಭಾರತದಲ್ಲಿ ಅಸ್ಪೃಶ್ಯತೆ ಹಾಗೂ ಶೋಷಣೆ ವಿರುದ್ಧ ಧ್ವನಿ ಎತ್ತಿ ಹೋರಾಡಿದ ವ್ಯಕ್ತಿಗಳು ಬಸವೇಶ್ವರ ಹಾಗೂ ಅಂಬೇಡ್ಕರ್. ಪ್ರಜಾಪ್ರಭುತ್ವದ ಆಲೋಚನೆಯನ್ನು ಹನ್ನೆರಡನೇ ಶತಮಾನದಲ್ಲೇ ಬಿತ್ತಿದ್ದವರು ಬಸವಣ್ಣ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂದು ಕೊಂಡಾಡಲಾಯಿತು.[ಲಂಡನ್ ನಲ್ಲಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದ ಗೃಹಸಚಿವ ಪರಮೇಶ್ವರ]
ಅಂದಹಾಗೆ ಇಲ್ಲಿನ ಬಸವೇಶ್ವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಅದರಲ್ಲೂ ಬ್ರಿಟಿಷ್ ಪಾರ್ಲಿಮೆಂಟ್ ಸುತ್ತಮುತ್ತಲಲ್ಲಿ ಪುತ್ಥಳಿ ಸ್ಥಾಪನೆಗೆ ಬ್ರಿಟಿಷ್ ಸಂಸತ್ ನಿಂದ ಅನುಮತಿ ಪಡೆದಿದ್ದು ಸಹ ಇದೇ ಮೊದಲು. ಇನ್ನು ಲಂಡನ್ ನಲ್ಲಿ ಅಂಬೇಡ್ಕರ್ ಉಳಿದುಕೊಂಡಿದ್ದ ಮನೆಯನ್ನು ಮಹಾರಾಷ್ಟ್ರ ಸರಕಾರ ಸಂಗ್ರಹಾಲಯವಾಗಿ ಪರಿವರ್ತಿಸಿದೆ.
ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.