ಎಚ್ಎಸ್ ಶಿವಪ್ರಕಾಶ್ ಅವರಿಗೆ ದುಬೈ 'ಧ್ವನಿ ಶ್ರೀರಂಗ' ಪ್ರಶಸ್ತಿ
ದುಬೈ, ಸೆ. 23 : 'ಮಹಾಚೈತ್ರ', 'ಮಂಟೆಸ್ವಾಮಿ ಕಥಾಪ್ರಸಂಗ' ಮುಂತಾದ ಪ್ರಸಿದ್ಧ ನಾಟಕಗಳನ್ನು ರಚಿಸಿರುವ ಖ್ಯಾತ ಕನ್ನಡ ನಾಟಕಕಾರ, ಕವಿ, ವಿಮರ್ಶಕ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರು ಧ್ವನಿ ಪ್ರತಿಷ್ಠಾನದ ಪ್ರಸ್ತುತ ವರ್ಷದ ಪ್ರತಿಷ್ಠಿತ 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಧ್ವನಿ ಪ್ರತಿಷ್ಠಾನ 2007ರಿಂದ ಪ್ರತಿವರ್ಷ ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡುತ್ತ ಬಂದಿದೆ. ದುಬೈನ ಸರಕಾರಿ ಸಾಮ್ಯದ ಆಲ್ ನಾಸರ್ ಲೀಜರ್ ಲ್ಯಾಂಡ್ ನ ಅಲ್ ನಶ್ವರ್ ಸಭಾಗೃಹದಲ್ಲಿ ಶುಕ್ರವಾರ, ಸೆ.26ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಶಿವಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ನಾಟಕಕಾರ, ಕವಿ ಜಯಂತ್ ಕಾಯ್ಕಿಣಿ ವಿರಚಿತ 'ನಿನ್ನ ಅಮೃತಾ' ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೇಳಿಕೊಂಡಿದ್ದಾರೆ.
ಶಿವಪ್ರಕಾಶ್ ಬಗ್ಗೆ : ನಾಟಕಕಾರ, ಕವಿ, ವಿಮರ್ಶಕರಾಗಿ ಹೆಸರು ಪಡೆದಿರುವ ಹಲಕುಂಟೆಮಠ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ್ (ಎಚ್ಎಸ್ ಶಿವಪ್ರಕಾಶ್) ಅವರು 1986ರಲ್ಲಿ 'ಮಹಾಚೈತ್ರ' ನಾಟಕವನ್ನು ಕನ್ನಡ ರಂಗಭೂಮಿಗೆ ನೀಡಿದರು. ಇವರ ಹನ್ನೆರಡು ನಾಟಕಗಳು, ಏಳು ಕವನ ಸಂಕಲನಗಳು ಹಾಗು ಹಲವಾರು ವಿವಿಧ ಪ್ರಕಾರದ ಬರಹಗಳ ಸಂಕಲನಗಳು ಪ್ರಕಟಗೊಂಡಿವೆ.
ಇವರ ನಾಟಕಗಳು ಇಂಗ್ಲಿಷ್ ಮತ್ತು ಭಾರತದ ಹೆಚ್ಚಿನ ಎಲ್ಲಾ ಭಾಷೆಗಳಲ್ಲದೆ, ಫ್ರೆಂಚ್, ಇಟಾಲಿಯನ್, ಸ್ಪಾನಿಶ್, ಜರ್ಮನ್ ಭಾಷಿಗಳಿಗೂ ಅನುವಾದಗೊಂಡು ಪ್ರದರ್ಶಿಸಲ್ಪಟ್ಟಿರುವುದು ಹೆಗ್ಗಳಿಕೆಯ ಸಂಗತಿ. ವಚನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಬಗ್ಗೆಯೂ ಅವರು ಅಧಿಕಾರಯುತವಾಗಿ ಬರೆದಿದ್ದಾರೆ.
ಪ್ರಾಚಾರ್ಯರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಎಚ್.ಎಸ್. ಶಿವಪ್ರಕಾಶ್ ಅವರು ಸದ್ಯ ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕಲೆ ಮತ್ತು ಸೌಂದರ್ಯಶಾಸ್ತ್ರ ಶಾಲೆಯ, ರಂಗಭೂಮಿ ಮತ್ತು ಅಭಿನಯ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿರುವರು. ಹಾಗೂ ಬರ್ಲಿನ್ ನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ರಿಲೇಷನ್ ಶಿಪ್ ನ ಠಾಗೂರ್ ಸೆಂಟರ್ ನ ನಿರ್ದೇಶಕರಾಗಿದ್ದಾರೆ.